ತುಮಕೂರು
ಪಾವಗಡ ತಾಲ್ಲೂಕಿನಲ್ಲಿ ಮಟ್ಕಾ, ಇಸ್ಪೀಟ್ ಆಟ ರಾಜಾರೋಷವಾಗಿ ನಡೆಯುತ್ತಿದ್ದರೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ. ಇಡೀ ಜಿಲ್ಲೆಯಲ್ಲಿ ಮಟ್ಕಾ, ಜೂಜಾಟಗಳಿಗೆ ಪಾವಗಡ ತಾಲ್ಲೂಕು ಹೆಸರುವಾಸಿಯಾಗಿದೆ. ಗಡಿಭಾಗದ ಪ್ರದೇಶಗಳು ಇಲ್ಲಿಗೆ ಹೊಂದಿಕೊಂಡು ನಂಟು ಸಹ ಇರುವುದರಿಂದ ಅಲ್ಲಿನ ಗಾಳಿ ಇಲ್ಲಿಗೆ ಬೀಸುವುದು, ಇಲ್ಲಿನ ಕೃತ್ಯಗಳು ಅಲ್ಲಿಗೂ ತಾಕುವುದು ಹೀಗೆ ಪರಸ್ಪರ ಸಹಕಾರದ ಮನೋಭಾವ ಈ ಭಾಗದಲ್ಲಿ ಕಂಡುಬರುತ್ತದೆ.
ಪಾವಗಡ ತಾಲ್ಲೂಕು, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರು ಭಾಗ, ಶಿರಾ ಹಾಗೂ ಮಧುಗಿರಿಯ ಕೆಲವು ಪ್ರದೇಶಗಳಲ್ಲಿ ಮಟ್ಕಾ, ಜೂಜಾಟ ಪ್ರಕರಣಗಳು ನಡೆಯುತ್ತಿರುವುದಾಗಿ ಆ ಭಾಗದ ಸಾರ್ವಜನಿಕರೇ ಹೇಳುತ್ತಾರೆ. ಆದರೆ ಪಾವಗಡ ಮತ್ತು ಹುಳಿಯಾರಿನಲ್ಲಿರುವಷ್ಟು ಹಾವಳಿ ಬೇರೆಕಡೆ ಇಲ್ಲ ಎನ್ನುತ್ತಾರೆ ಕೆಲವರು.
ಪಾವಗಡ ತಾಲ್ಲೂಕಿನಲ್ಲಿ ಮಟ್ಕಾ, ಜೂಜಾಟದ ಬಗ್ಗೆ ಪೊಲೀಸರಿಗೆ ತಿಳಿಯದ ವಿಷಯವೇನಲ್ಲ. ಈ ಬಗ್ಗೆ ಜನತೆ ಹೇಳಿದರೂ ಸಹ ರಕ್ಷಣಾ ಇಲಾಖೆ ಮಾತ್ರ ಕೈಕಟ್ಟಿ ಕುಳಿತಿದೆ ಎಂದು ಸಾರ್ವಜನಿಕರ ಆರೋಪವಾಗಿದೆ.
ಪ್ರತಿದಿನ ಜೂಜಾಟದಲ್ಲಿ ಕೂಲಿ ಕಾರ್ಮಿಕರು, ರೈತಾಪಿ ವರ್ಗದ ಕೆಲ ಜನರು ಈ ಚಟಕ್ಕೆ ಒಳಗಾಗಿ, ದಿನದಲ್ಲಿ ದುಡಿದ ಅಲ್ಪಸ್ವಲ್ಪ ಸಂಪಾದನೆ ಮಾಡಿದ ಹಣ ಕುಟುಂಬ ನಿರ್ವಹಣೆಗೆ ಖರ್ಚು ಮಾಡದೆ ಸಂಜೆ ಹೊತ್ತಿನಲ್ಲಿ ಮಟ್ಕಾ ನಂಬರ್ಗೆ ಹಾಕಿ ಹೋಗುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಪಾವಗಡ ತಾಲ್ಲೂಕಿನ ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಹ ಮಟ್ಕಾ, ಇಸ್ಪೀಟ್ ಜೂಜಾಟವಾಡುತ್ತಿದ್ದು, ಕೆಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಿಂಗಳಿಗಿಷ್ಟು ಹಣ ಕೊಡುವಂತೆ ಜೂಜಾಟದವರಿಂದ ಮಾತು ಕತೆ ನಡೆಸಿಕೊಂಡು ಭಯಭೀತಿ ಇಲ್ಲದೆ ಇಸ್ಪೀಟ್ ಆಟ ಆಡಿಸುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿಯೇ ಕೇಳಿಬರುತ್ತಿವೆ. ಇದನ್ನು ತಡೆಯಲು ಈವರೆಗೂ ಯಾರಿಂದಲೂ ಸಾಧ್ಯವಾಗಿಲ್ಲ ಎಂದು ಪ್ರಜ್ಞಾವಂತ ನಾಗರೀಕರ ಮಾತಾಗಿದೆ.
