ದಾವಣಗೆರೆ:
ಮತ್ತೊಂದು ಸಭೆ ಕರೆದು ಚರ್ಚಿಸಿ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆಯ ವಿರುದ್ಧ ಹೋರಾಟ ರೂಪಿಸಲು ವಿವಿಧ ಪಕ್ಷ, ಸಂಘಟನೆಗಳ ಮುಖಂಡರು ತೀರ್ಮಾನ ಕೈಗೊಂಡರು.
ನಗರದ ಪಿಜೆ ಬಡಾವಣೆಯ ವನಿತಾ ಸಮಾಜದಲ್ಲಿ ಸೋಮವಾರ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆಯ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಪಕ್ಷ ಮತ್ತು ಸಂಘಟನೆಗಳ ಮುಖಂಡರು, ಕಾಯ್ದೆಯನ್ನು ಮತ್ತೊಮ್ಮೆ ಪರಿಶೀಲಿಸಿ, ಸಂಚಾರಿ ನಿಯಮ ಉಲ್ಲಂಘಿಸುವ ವೇಳೆಯಲ್ಲಿ ವಿಧಿಸಲು ನಿಗದಿ ಪಡಿಸಿರುವ ದಂಡದ ಮೊತ್ತವನ್ನು ಕಡಿಮೆ ಗೊಳಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಯಡಿಯೂರಪ್ಪನವರ ಮೂಲಕ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರೋಣ, ಕಾಯ್ದೆಯ ವಿರುದ್ಧ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸೋಣ, ಮಧ್ಯ ಕರ್ನಾಕದಿಂದ ಹೋರಾಟಕ್ಕೆ ಚಾಲನೆ ನೀಡೋಣ, ಬಂದ್ ಆಚರಿಸೋಣ ಎಂಬ ಸಲಹೆಗಳು ವ್ಯಕ್ತವಾದರೂ ಸಭೆಯ ಕೊನೆಯಲ್ಲಿ ಇನ್ನೊಮ್ಮೆ ಬೃಹತ್ ಸಭೆ ಸೇರಿ ಹೋರಾಟದ ರೂಪುರೇಷೆ ರಚಿಸೋಣ ಎಂಬ ನಿರ್ಧಾರಕ್ಕೆ ಬರಲಾಯಿತು.
ಜನರಿಗೆ ಹೊರೆ:
ಸಭೆಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಸಂಚಾರಿ ನಿಯಮ ಪಾಲಿಸುವ ಬಗ್ಗೆ ನಮ್ಮದ್ಯಾವ ತಕರಾರುಗಳಿಲ್ಲ. ಆದರೆ, ಅಕಸ್ಮಾತ್ ಸಂಚಾರಿ ನಿಯಮ ಉಲ್ಲಂಘನೆಯಾದರೆ, ದೊಡ್ಡ ಪ್ರಮಾಣದ ಮೊತ್ತವನ್ನು ದಂಡವನ್ನಾಗಿ ವಿಧಿಸುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಕೇಂದ್ರ ಸರ್ಕಾರದ ಈ ನೂತನ ಐಎಂವಿ ಕಾಯ್ದೆಯಿಂದಾಗಿ ಜನರೆ ಮೇಲೆ ಹೊರೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿದರು.
ಈ ಹೊಸ ಕಾಯ್ದೆಯು ಅತ್ಯಂತ ಅವೈಜ್ಞಾನಿಕತೆಯಿಂದ ಕೂಡಿರುವ ಕಾರಣಕ್ಕೆ, ಪ್ರಧಾನಿಗಳ ತವರು ಗುಜರಾತ್ ಸೇರಿದಂತೆ ಏಳೆಂಟು ರಾಜ್ಯಗಳು ಅನುಷ್ಠಾನಗೊಳಿಸಿಲ್ಲ. ಅಂತಹದರಲ್ಲಿ ಕರ್ನಾಟಕ ರಾಜ್ಯ ತರಾತುರಿಯಲ್ಲಿ ಈ ಕಾಯ್ದೆ ಅನುಷ್ಠಾನ ಗೊಳಿಸುವ ಇರಾದೆ ಏನಿತ್ತು ಎಂದು ಪ್ರಶ್ನಿಸಿದ ಅವರು, ಒಂದು ವರ್ಷಗಳ ಕಾಲ ಸಂಚಾರಿ ನಿಯಮಗಳ ಬಗ್ಗೆ ಹಾಗೂ ಇವುಗಳನ್ನು ಉಲ್ಲಂಘಿಸಿದರೆ ತೆರಬೇಕಾಗಿರುವ ದಂಡದ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಲು ಅವಕಾಶ ನೀಡಿ, ನಂತರದಲ್ಲಿ ಬೇಕಾದರೆ ದಂಡದ ಮೊತ್ತ ಎಷ್ಟಿರಬೇಕು? ಎಂಬುದನ್ನು ತೀರ್ಮಾನಿಸಿ ಕಾಯ್ದೆ ಅನುಷ್ಠಾನಕ್ಕೆ ಮುಂದಾಗಬೇಕೆಂದು ಒತ್ತಾಯಿಸಿ, ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸೋಣ ಎಂದು ಸಲಹೆ ನೀಡಿದರು.
