ತುಮಕೂರು
ತುಮಕೂರು ನಗರದ ಮರಳೂರು ದಿಣ್ಣೆ ಪ್ರದೇಶದಲ್ಲಿ ಬುಧವಾರ ರಾತ್ರಿ ದಿಢೀರನೆ ಉದ್ಭವಿಸಿದ್ದ ಉದ್ವಿಗ್ನ ಸ್ಥಿತಿ ಗುರುವಾರ ಶಮನಗೊಂಡಿದೆ. ಬಡಾವಣೆ ತುಂಬ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಗುರುವಾರ ಪರಿಸ್ಥಿತಿ ಶಾಂತವಾಗಿದೆಯಲ್ಲದೆ ನಿಯಂತ್ರಣಕ್ಕೂ ಬಂದಿದೆ.
ಬುಧವಾರ ರಾತ್ರಿ ಮರಳೂರು ದಿಣ್ಣೆಯಲ್ಲಿ ಜಾಡಾಳಮ್ಮ ಮತ್ತು ಮುತ್ತುಮಾರಿಯಮ್ಮ ಜಾತ್ರೆ ಸಂದರ್ಭದಲ್ಲಿ ದಿಢೀರನೆ ವಿವಾದ ತಲೆಯೆತ್ತಿ, ಇಡೀ ಬಡಾವಣೆ ಉದ್ವಿಗ್ನಗೊಂಡಿತು. ಜಾತ್ರೆಯ ಮೆರವಣಿಗೆಯು ಇಲ್ಲಿನ ಪ್ರಾರ್ಥನಾ ಮಂದಿರದ ಮುಂದೆ ಹಾದುಹೋಗುವಾಗ ಡಿಜೆ ಸೇರಿದಂತೆ ಭಾರಿ ಶಬ್ದ ಉಂಟಾಗುತ್ತಿದ್ದುದಕ್ಕೆ ಇನ್ನೊಂದು ಗುಂಪಿನಿಂದ ತೀವ್ರ ವಿರೋಧ ವ್ಯಕ್ತವಾಯಿತೆಂಬುದೇ ಈ ಎಲ್ಲ ವಿವಾದಕ್ಕೆ ಕಾರಣವಾಯಿತೆನ್ನಲಾಗಿದೆ.
ಮಾತಿನ ಚಕಮಕಿಯು ಕೈಕೈ ಮಿಲಾಯಿಸುವ ಹಂತ ತಲುಪಿದೆ. ಪರಿಣಾಮವಾಗಿ ಶರತ್ ಎಂಬ ಸ್ಥಳೀಯ ಯುವಕ ಹಾಗೂ ಆತನ ಕುಟುಂಬದ ಸದಸ್ಯರುಗಳ ಮೇಲೆ ಇನ್ನೊಂದು ಗುಂಪು ಹಲ್ಲೆ ಮಾಡಿದೆ. ಕಲ್ಲೆಸೆತ ಸಹ ಉಂಟಾಗಿದೆ. ಇಲ್ಲಿ ಕರ್ತವ್ಯನಿರತರಾಗಿದ್ದ ತಿಲಕ್ಪಾರ್ಕ್ ಠಾಣೆಯ ಪೊಲೀಸ್ ರವಿ ಎಂಬುವವರು ಗಾಯಗೊಂಡಿದ್ದಾರೆ. ಪೊಲೀಸ್ ವಾಹನ ಜಖಂಗೊಂಡಿದೆ ಎಂದು ಹೇಳಲಾಗಿದೆ.
ಬುಧವಾರ ಸಂಜೆ ಜಾತ್ರೆ ಸಹಜವಾಗಿಯೇ ನಡೆಯುತ್ತಿತ್ತು. ಆದರೆ ರಾತ್ರಿ ಸುಮಾರು 9-30 ರಲ್ಲಿ ಮೆರವಣಿಗೆ ಬರುವಾಗ ವಿವಾದ ತಲೆಯೆತ್ತಿದೆ. ಇಲ್ಲಿನ ಪ್ರಾರ್ಥನಾ ಮಂದಿರದ ಎದುರು ಡಿಜೆ ಮೊದಲಾದ ಶಬ್ದ ಮಾಡಬಾರದೆಂದೂ, ಇದರಿಂದ ಪ್ರಾರ್ಥನೆಗೆ ಅಡಚಣೆ ಆಗುವುದೆಂದೂ ಇನ್ನೊಂದು ಗುಂಪಿನಿಂದ ಆಕ್ಷೇಪ ವ್ಯಕ್ತವಾಗಿದೆ. ಅಲ್ಲಿಂದ ವಾಗ್ವಾದ ಹಾಗೂ ವಿವಾದ ಆರಂಭವಾಗಿದೆ. ಮಾತಿನ ಚಕಮಕಿಯು ಘರ್ಷಣೆಯ ಹಂತಕ್ಕೆ ತಲುಪಿದೆ.
