ದಾವಣಗೆರೆ :
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲೆಯ ವಿ.ಆರ್.ಡಬ್ಲ್ಯೂ ಮತ್ತು ಎಮ್.ಆರ್.ಡಬ್ಲ್ಯೂ ಇವರ ಸಂಯುಕ್ತಾಶ್ರಯದಲ್ಲಿ ಸ್ವೀಪ್ ಕಾರ್ಯಕ್ರಮದಡಿ ಇಂದು ಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಮತಜಾಗೃತಿ ಬೈಕ್ ರ್ಯಾಲಿ ಏರ್ಪಡಿಸಲಾಗಿತ್ತು.
ಇಲ್ಲಿನ ಎಂಸಿಸಿ ಬಿ ಬ್ಲಾಕ್ನ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿ ಎದುರು ಪ್ರತಿಜ್ಞಾವಿಧಿ ಭೋಧಿಸಿ, ಹಸಿರು ನಿಶಾನೆ ತೊರಿಸುವ ಮೂಲಕ ಜಿ.ಪಂ. ಉಪ ಕಾರ್ಯದರ್ಶಿ ಭೀಮಾನಾಯ್ಕ್ ರ್ಯಾಲಿಗೆ ಚಾಲನೆ ನೀಡಿದರು. ಇಲ್ಲಿಂದ ಆರಮಭವಾದ ಬೈಕ್ ರ್ಯಾಲಿಯು ಗುಂಡಿಸರ್ಕಲ್, ವಿದ್ಯಾರ್ಥಿಭವನ, ಕೆ.ಇ.ಬಿ.ಸರ್ಕಲ್, ರೈಲ್ವೆ ನಿಲ್ದಾಣ, ಅರುಣ ಟಾಕೀಸ್, ಟೆಲಿಫೋನ್ ಆಫೀಸ್ ಮುಖಾಂತರ ಲಕ್ಷ್ಮಿಫ್ಲೋರ್ ಮಿಲ್ ಸೇರಿದಂತೆ ಇತರೆಡೆ ಸಂಚರಿಸಿ ಮರಳಿ ಕಚೇರಿ ಆವರಣ ತಲುಪಿ ಮುಕ್ತಾಯವಾಯಿತು.
ರ್ಯಾಲಿಯಲ್ಲಿ “ವಿಕಲಚೇತನರೇ, ತಪ್ಪದೇ ಮತ ಚಲಾಯಿಸಿ ನಮ್ಮ ಮತ ನಮ್ಮ ಹಕ್ಕು” “ಪ್ರತಿಯೊಬ್ಬರ ಮತ, ದೇಶಕ್ಕೆ ಹಿತ” “ಪ್ರಜಾಪ್ರಭುತ್ವ ನಮ್ಮಿಂದ, ಮತ ಚಲಾಯಿಸಿ ಹೆಮ್ಮೆಯಿಂದ” ಎಂಬ ಘೋಷಣೆಗಳ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಕೆ.ಎಚ್ ವಿಜಯ್ ಕುಮಾರ್, ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಕಲ್ಯಾಣಧಿಕಾರಿಗಳಾದ ಶಶಿಧರ್, ಜಿಲ್ಲಾ ಪಂಚಾಯತ್ ಸಹಾಯಕ ನಿರ್ದೇಶಕ ಅಜ್ಜಪ್ಪ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