ಪ್ರತಿದಿನ ಬೆಳಗಿನಜಾವ 2-3 ಗಂಟೆ ಮಾತ್ರ ಕೆರೆ ಕುಂಟೆ ದೊಡ್ಡ ದೊಡ್ಡ ಹಳ್ಳಗಳಲ್ಲಿ ಜೂಜಾಟ ಆಡಿಸುತ್ತಿದ್ದು, ಇದಕ್ಕೆಲ್ಲ ಠಾಣೆಯಲ್ಲಿನ ಕೆಲ ಪೊಲೀಸರು ಶಾಮೀಲಾಗಿ ಅನುಮತಿ ನೀಡುತ್ತಿರುವುದು ಆ ವ್ಯವಹಾರದಲ್ಲಿ ಭಾಗಿಯಾದವರಿಗೆ ಚೆನ್ನಾಗಿ ಗೊತ್ತು. ಜಿಲ್ಲಾ ಮಟ್ಟದ ರಕ್ಷಣಾ ಇಲಾಖೆಯಿಂದ ಈ ವಿಷಯಕ್ಕಾಗಿ ತಪಾಸಣೆಗೆ ಬಂದರೆ ಅಂತಹ ಸಮಯದಲ್ಲಿ ಪೋಲೀಸರೆ ಮಾಹಿತಿ ತಿಳಿಸಿ ಆಟ ನಿಲ್ಲಿಸುತ್ತಾರೆ ಎಂಬ ಮಾಹಿತಿ ಹೆಚ್ಚು ಚಾಲ್ತಿಯಲ್ಲಿದೆ.
30-40 ವರ್ಷಗಳಿಂದ ಎಷ್ಟೋ ಅಧಿಕಾರಿಗಳು ಬಂದು ಹೋಗಿದ್ದಾರೆ, ಇವರೆಲ್ಲ ನಿಲ್ಲಿಸದ ಜೂಜಾಟವನ್ನು ಹೊಸದಾಗಿ ಬಂದ ಅಧಿಕಾರಿಗಳಿಂದ ಹೇಗೆ ನಿಲ್ಲಿಸಲು ಸಾಧ್ಯ ಎಂಬಂತೆ ಬರುವ ಅಧಿಕಾರಿಗಳ ಮನಸ್ಥಿತಿ ಇದೆ. ಎಷ್ಟೇ ಅಧಿಕಾರಿಗಳು ಹೋಗಲಿ ಹೊಸದಾಗಿ ಬಂದವರು ನಾವು ಏನು ಮಾಡಿದ್ದೇವೆ ಎಂಬ ಪ್ರಶ್ನೆ ಹಾಕಿಕೊಂಡು, ಈಗಲಾದರು ಇಸ್ಪೀಟ್ ಜೂಜಾಟ ನಿಲ್ಲಿಸಿ ತಾಲ್ಲೂಕಿನ ಜನತೆ ನಿರಾಳವಾಗಿ ಜೀವಿಸಲು ಪ್ರಯತ್ನ ಮಾಡಬೇಕಾದ ಪರಿಸ್ಥಿತಿ ಅನಿವಾರ್ಯವಾಗಿದೆ ಎಂಬುದು ಸಾರ್ವಜನಿಕರ ಮಾತಾಗಿದೆ.