ಅದೇ ಸಮಯದಲ್ಲಿ ಇನ್ನೊಂದು ಕೋಮಿನವರು ಶವವನ್ನು ಹೊತ್ತುತರುವಾಗ ಆ ಗುಂಪಿನಲ್ಲಿದ್ದ ವ್ಯಕ್ತಿ ಮತ್ತು ಪೊಲೀಸರ ನಡುವೆಯೂ ವಾಗ್ವಾದ ಆಗಿದ್ದು, ಅದೂ ಸಹ ಇಲ್ಲಿನ ಪರಿಸ್ಥಿತಿಯನ್ನು ಗೊಂದಲಗೊಳಿಸಿದೆ. ಆಗ ಪೊಲೀಸರು ತಕ್ಷಣವೇ ಬಿಗಿ ಬಂದೋಬಸ್ತ್ ಮಾಡಿದ್ದರಿಂದ ಪರಿಸ್ಥಿತಿಯು ನಿಯಂತ್ರಣಕ್ಕೆ ಬಂದಿದೆ.
ಮರಳೂರು ದಿಣ್ಣೆ ಬಡಾವಣೆಯ ಎಲ್ಲೆಡೆ ಖಾಕಿ ಭದ್ರತೆ ಹಾಕಲಾಗಿದೆ. ಜಿಲ್ಲಾದ್ಯಂತದಿಂದ ಪೊಲೀಸ್ ಅಧಿಕಾರಿಗಳನ್ನು ಮತ್ತು ಸಿಬ್ಬಂದಿಯನ್ನು ಇಲ್ಲಿಗೆ ನಿಯೋಜಿಸಲಾಗಿದೆ. ಇಲ್ಲಿನ ಎಲ್ಲ 14 ಕ್ರಾಸ್ಗಳಲ್ಲೂ ಪೊಲೀಸರು ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದಾರೆ. 10 ಕ್ಕೂ ಅಧಿಕ ಪೊಲೀಸ್ ವಾಹನಗಳಿವೆ. ಬುಧವಾರ ರಾತ್ರಿಯಿಂದಲೇ ಪೊಲೀಸರು ಕಟ್ಟೆಚ್ಚರ ವಹಿಸಿದ್ದರಿಂದ ಪರಿಸ್ಥಿತಿ ಶಾಂತವಾಗಿದೆ.
ಸಂಘಟನೆ ಕಾರಣ ಹಲ್ಲೆ
“ನಾನು ಬಜರಂಗದಳ ಸಂಘಟನೆಯಲ್ಲಿ ಸಕ್ರಿಯನಾಗಿದ್ದೇನೆ. ಅದನ್ನೇ ಗುರಿಯನ್ನಾಗಿಟ್ಟುಕೊಂಡು ನನ್ನ ಮೇಲೆ ಹಲ್ಲೆ ಮಾಡಲಾಗಿದೆ. ಕಳೆದ 42 ವರ್ಷಗಳಿಂದ ನಾವಿಲ್ಲಿ ಜಾತ್ರೆ ಮಾಡುತ್ತಿದ್ದೇವೆ. ಹಿಂದೆಂದೂ ಇಲ್ಲದ ಸಮಸ್ಯೆಯನ್ನು ಈಗ ಹುಟ್ಟುಹಾಕಲಾಗಿದೆ. ಅಲ್ಲದೆ ಪ್ರಾರ್ಥನಾ ಮಂದಿರದಲ್ಲಿ ಪ್ರಾರ್ಥನೆ ಮುಗಿದ ಅರ್ಧ ಗಂಟೆಯ ನಂತರವಷ್ಟೇ ಈ ಮೆರವಣಿಗೆ ಬರುತ್ತಿತ್ತು. ಆಗ ಇದಕ್ಕೆ ವಿರೋಧಿಸಲಾಗಿದೆ. ನನ್ನನ್ನಷ್ಟೇ ಅಲ್ಲದೆ ನನ್ನ ಕುಟುಂಬದ ಸದಸ್ಯರುಗಳ ಮೇಲೂ ಗುಂಪೊಂದು ಹಲ್ಲೆ ಮಾಡಿದೆ” ಎನ್ನುತ್ತಾರೆ ಇಲ್ಲಿನ ನಿವಾಸಿ ಹಾಗೂ ಬಜರಂಗದಳದ ಕಾರ್ಯಕರ್ತ ಶರತ್ ಎಂಬ ಯುವಕ.
