ಹೊನ್ನಾಳಿ:
ರಾಜ್ಯದಲ್ಲಿ ಕೆಲ ಮಠಗಳು ಜಾತಿಗೆ ಸೀಮಿತವಾಗಿರುವುದು ದುರ್ದೈವದ ಸಂಗತಿ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಿವಮೊಗ್ಗ ಕ್ಷೇತ್ರದ ಶಾಸಕ ಕೆ.ಎಸ್. ಈಶ್ವರಪ್ಪ ಹೇಳಿದರು.
ಇಲ್ಲಿನ ಹಿರೇಕಲ್ಮಠದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ 2ನೇ ದಿನದ ಶರನ್ನವರಾತ್ರಿ ಮತ್ತು ದಸರಾ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಸ್ತುತ ದಿನದಲ್ಲಿ ನಮ್ಮ ಜಾತಿಯ ವ್ಯಕ್ತಿ ಶಾಸಕನಾಗಬೇಕು, ನಮ್ಮ ಜಾತಿಯ ವ್ಯಕ್ತಿಗೆ ಮಂತ್ರಿ ಸ್ಥಾನ ಕೊಡಬೇಕು ಎಂದು ಅನೇಕ ಮಠಗಳ ಗುರುಗಳು ಒತ್ತಾಯ ತರುವ ಸಂದರ್ಭ ಬಂದಿರುವುದು ಖೇದಕರ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಜಾತಿಗೊಬ್ಬ ಸ್ವಾಮಿಗಳು ಅಸ್ತಿತ್ವಕ್ಕೆ ಬಂದು ತಮ್ಮ ಸಮಾಜಕ್ಕೆ ಮಾತ್ರ ಹೆಚ್ಚು ಒತ್ತು ಕೊಡುತ್ತಿರುವ ಕಾರಣ ಜನರು ಸ್ವಾಮಿಗಳ ಮಾತನ್ನು ನಂಬುತ್ತಿದ್ದಾರೆ. ಇದು ಜಾತಿಯ ವಿಷ ಬಿತ್ತುವ ಹುನ್ನಾರವಾಗಿದೆ. ಇದಕ್ಕೆ ಇತಿಶ್ರೀ ಹಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಶರನ್ನವರಾತ್ರಿ ಮತ್ತು ದಸರಾ ಹಬ್ಬವನ್ನು ದೇಶದ ತುಂಬೆಲ್ಲಾ ಆಚರಣೆ ಮಾಡುತ್ತಿದ್ದು, ಉಗ್ರರ ಉಪಟಳ ನಿರಂತರವಾಗಿರುವ ಕಾಶ್ಮೀರದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ದಸರಾ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಇದಕ್ಕೆ ದೇವಿಯ ಆಶೀವಾದವೇ ಕಾರಣ ಎಂದು ಹೇಳಿದರು.
ಹೊನ್ನಾಳಿ ಹಿರೇಕಲ್ಮಠ ಎಲ್ಲಾ ಜಾತಿಯವರನ್ನು ಒಪ್ಪಿ, ಅಪ್ಪಿಕೋಡು ಹೋಗುವ ಮಠವಾಗಿದೆ. ಇದಕ್ಕೆ ಕಾರಣಕರ್ತರಾದ ಲಿಂ. ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳ ಆಶೀರ್ವಾದದ ಬಲದಿಂದ ಕಳೆದ ಚುನಾವಣೆಯಲ್ಲಿ ನಾನು ಲಕ್ಷಕ್ಕೂ ಅಧಿಕ ಮತ ಗಳಿಸಿ ಶಾಸಕನಾಗಿದೇನೆ ಎಂದು ಸ್ಮರಿಸಿಕೊಂಡರು.
ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು.ನಿವೃತ್ತ ಉಪನ್ಯಾಸಕ ಯು.ಎನ್. ಸಂಗನಾಳಮಠ ಉಪನ್ಯಾಸ ನೀಡಿದರು. ನಿವೃತ್ತ ಮುಖ್ಯ ಶಿಕ್ಷಕ ಜಿ.ಎಂ. ಹಿರೇಮಠ್ ಶ್ರೀದೇವಿ ಪುರಾಣ ಪ್ರವಚನ ನಡೆಸಿಕೊಟ್ಟರು.
ಎಚ್. ಕಡದಕಟ್ಟೆ ಗ್ರಾಪಂ ಸದಸ್ಯರಾದ ಮಂಜಪ್ಪ, ಲಕ್ಷ್ಮಮ್ಮ ಶಿವಪ್ಪ, ಪರಮೇಶ್ವರಪ್ಪ, ಪ್ರಾಂಶುಪಾಲ ಜೆ.ಪಿ. ಹಿರೇಮಠ, ಉಪನ್ಯಾಸಕ ಟಿ.ಎಂ. ಉಮಾಕಾಂತ, ಶಿಕ್ಷಕ ಸುರೇಶ್ ಗೆಜ್ಜುರಿ ಇತರರು ಉಪಸ್ಥಿತರಿದ್ದರು. ಪಟ್ಟಣದ ಗಣ್ಯರಾದ ಎಂ. ಸಿದ್ದಪ್ಪ, ಕೆ.ಜಿ. ರುದ್ರಪ್ಪ, ಎಚ್.ಕೆ. ವೇದಮೂರ್ತಿ, ಕೋರಿ ಗುರುಲಿಂಗಪ್ಪ, ಅಜ್ಜಪ್ಪ ಉತ್ತಂಗಿ ಅವರಿಗೆ ಗುರುರಕ್ಷೆ ನೀಡಲಾಯಿತು.ಶ್ರೀ ಚನ್ನೇಶ್ವರ ಗ್ರಾಮಾಂತರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಾಂಸ್ಕತಿಕ ಕಾರ್ಯಕ್ರಮ ನಡೆಸಿಕೊಟ್ಟರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
