ಆ. 14 ರಂದು ಮತ್ತೆ ಕಲ್ಯಾಣ ಕಾರ್ಯಕ್ರಮ.!

ತುಮಕೂರು

   ಸಹಮತ ವೇದಿಕೆ ವತಿಯಿಂದ ಸಾಣೇಹಳ್ಳಿಯ ತರಳಬಾಳು ಜಗದ್ಗುರು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ತುಮಕೂರಿನ ಶ್ರೀ ಸಿದ್ದವಿನಾಯಕ ಸಭಾಂಗಣದಲ್ಲಿ ಆಗಸ್ಟ್ 14ರಂದು ಮತ್ತೆ ಕಲ್ಯಾಣ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಹಮತ ವೇದಿಕೆಯ ಅಧ್ಯಕ್ಷ ಟಿ.ಬಿ.ಶೇಖರ್ ತಿಳಿಸಿದರು.

   ನಗರದ ಖಾಸಗಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮತ್ತೆ ಕಲ್ಯಾಣ ಅಭಿಯಾನ ಕಾರ್ಯಕ್ರಮವು ಆಗಸ್ಟ್ 1ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆರಂಭವಾಗಿದ್ದು, ಈಗಾಗಲೇ ಉಡುಪಿ, ಮಂಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರಿನಲ್ಲಿ ನಡೆದಿದ್ದು, ಇದೀಗ ಆ.14ರಂದು ತುಮಕೂರಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.

   ಶರಣರ ಜೀವನ, ವಚನಗಳು ಮತ್ತು ಅವುಗಳ ಮೌಲ್ಯಗಳ ಕುರಿತು ಅರಿವು ಮೂಡಿಸುವುದು. ಸಮಾಜದಲ್ಲಿನ ಅಜ್ಞಾನ, ಮೂಢನಂಬಿಕೆ, ಲಿಂಗತಾರತಮ್ಯ, ಭ್ರಷ್ಟಾಚಾರ, ಶೋಷಣೆಯಿಂದ ಜನರನ್ನು ಮುಕ್ತಗೊಳಿಸಿ ಎಚ್ಚರಗೊಳಿಸುವುದು. ಬಸವಾದಿ ಶರಣರು ನುಡಿದಂತೆ ನಡೆದುಕೊಳ್ಳುತ್ತಿದ್ದರು ಅಂತಹ ಶರಣರ ಅರಿವಿನ ಮಾರ್ಗವನ್ನು ಯುವ ಜನರಿಗೆ ತಿಳಿಸುವುದು. ಶರಣರ ಆಶಯಗಳನ್ನು ಇಂದಿನ ಯುವಪೀಳಿಗೆಗೆ ತಿಳಿಸಿಕೊಡುವುದೇ ಇದರ ಮುಖ್ಯ ಉದ್ದೇಶವಾಗಿದೆ ಎಂದರು.

   ಧಾರ್ಮಿಕ, ರಾಜಕೀಯ, ಸಾಮಾಜಿಕ ವ್ಯವಸ್ಥೆ ಹದಗೆಟ್ಟಿರುವ ಈ ಸಮಯದಲ್ಲಿ ಸಮಾಜ ಸುಧಾರಣೆಯ ಅಗತ್ಯವಿದ್ದು, ಶರಣರ ಚಿಂತನೆಯ ಬೆಳಕಿನಲ್ಲಿ ಸುಧಾರಣೆ ತರುವುದು, ಯುವ ಜನತೆಯಲ್ಲಿ ಬದಲಾವಣೆ ತರುವುದೇ ಈ ಅಭಿಯಾನ ಆಗಿದೆ. ಅಂದು ಶರಣರು ಬದುಕನ್ನು ಕಟ್ಟಿಕೊಳ್ಳಲು ಅನುಭವ ಮಂಟಪದ ಮೂಲಕ ಮಾಡಿದ ಪ್ರಯತ್ನವನ್ನು ಇಂದು ಮತ್ತೆ ಮಾಡಬೇಕಿದೆ ಎಂದು ತಿಳಿಸಿದರು.

   ಕಾರ್ಯಕ್ರಮದ ವಿವರಣೆಯನ್ನು ನೀಡಿದ ಸಹಮತ ವೇದಿಕೆಯ ಕಾರ್ಯದರ್ಶಿ ಜಿ.ಎಸ್.ಸೋಮಶೇಖರ್ , ಆಗಸ್ಟ್ 14ರಂದು ಬೆಳಗ್ಗೆ 10.30ರಿಂದ ಸಾಮರಸ್ಯ ನಡಿಗೆಯು ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಿಂದ ಪ್ರಾರಂಭ ಆಗುತ್ತದೆ. ಈ ಪಾದಯಾತ್ರೆಯಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದು, ಮಹಾಪೌರರಾದ ಲಲಿತಾರವೀಶ್ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್ ಚಾಲನೆ ನೀಡಲಿದ್ದಾರೆ.

