ಚಿತ್ರದುರ್ಗ
ಚಿತ್ರದುರ್ಗ ನಗರದಲ್ಲಿ ಆ. 15 ರಂದು ಡಾ.ಶ್ರೀ ಪಂಡಿತಾರಾಧ್ಯ ಶ್ರೀಗಳ ನೇತೃತ್ವದಲ್ಲಿ ನಡೆಯಲಿರುವ ಮತ್ತೆ ಕಲ್ಯಾಣ ಕಾರ್ಯಕ್ರಮದ ಯಶಸ್ವಿಗೆ ಬೇಕಾದ ವಿವಿಧ ರೀತಿಯ ಸಮಿತಿಗಳನ್ನು ಇಂದು ನಡೆದ ಸಭೆಯಲ್ಲಿ ರಚನೆ ಮಾಡಲಾಯಿತು.
ನಗರದ ಎ.ಪಿ.ಎಂ.ಸಿ. ದಲ್ಲಾಲರ ಭವನದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ನಾಗರೀಕರು ಕಾರ್ಯಕ್ರಮದ ಯಶಸ್ವಿಯಾಗಬೇಕು ಎಲ್ಲಿಯೂ ಸಹಾ ಲೋಪವಾಗಬಾರದು ಬೇರೆ ಜಿಲ್ಲೆಯವರಿಗಿಂತಲೂ ಚಿತ್ರದುರ್ಗದಲ್ಲಿ ಕಾರ್ಯಕ್ರಮ ಯಾವ ಲೋಪ ಇಲ್ಲದಂತೆ ನಡೆಯ ಬೇಕಿದೆ ಅದಕ್ಕೆ ಎಲ್ಲರು ಸಹಾ ಒಂದೇ ಕೆಲಸವನ್ನು ಮಾಡದೇ ಕೆಲಸವನ್ನು ಹಂಚಿಕೊಂಡು ಮಾಡಿದರೆ ಶೀಘ್ರವಾಗಿ ಆಗುತ್ತದೆ ಅಲ್ಲದೆ ಎಲ್ಲರ ಮೇಲೂ ಸಹಾ ಜವಾಬ್ದಾರಿ ಇರುತ್ತದೆ ಎಂದು ಅಭಿಪ್ರಾಯಪಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಮಠಾಧೀಶರು ಹಾಲಿ ಮತ್ತು ಮಾಜಿ ವಿವಿಧ ರೀತಿಯ ಚುನಾಯಿತ ಪ್ರತಿನಿಧಿಗಳನ್ನು ಸಹಾ ಬಿಡದೆ ಆಹ್ವಾನ ಮಾಡಬೇಕು ಮುಂಚೆ ಕಾರ್ಯಕ್ರಮ ಇಂತಹ ದಿನ ಈ ರೀತಿಯಾದ ಕಾರ್ಯಕ್ರಮ ನಡೆಯುತ್ತಿದೆ ಎಂದು ತಿಳಿಸಬೇಕು ಆಹ್ವಾನ ಪತ್ರಿಕೆ ಮುದ್ರಿತವಾದ ಮೇಲೆ ಮತ್ತೋಮ್ಮೆ ಭೇಟಿಯಾಗಿ ಅವುಗಳನ್ನು ತಲುಪಿಸಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಬೇಕು ಎಂದು ತಿಳಿಸಿ ಇದಕ್ಕೆ ಸಂಬಂಧಪಟ್ಟಂತೆ 6 ಜನರ ಸಮಿತಿಯನ್ನು ರಚನೆ ಮಾಡಲಾಯಿತು.