ನಿಷ್ಠಾವಂತ ಅಧಿಕಾರಿಗಳು ಬಂದು ಮಟ್ಕಾ, ಇಸ್ಪೀಟ್ ನಿಲ್ಲಿಸಲು ಕೆಲ ಪೊಲೀಸರು ಮುಂದಾದರೂ ಜನಪ್ರತಿನಿಧಿಗಳಿಂದ ದೂರವಾಣಿ ಮುಖಾಂತರ ಸಂದೇಶಗಳು ರವಾನೆಯಾಗುತ್ತವೆ. ಆ ಸಂದರ್ಭದಲ್ಲಿ ಜೂಜುಕೋರರು ಹೊರಬರುತ್ತಾರೆ. ಕೆಲವೊಮ್ಮೆ ಈ ರಾಜಕಾರಣವೂ ಕಾರಣವಾಗಿ ಬಿಡುತ್ತದೆ. ಇಂತಹ ವ್ಯವಸ್ಥೆಯಿಂದ ಬೇಜಾರಾಗಿ, ಯಾವೊಬ್ಬ ಅಧಿಕಾರಿಯೂ ಸಹ ನಿಯತ್ತಾಗಿ ಕೆಲಸ ಮಾಡಲು ಹಿಂಜರಿಯುತ್ತಿದ್ದಾರೆ ಎಂಬ ಮಾಹಿತಿಯೂ ಸಹ ಕೆಲವು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಪಾವಗಡ ತಾಲ್ಲೂಕಿನಲ್ಲಿ 20 ವರ್ಷಗಳಿಂದ ಮಳೆ ಬೆಳೆಯಾಗದೆ ಇಲ್ಲಿನ ರೈತರು ಮತ್ತು ಕೂಲಿ ಕಾರ್ಮಿಕರು ಕಂಗಾಲಾಗಿದ್ದಾರೆ. ತಮ್ಮ ಕುಟುಂಬ ಸಾಕಲು ಸಾಧ್ಯವಾಗದೆ ಬೆಂಗಳೂರು ಅಂತಹ ಪ್ರಮುಖ ಪಟ್ಟಣಗಳಿಗೆ ತಾಲ್ಲೂಕಿನಿಂದ 40-50 ಸಾವಿರ ಜನ ವಲಸೆ ಹೋಗಿದ್ದಾರೆ. ತಮ್ಮ ಬದುಕನ್ನು ಅಲ್ಲಿಯೇ ಕಂಡುಕೊಳ್ಳುತ್ತಿದ್ದಾರೆ. ಮಳೆ ಇಲ್ಲದಾಗ ಪಟ್ಟಣಗಳಿಗೆ ಹೋಗುವುದು, ಅಲ್ಲಿ ಕೆಲಸ ಮಾಡುವುದು, ಮಳೆ ಬಂದಾಗ ಮರಳಿ ಇಲ್ಲಿಗೆ ಬರುವುದು ಇದು ಈ ತಾಲ್ಲೂಕಿನಲ್ಲಿ ನಿರಂತರ.
ಇನ್ನು ಉಳಿಕೆ ಇರುವ ಕೂಲಿ ಕಾರ್ಮಿಕರು ಸ್ಥಳೀಯವಾಗಿ ಕೆಲಸ ಮಾಡಿಕೊಂಡು ಜೀವಿಸಲು ಮುಂದಾದರೂ ಮಹಾಮಾರಿಯಾದ ಮಟ್ಕಾ, ಇಸ್ಪೀಟ್ ಚಟಕ್ಕೆ ಒಳಗಾಗಿ ಮನೆ ಮಕ್ಕಳು ಉಪವಾಸ ಅನುಭವಿಸುವಂತಾಗಿದೆ. ಒಮ್ಮೆ ಈ ದುರಭ್ಯಾಸಗಳಿಗೆ ಕುಟುಂಬದ ಒಬ್ಬ ವ್ಯಕ್ತಿ ಬಲಿಯಾದನೆಂದರೆ ಆ ಇಡೀ ಕುಟುಂಬ ಸಂಕಟದಲ್ಲಿ ಮುಳುಗಿ ಹೋಗುತ್ತದೆ. ಕೌಟುಂಬಿಕ ಸಮಸ್ಯೆಗಳು ಉಲ್ಬಣ ಗೊಳ್ಳುತ್ತವೆ.
ಮಟ್ಕಾ, ಜೂಜಾಟಗಳ ಬಗ್ಗೆ ಯಾರಾದರೂ ಮಾಹಿತಿ ನೀಡಿದರೆಂದರೆ ಮಾಹಿತಿ ನೀಡುವ ವ್ಯಕ್ತಿಗಳನ್ನೇ ಕೆಲವೊಮ್ಮೆ ಟಾರ್ಗೆಟ್ ಮಾಡಲಾಗುತ್ತದೆ. ಪೊಲೀಸರು, ಮಟ್ಕಾ ಜೂಜಾಟದಲ್ಲಿ ನಿರತರಾಗಿರುವವರು ಇವರ ಮೇಲೆ ಕಣ್ಣಿಡುತ್ತಾರೆ. ಹೀಗಾಗಿ ಕೆಲವೊಮ್ಮೆ ಮಾಹಿತಿ ನೀಡಲು ಸಾರ್ವಜನಿಕರೆ ಹಿಂಜರಿಯುತ್ತಾರೆ. ಇವರ ಸಹವಾಸ ನಮಗೇಕೆ ಬೇಕು ಎನ್ನುತ್ತಾರೆ. ಇಂತಹವರಿಗೆ ಪೊಲೀಸ್ ರಕ್ಷಣೆ ಬೇಕು. ಆದರೆ ಪೊಲೀಸರು ಇವರ ವಿರುದ್ಧ ನಿಂತಾಗ ರಕ್ಷಣೆ ಯಾರಿಂದ ಎಂಬ ಪ್ರಶ್ನೆ ಎದುರಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
