ಚಿತ್ರದುರ್ಗ:
ಎಲ್ಲಾ ಜಾತಿಯವರನ್ನು ಒಂದುಗೂಡಿಸಿಕೊಂಡು ಯುವ ಜನತೆಗೆ ಬಸವಣ್ಣನವರ ತತ್ವಗಳನ್ನು ತಿಳಿಸುವ ಮೂಲಕ ಕಲ್ಯಾಣದೆಡೆಗೆ ಕೊಂಡೊಯ್ಯುವುದಕ್ಕಾಗಿ ಸಹಮತ ವೇದಿಕೆ ಮತ್ತೆ ಕಲ್ಯಾಣ ಸಲಹಾ ಸಮಿತಿ ರಚಿಸಲಾಗಿದ್ದು, ಆ.15 ರಂದು ಚಿತ್ರದುರ್ಗದಲ್ಲಿ ವೇದಿಕೆ ಉದ್ಘಾಟನೆಯಾಗಲಿದೆ ಎಂದು ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹೊಸದುರ್ಗದ ಸಾಣೆಹಳ್ಳಿ ಮಠದ ಸಹಮತ ವೇದಿಕೆ ಮತ್ತೆ ಕಲ್ಯಾಣ ಸಲಹಾ ಸಮಿತಿಗೆ ಚಿತ್ರದುರ್ಗ ಜಿಲ್ಲೆಯಿಂದ ಇಪ್ಪತ್ತು ಸಂಚಾಲಕರು, ಅರವತ್ತರಿಂದ ಎಪ್ಪತ್ತು ನಿರ್ದೇಶಕರುಗಳನ್ನು ನೇಮಕ ಮಾಡಲಾಗಿದೆ. ಆ.15 ರಂದು ಬೆಳಿಗ್ಗೆ 10 ಕ್ಕೆ ಪದವಿ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಹನ್ನೆಡನೇ ಶತಮಾನದ ಬಸವಣ್ಣನವರ ತತ್ವಗಳನ್ನು ಸಾರಲಾಗುವುದು.
11 ಕ್ಕೆ ಸಂವಾದ, ಸಂಜೆ ಐದು ಗಂಟೆಗೆ ನೀಲಕಂಠೇಶ್ವರಸ್ವಾಮಿ ದೇವಸ್ಥಾನದಿಂದ ಸಾಮರಸ್ಯ ನಡಿಗೆ ಜಿಲ್ಲೆಯ ಎಲ್ಲಾ ಸ್ವಾಮೀಜಿಗಳು ಹಾಗೂ ಎಲ್ಲಾ ಕೋಮಿನವರು ನಡಿಗೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಆರು ಗಂಟೆಗೆ ಸಮಾವೇಶ, ಎಂಟಕ್ಕೆ ಶಿವಸಂಚಾರ ನಾಟಕ, ರಾತ್ರಿ ಹತ್ತು ಗಂಟೆಗೆ ಗೋಷ್ಟಿ ನಡೆಯಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಆರು ದಿನಗಳ ಕಾಲ ಸಹಮತ ವೇದಿಕೆ ಮತ್ತೆ ಕಲ್ಯಾಣ ಎಲ್ಲಾ ತಾಲೂಕಿನಲ್ಲಿ ಸಂಚರಿಸಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ವಹಿಸಲಿದ್ದಾರೆ. ಎಲ್ಲಾ ಮಠದ ಸ್ವಾಮೀಜಿಗಳನ್ನು ಆಹ್ವಾನಿಸಲಾಗುವುದು. ಬುದ್ದಿಜೀವಿಗಳು, ಚಿಂತಕರು ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಎಂದು ಮನವಿ ಮಾಡಿದರು.
ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ವೀರೇಶ್, ಲೋಕೇಶ್ ಅಗಸನಕಟ್ಟೆ, ಎಂ.ಕೆ.ತಾಜ್ಪೀರ್, ನಗರಸಭೆ ಮಾಜಿ ಅಧ್ಯಕ್ಷರುಗಳಾದ ಮಹಮದ್ ಅಹಮದ್ ಪಾಷ, ಹೆಚ್.ಸಿ.ನಿರಂಜನಮೂರ್ತಿ, ಪ್ರಾಧ್ಯಾಪಕ ಡಾ.ಕರಿಯಪ್ಪ ಮಾಳಿಗೆ, ಎಂ.ನಿಶಾನಿ ಜಯಣ್ಣ, ಗಿರೀಶ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ದೊಡ್ಡಮಲ್ಲಯ್ಯ, ರೈತ ಮುಖಂಡ ನುಲೇನೂರು ಶಂಕರಪ್ಪ, ನಿವೃತ್ತ ಡಿ.ವೈ.ಎಸ್.ಪಿ.ಸೈಯದ್ ಇಸಾಕ್, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಚೇರ್ಮನ್ ವೈ.ಬಿ.ಮಹೇಂದ್ರನಾಥ್, ಎನ್.ಡಿ.ಕುಮಾರ್ ಇನ್ನು ಮುಂತಾದವರು ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.