“ಇಲ್ಲಿನ ಮಹಿಳಾ ಕಾರ್ಪೋರೇಟರ್ ಅವರ ಪತಿಯೇ ಇಲ್ಲಿನ ಎಲ್ಲ ಘಟನೆಗಳಿಗೆ ಕಾರಣರಾಗಿದ್ದಾರೆ” ಎಂದೂ ಶರತ್ ಆರೋಪಿಸುತ್ತಾರೆ. ಇದಕ್ಕೆ ಬೆಂಬಲವಾಗಿ ಮಾತನಾಡುವ ಬಜರಂಗದಳದ ಮುಖಂಡ ಚಂದ್ರಶೇಖರ್, “ರಸ್ತೆಯಲ್ಲಿ ಮೆರವಣಿಗೆ ಮಾಡುವುದನ್ನು ವಿರೋಧಿಸುತ್ತಾರೆಂದರೆ,ನಾವು ಯಾವ ದೇಶದಲ್ಲಿದ್ದೇವೆ?” ಎಂದು ಪ್ರಶ್ನಿಸಿದ್ದಾರೆ.
ಹೊರಗಿನವರಿಂದ ಅಶಾಂತಿ
ಮರಳೂರು ದಿಣ್ಣೆಯ ಪ್ರಮುಖ ವ್ಯಕ್ತಿ ಮಹಮದ್ ಇಸ್ಮಾಯಿಲ್ (ಇಲ್ಲಿನ ಕಾರ್ಪೋರೇಟರ್ ನಾಜಿಮಾಬಿ ಅವರ ಪತಿ) ಅವರು “ಈ ಬಡಾವಣೆಯಲ್ಲಿ ಎಲ್ಲರೂ ಸಹೋದರರಂತೆ ವಾಸಿಸುತ್ತಿದ್ದಾರೆ. ಪರಸ್ಪರ ಮನೆಗಳಿಗೆ ತೆರಳಿ ಊಟ ಮಾಡುತ್ತಾರೆ. ಆದರೆ ಇಲ್ಲಿನ ಕೆಲವು ಹುಡುಗರು ಹಾಗೂ ಯಾರೋ ಹೊರಗಿನವರು ಇಲ್ಲಿ ಅಶಾಂತಿ ಮೂಡಿಸುತ್ತಿದ್ದಾರೆ” ಎಂದು ಆರೋಪಿಸಿದ್ದಾರಲ್ಲದೆ, “ಇಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.
“ನಿನ್ನೆ ಇಲ್ಲಿ ಉದ್ವಿಗ್ನ ವಾತಾವರಣ ಉಂಟಾದಾಗ, ಪೊಲೀಸರು ಸಕಾಲಕ್ಕೆ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ” ಎಂದು ಅಭಿಪ್ರಾಯಪಟ್ಟರು.ಸ್ಥಳೀಯ ನಿವಾಸಿ ಚಾಂದ್ಪಾಷ ಅವರು “ನಾವೆಲ್ಲರೂ ಇಲ್ಲಿ ಅಣ್ಣತಮ್ಮಂದಿರಂತೆ ಇದ್ದೇವೆ. ಪರಸ್ಪರ ನಾವು ಮನೆಗಳಿಗೆ ಹೋಗಿ ಊಟ ಮಾಡುತ್ತೇವೆ. ನಿನ್ನೆ ಇಲ್ಲಿ ಜಾತ್ರೆ ಅಂಗವಾಗಿ ನಡೆದ ಅನ್ನಸಂತರ್ಪಣೆಗೂ ನಾವೆಲ್ಲ ಹೋಗಿ ಪ್ರಸಾದವನ್ನು ಪಡೆದಿದ್ದೇವೆ. ಕಳೆದ 40 ವರ್ಷಗಳಿಂದ ಇಲ್ಲದಿದ್ದ ಸಮಸ್ಯೆಯನ್ನು ಈಗ ಹುಟ್ಟುಹಾಕಲಾಗಿದೆ. ಹೊರಗಿನವರ ಕೈವಾಡದಿಂದ ಸಣ್ಣ ವಿಚಾರವನ್ನು ದೊಡ್ಡದು ಮಾಡಲಾಗಿದೆ” ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
