ಹಿರಿಯೂರು:
ಮತದಾನ ಒಂದು ಪವಿತ್ರ ಕರ್ತವ್ಯ ಆದ್ದರಿಂದ ಪ್ರತಿಯೊಬ್ಬರು ಈ ಲೋಕಸಭಾ ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡಬೇಕು ಎಂಬುದಾಗಿ ಪೋಲಿಸ್ ವೃತನಿರೀಕ್ಷಕರಾದ ಚನ್ನೇಗೌಡ ಹೇಳಿದರು.
ನಗರದ ವಾಣಿ ಸಕ್ಕರೆ ಪ್ರಥಮ ದರ್ಜೆಕಾಲೇಜಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಜಿಲ್ಲಾ ಪಂಚಾಯಿತಿ ಚಿತ್ರದುರ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಮ್ಕುಮಾರ್ ಮಾತನಾಡಿ, ಇಂದಿನ ಯುವಕರೇ ನಮ್ಮ ಭಾವಿ ಭವಿಷ್ಯದ ಪ್ರಜೆಗಳು ಹಾಗೂ ನಮ್ಮ ಮುಂದಿನ ನೇತಾರರು ಆದ್ದರಿಂದ ಯುವಜನತೆ ಮತದಾನದಲ್ಲಿ ಪಾಲ್ಗೊಂಡಾಗ ಮಾತ್ರ ಪ್ರಜಾಪ್ರಭುತ್ವದ ಯಶಸ್ಸು ಸಾಧ್ಯ ಎಂದರು.
ಸಂಚಾಲಕರಾದ ಡಾ||ಜಿ.ಗಿರೀಶ್ ನಾಯ್ಕ ಮಾತನಾಡಿ, ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು ಬಲಿಷ್ಠ ಭಾರತದ ನಿರ್ಮಾಣಕ್ಕೆ ಅಷ್ಟೇ ಬಲಿಷ್ಠ ಮತದಾರರು ಅವಶ್ಯಕ ಎಂಬುದಾಗಿ ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ ಧರಣೇಂದ್ರಯ್ಯ ವಹಿಸಿದ್ದರು. ವೇದಿಕೆಯಲ್ಲಿ ಡಾ.ಸಿದ್ದಲಿಂಗಯ್ಯ ಹೆಚ್.ತಿಪ್ಪೇಸ್ವಾಮಿ, ವಿ.ಪಿ.ಜನಾರ್ಧನ ಕೆ.ಮುರವರ್ಧನ, ರಾಮಪ್ಪ, ಪುಷ್ಪಲತ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಭೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಜಾಥಾ ನಡೆಸಿ, ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡುವಂತೆ ಘೋಷಣೆಗಳನ್ನು ಕೂಗುತ್ತ ಮತದಾರರಲ್ಲಿ ಜಾಗೃತಿ ಮೂಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