ಈ ಕಾರ್ಯಕ್ರಮದ ಯಶಸ್ವಿಗೆ ಜನತೆ ಅಗತ್ಯವಾಗಿದೆ ಈ ಹಿನ್ನಲೆಯಲ್ಲಿ ಬಿಎಡ್, ಪದವಿ. ಸ್ನಾತಕೋತ್ತರ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳನ್ನು ಆಹ್ವಾನ ಮಾಡಬೇಕಿದೆ ಇದಕ್ಕಾಗಿ ಜಿಲ್ಲೆಯಲ್ಲಿನ ಕಾಲೇಜುಗಳಿಗೆ ಭೇಟಿ ನೀಡುವುದರ ಮೂಲಕ ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕರನ್ನು ಆಹ್ವಾನ ಮಾಡಿ ಅವರಿಗೆ ಪುಸ್ತಕವನ್ನು ನೀಡಲಾಗುವುದು ಇದನ್ನು ಓದಿಕೊಂಡು ಅ, 15 ರಂದು ನಡೆಯುವ ವಿದ್ಯಾರ್ಥಿ ಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶ್ನೆಗಳನ್ನು ಕೇಳಬಹುದಾಗಿದೆ ಎಂದು ಜಿ.ಎಸ್.ಮಂಜುನಾಥ್ ತಿಳಿಸಿದರು
ಅಂದು ದಿನವಿಡಿ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು ಅದರಲ್ಲಿ ಪೂರ್ಣ ಪ್ರಮಾಣದಲ್ಲಿ ಭಾಗವಹಿಸಿದವರಿಗೆ ಸಹಮತ ವೇದಿಕೆ ಮತ್ತೇ ಕಲ್ಯಾಣದವತಿಯಿಂದ ಪ್ರಮಾಣ ಪತ್ರಗಳನ್ನು ನೀಡಲಾಗುತ್ತದೆ ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿ ಇದಕ್ಕಾಗಿ 5 ಜನರ ಸಮಿತಿಯನ್ನು ಸಹಾ ರಚನೆ ಮಾಡಿ ಅವರಿಗೆ ಜವಾಬ್ದಾರಿಯನ್ನು ನೀಡಲಾಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮೆರವಣಿಗೆಯನ್ನು ನಡೆಸಲಾಗುತ್ತದೆ ಇದರಲ್ಲಿ ಭಾಗವಹಿಸಲು ಆಗಮಿಸುವವರಿಗೆ ಬೇಕಾದ ಅನುಕೂಲಗಳನ್ನು ಮಾಡಲು ಸಹಾ ನಿರ್ಣಯ ಮಾಡಿ, ಬ್ಯಾನರ್, ಭಿತ್ತಿ ಪತ್ರ, ಸೇರಿದಂತೆ ಶರಣರ ವಚನಗಳನ್ನು ವಿದ್ಯಾರ್ಥಿಗಳ ಕೈಯಲ್ಲಿ ಹಿಡಿಯಲು ಅಗತ್ಯವಾದವನ್ನು ನಿರ್ಮಾಣ ಮಾಡಲು ಸಹಾ ತೀರ್ಮಾನಿಸಲಾಯಿತು. ಅಂದು ಹೊಳಲ್ಕೆರೆ ರಸ್ತೆಯ ಸಂಪಿಗೆ ಶಾಲಾ ಆವರಣದಲ್ಲಿ ಧ್ವಜಾರೋಹಣ ಮಾಡಿ ಮೆರವಣಿಗೆಯನ್ನು ಪ್ರಾರಂಭ ಮಾಡಲಾಗುತ್ತದೆ ಇದಕ್ಕೆ ಬೇಕಾದ ಸಿದ್ದತೆಯನ್ನು ಮಾಡಲು ಸಹಾ ನಿರ್ಣಯ ಮಾಡಲಾಯಿತು.
ಕಾರ್ಯಕ್ರಮದ ಆ. 15 ರಂದು ನಡೆಯುವುದರಿಂದ ಅಂದು ಸ್ವಾತಂತ್ರ ದಿನಾಚರಣೆಯಾಗಿದ್ದು ಸರ್ಕಾರ ವಿವಿಧ ರೀತಿಯ ಕಾರ್ಯಕ್ರಮಗಳಿದ್ದು ತರಾಸು ರಂಗಮಂದಿರ ಸಿಗಬಹುದು ಇಲ್ಲವೇ ಸಿಗದೇ ಇರಬಹುದು ಇದಕ್ಕೆ ಪರ್ಯಾಯವಾಗಿ ಬೇರೆ ಕಡೆಯಲ್ಲಿಯೂ ಸಹಾ ಸ್ಥಳವನ್ನು ನಿಗಧಿ ನಿರ್ಧಾರ ಮಾಡಬೇಕಿದೆ ಈಗ ಸದ್ಯಕ್ಕೆ ಪರ್ಯಾಯವಾಗಿ ಉಮಾಪತಿ ಕಲ್ಯಾಣ ಮಂಟಪ ಎಂದು ನಿಗಧಿ ಮಾಡಲಾಗಿದೆ ಈ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ ಅಂದು ಪೂರ್ಣ ಪ್ರಮಾಣದಲ್ಲಿ ತರಾಸು ರಂಗಮಂದಿರವನ್ನು ಬಿಟ್ಟು ಕೊಡುವಂತೆ ಮನವಿ ಮಾಡಲಾಗುವುದು ಎಂದು ಕೆ.ಎಂ.ವಿರೇಶ್ ತಿಳಿಸಿ ಇದಕ್ಕೂ ಸಹಾ ಸಮಿತಿಯನ್ನು ರಚನೆ ಮಾಡಲಾಯಿತು.
