ತಿಪಟೂರು:
ಸ್ಫರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯ, ದೈಹಿಕ ಸದೃಢತೆ, ಮಾನಸಿಕ ಸ್ಥಿರತೆ ಮತ್ತು ಕ್ರಿಯಾಶೀಲತೆಯಿಂದ ಕೂಡಿದ ದೀರ್ಘಾಯುಷಿಗಳಾಗಬೇಕಾದರೆ ಯೋಗ ಮತ್ತು ಧ್ಯಾನಗಳು ಅತ್ಯವಶ್ಯಕ ಎಂದು ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ಷಡಕ್ಷರ ಮಠದ ಆವರಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ತಾಲ್ಲೂಕು ಘಟಕದ ವತಿಯಿಂದ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ತರಬೇತಿ ಯೋಗ ಶಿಬಿರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಶ್ರೀಗಳು, ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಆಟ,ಪಾಠ, ವಿನೋಧಾವಳಿಗಳ ಜೊತೆಗೆ ಬೌದ್ಧಿಕ ಬೆಳವಣಿಗೆ ಹಾಗೂ ಸಮತೋಲನಕ್ಕೆ ಯೋಗ ಮತ್ತು ಧ್ಯಾನಗಳನ್ನು ಕಲಿತುಕೊಳ್ಳಬೇಕು. ಸದಾಕಾಲ ಪಾಠ ಪ್ರವಚನಗಳಿಗೆ ಮಾತ್ರ ಹೆಚ್ಚಿನ ಸಮಯ ವೀಸಲಿಡದೇ ಬಾಹ್ಯ ಪ್ರಪಂಚದ ಪ್ರಕೃತಿಕದತ್ತವಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು.
ದಿನನಿತ್ಯ ಕಾರ್ಯಗಳಲ್ಲಿ ಶಿಸ್ತುಬದ್ಧವಾದ ನಡವಳಿಕೆ, ಆಹಾರ ಪದ್ಧತಿ, ವ್ಯಾಯಾಮ, ಓದು ಬರಹ, ಸಮಾಲೋಚನೆಗಳೊಂದಿಗೆ ಬಿಡುವು ಮಾಡಿಕೊಂಡು ಬೆಳಿಗ್ಗೆ ಮತ್ತು ಸಂಧ್ಯಾವಂದನೆಯ ಸಮಯದಲ್ಲಿ ಕಡ್ಡಾಯವಾಗಿ ಯೋಗವನ್ನು ಮಾಡುತ್ತಾ ಶಾಂತಿ ನೆಮ್ಮದಿಯನ್ನು ಪಡೆಯಬೇಕು. ತಂದೆ ತಾಯಿಗಳು ತಮ್ಮ ಮಕ್ಕಳನ್ನು ಕೇವಲ ಅಂಕಗಳಿಸುವ ಶಿಕ್ಷಣದ ಕಡೆಗೆ ಒತ್ತು ಕೊಡುವ ಜೊತೆಗೆ ಗುರು ಹಿರಿಯರನ್ನು ಗೌರವಿಸುವ, ಸಂಸ್ಕಾರವನ್ನು ಬೆಳೆಸುವ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ.
ಭವಿಷ್ಯದ ಬದುಕಿನಲ್ಲಿ ತಮ್ಮ ಗುರಿ ಉದ್ದೇಶಗಳನ್ನು ಸಾಧಿಸಿಕೊಳ್ಳಬೇಕಾದರೆ ಯಶಸ್ಸನ್ನುಗಳಿಸಬೇಕಾದರೆ ಆದರ್ಶ ವ್ಯಕ್ತಿಗಳಾಗಿ ಬಾಳಿ ಬದುಕಬೇಕಾದರೆ ಒಳ್ಳೆಯ ಮನಸ್ಸು ಇರಲೇಬೇಕು. ಅಂತಹ ಮನಸ್ಥಿತಿಯಿಂದ ಸಂತೃಪ್ತಿಹೊಂದಬೇಕಾದರೆ ಯೋಗ, ಧ್ಯಾನ, ವ್ಯಾಯಾಮಗಳನ್ನು ಬಾಲ್ಯಾವಸ್ಥೆಯಲ್ಲಿಯೇ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಯೋಗಶಿಕ್ಷಕರುಗಳಾದ ಪಂಚಾಕ್ಷರಿ, ಚನ್ನಬಸವಣ್ಣ, ಬಸವರಾಜು, ಸವಿತ ಸೇರಿದಂತೆ ಮಾತೆಯರು, ಮಕ್ಕಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