    ಕಾಗಿನೆಲೆಯೆ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ, ಹಿರೇಮಠದ ಶಿವಾನಂದ ಶಿವಾಚಾರ್ಯ ಸವಾಮೀಜಿ, ರಾಮಕೃಷ್ಣ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮಿಗಳು, ಗುರುಕುಲಾಶ್ರಮದ ಇಮ್ಮಡಿ ಕರಿಬಸವೇಶ್ವರ ರಾಜೇಂದ್ರ ಸ್ವಾಮಿಗಳು, ಸಿದ್ದರಬೆಟ್ಟದ ವೀರಭದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ, ಚಿಕ್ಕತೊಟ್ಲುಕೆರೆಯ ಅಟವಿ ಶಿವಲಿಂಗ ಸ್ವಾಮಿಗಳು, ಖತೀಬ್ ಒ ಇಮಾಂ ಜಾಮಿಯಾ ಮಸೀದಿಯ ಮೌಲಾನಾ ಮಹಮ್ಮದ್ ಉಮರ್ ಅನಾರಿ, ಜಿಲ್ಲಾ ವಕ್ಫ್‍ಬೋರ್ಡ್‍ನ ಅಧ್ಯಕ್ಷ ಮುಷ್ತಾಕ್ ಅಹಮ್ಮದ್, ವೆಸ್ಲಿಚರ್ಚ್‍ನ ಪಾಸ್ಟರ್ ರೆವರೆಂಡ್ ಎಲೀಷ ದೇವಾನಂದ್ ಆಗಮಿಸಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಜಾಪ್ರಗತಿ ಸಂಪಾದಕರಾದ ಎಸ್.ನಾಗಣ್ಣ ಅವರು ವಹಿಸಿಕೊಳ್ಳಲಿದ್ದಾರೆ.

   11.30ಯಿಂದ 1.00 ಗಂಟೆಯವರೆಗೆ ಕಾಲೇಜು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಪಂಡಿತಾರಾಧ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯನವರು ಚಾಲನೆ ನೀಡಲಿದ್ದು, ವಿಶ್ರಾಂತ ಪ್ರಾಧ್ಯಾಪಕ ಎಚ್.ವಿ.ವೀರಭದ್ರಯ್ಯ, ತುಮಕೂರು ವಿವಿಯ ಪ್ರಾಧ್ಯಾಪಕ ನಾಗಭೂಷಣ್ ಬಗ್ಗನಡು ಸಂವಾದ ಕಾರ್ಯಕ್ರಮ ನೆರವೇರಿಸಲಿದ್ದಾರೆ ಇದರ ಅಧ್ಯಕ್ಷತೆಯನ್ನು ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್ ವಹಿಸಿಕೊಳ್ಳಲಿದ್ದಾರೆ.

     ಮಧ್ಯಾಹ್ನ 3.00 ರಿಂದ 5 ಗಂಟೆಯವರೆಗೆ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಉಪನ್ಯಾಸ ನೀಡಲಿದ್ದು, ನಿವೃತ್ತ ಐಎಎಸ್ ಅಧಿಕಾಡಿ ಡಾ.ಸಿ.ಸೋಮಶೇಖರ್ ಉಪಸ್ಥಿತರಿರುವರು. ಈ ಸಮಾರಂಭದಲ್ಲಿ ಚಿಂತಕರಾದ ಮಧುರಖಂಡಿಯ ಪ್ರವಚನಕಾರರಾದ ಡಾ.ಈಶ್ವರಮಂಟೂರು ಭರವಸೆಯ ಬೆಳಕು ಎಂಬ ವಿಚಾರವಾಗಿ ಹಾಗೂ ತರೀಕೆರೆಯ ಪ್ರಾಧ್ಯಾಪಕ ಡಾ.ಸಬಿತಾ ಬನ್ನಾಡಿ ಶರಣ ಚಿಂತನೆಯ ಅನುಸಂಧಾನ ಎಂಬ ವಿಚಾರವಾಗಿ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

     ಸಂಜೆ 6 ಗಂಟೆಗೆ ಜಗಧೀಶ್ ಆರ್ ನಿರ್ದೇಶನದಲ್ಲಿ ಶಿವ ಸಂಚಾರ ತಂಡದಿಂದ ಮೋಳಿಗೆ ಮಾರಯ್ಯ ಎಂಬ ನಾಟಕ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ಪ್ರದರ್ಶನಕ್ಕೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪನಿರ್ದೇಶಕ ಬಸವರಾಜಪ್ಪ ಆಪಿನಕಟ್ಟೆರವರು ಚಾಲನೆ ನೀಡಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಹಮತ ವೇದಿಕೆಯ ಯೋಗೀಶ್, ಬಿ.ಸಿ.ಸುರೇಶ್, ರಾಜಶೇಖರ್, ಸುರೇಶ್ ಇತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link