ಈ ಎಲ್ಲಾ ಕಾರ್ಯಕ್ರಮಕ್ಕೆ ಸುಮಾರು 3 ರಿಂದ 4 ಲಕ್ಷ ರೂಗಳು ವೆಚ್ಚವಾಗಲಿದ್ದು ಇದಕ್ಕಾಗಿ ಹಣವನ್ನು ಯಾರಲ್ಲಿಯೂ ಸಹಾ ಬೇಡದೇ ಸಹಮತ ವೇದಿಕೆಯ ಪದಾಧಿಕಾರಿಗಳು ಹಾಕಿಕೊಂಡು ನಿರ್ವಹಣೆ ಮಾಡಲಾಗುತ್ತದೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಮಧ್ಯಾಹ್ನ ಲಘು ಉಪಾಹಾರ ಮತ್ತು ರಾತ್ರಿ ಊಟವನ್ನು ನೀಡಬೇಕಿದೆ ದಾನಿಗಳು ಇದನ್ನು ನೀಡಬಹುದಾಗಿದೆ ಎಂದಾಗ ಸಭೆಯಲ್ಲಿದ್ದ ಉದ್ಯಮಿ ಸೇತುರಾಂ ಮಧ್ಯಾಹ್ನ ನಾನು ಉಪಾಹಾರವನ್ನು ನೀಡುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ವೆಚ್ಚಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ನೆರದಿದ್ದವರು ಇಂತಿಷ್ಟು ಹಣವನ್ನು ನೀಡುವುದಾಗಿ ವಾಗ್ದಾನ ಮಾಡಿದರು.
ಅಂದು ಬೆಳಿಗ್ಗೆ 11 ಗಂಟಗೆ ಸಂವಾದ ಕಾರ್ಯಕ್ರಮ ನಡೆಯಲಿದ್ದು ಸಂಜೆ 5 ಗಂಟೆಗೆ ಸಾಮರಸ್ಯ ನಡಿಗೆ, 6 ಗಂಟೆಗೆ ಸಾರ್ವಜನಿಕ ಸಮಾವೇಶ, ವಚನಗೀತೆ ಉಪನ್ಯಾಸ, ಆಶೀರ್ವಚನ ನಂತರ ಪಂಡಿತಾರಾಧ್ಯ ಶ್ರೀಗಳು ರಚನೆ ಮಾಡಿದ ಜಗದೀಶ್ ನಿರ್ದೇಶನದ ಶಿವಸಂಚಾರ ಕಲಾವಿದರಿಂದ ಮೋಳಿಗೆ ಮಾರಯ್ಯ ನಾಟಕ ಪ್ರದರ್ಶನವಾಗಲಿದೆ. ಹಿರಿಯ ನ್ಯಾಯವಾದಿಗಳಾದ ಪ್ರೋ.ರವಿವರ್ಮ ಕುಮಾರ್ ಕಾಯಕ ಜೀವಿಗಳ ಕ್ರಾಂತಿ, ಪ್ರಗತಿಪರ ಕೃಷಿಕರಾದ ಕವಿತಾ ಮಿಶ್ರಾ ಶರಣರ ಕೃಷಿಯ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಪಂಡಿತಾರಾಧ್ಯ ಶ್ರೀಗಳು ಸಾನಿಧ್ಯವಹಿಸಿದ್ದರೆ ವಿಶ್ರಾಂತ ನ್ಯಾಯಾಧೀಶರಾದ ಬಿಲ್ಲಪ್ಪ ಅಧ್ಯಕ್ಷತೆವಹಿಸಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