ಮೂಗುತಿಯೇ ಭಾರ:
ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್ ಮಾತನಾಡಿ, ಕೇಂದ್ರದ ಐಎಂವಿ ಕಾಯ್ದೆಯು ಪ್ರಾಮಾಣಿಕವಾಗಿದ್ದ ಕೆಲ ಪೊಲೀಸರನ್ನೂ ಭ್ರಷ್ಟರನ್ನಾಗಿಸಲು ಅವಕಾಶ ಮಾಡಿಕೊಟ್ಟಿದೆ. ಮೂಗಿಗಿಂತ ಮೂಗುತಿಯೇ ಭಾರ ಎಂಬಂತೆ, ಈ ಕಾಯ್ದೆಯಲ್ಲಿ ನಿಗದಿ ಪಡಿಸಿರುವ ದಂಡದ ಮೊತ್ತ ಅಧಿಕವಾಗಿದೆ. ಏಕಾಏಕಿಯಾಗಿ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ಜಾರಿಗೆ ತಂದಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹೊಸ ಮೋಟಾರು ವಾಹನ ಕಾಯ್ದೆಯಿಂದ ವಾಹನ ಮಾಲೀಕರು ಮತ್ತು ಚಾಲಕರು ಭಯಭೀತರಾಗಿದ್ದಾರೆ. ಸರ್ಕಾರ ರೂಪಿಸುವ ಕಾನೂನುಗಳು ಜನರನ್ನು ತಿದ್ದಬೇಕೇ ಹೊರತು, ಜನತೆಯನ್ನೇ ಶೋಷಣೆಗೆ ಗುರಿ ಮಾಡಬಾರದು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾಯ್ದೆಯನ್ನು ಮರು ಪರಿಶೀಲಿಸಿ, ಮತ್ತಷ್ಟು ತಿದ್ದುಪಡಿಗಳನ್ನು ತಂದು ದಂಡದ ಪ್ರಮಾಣ ತಗ್ಗಿಸಿ ಜನಸ್ನೇಹಿ ಕಾನೂನು ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಜೈಲು ಆರಂಭಿಸಿದ್ದರೆ ಚೆನಾಗಿರ್ತಿತ್ತು:
ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ.ರಾಮಚಂದ್ರಪ್ಪ ಮಾತನಾಡಿ, ಯಾವುದೇ ಒಂದು ಕಾಯ್ದೆ ರೂಪಿಸಬೇಕಾದರೆ, ಮೊದಲ್ಲೊಂದು ಸಮಿತಿ ರೂಪಿಸಿ ಜನಾಭಿಪ್ರಾಯ ಪಡೆದು ಸಂಸತ್ನಲ್ಲಿ ಚರ್ಚೆ ಮಾಡಿ ಕಾಯ್ದೆ ರೂಪಿಸುವುದು ವಾಡಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರ ಪ್ರಜಾತಾಂತ್ರಿಕ ರೀತಿಯಲ್ಲಿ ಯಾವುದೇ ಚರ್ಚೆಯೇ ಮಾಡದೇ, ಹೊಸ ಮೋಟಾರು ಕಾಯ್ದೆ ಸೇರಿದಂತೆ 30ಕ್ಕೂ ಹೆಚ್ಚು ಕಾಯ್ದೆಗಳನ್ನು ಜಾರಿ ಗೊಳಿಸಿದೆ ಎಂದು ಆರೋಪಿಸಿದರು.
ಅಪ್ರಾಪ್ತ ಬಾಲಕರು ವಾಹನ ಚಲಾಯಿಸಿದರೆ, 25 ಸಾವಿರ ರೂ. ದಂಡ ಮತ್ತು ಮೂರು ತಿಂಗಳು ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶ ಮಾಡಿಕೊಟ್ಟಿದ್ದು, ನಿಯಮ ಉಲ್ಲಂಘಿಸುವವರನ್ನು ಜೈಲಿಗೆ ಹಾಕಲು ಕಾಯ್ದೆಯ ಜತೆಗೆ ದೇಶದಲ್ಲಿ ಇನ್ನೊಂದು ಹತ್ತು ಸಾವಿರ ಜೈಲು ತೆರೆದಿದ್ದರೆ ಚೆನಾಗಿರುತಿತ್ತು ಎಂದು ವ್ಯಂಗ್ಯವಾಡಿದರು.
ವಾಹನ ಸವಾರರಿಂದ ದಂಡ ವಸೂಲಿ ಮಾಡಿ ಸರ್ಕಾರ ನಡೆಸುವ ಇರಾದೆ ಈ ಕಾಯ್ದೆಯ ಹಿಂದಿದೆಯೇ ಎಂದು ಪ್ರಶ್ನಿಸಿದ ಅವರು, ಈ ಕಾಯ್ದೆಯನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿ ಎಲ್ಲರೂ ಪಕ್ಷಾತೀತವಾಗಿ ಹೋರಾಟ ನಡೆಸಬೇಕೆಂದು ಸಲಹೆ ನೀಡಿದರು.
ನ್ಯಾಯಾಂಗ ಹೋರಾಟ:
ವಕೀಲ ಮುಸ್ತಾಕ್ ಅಹ್ಮದ್ ಮಾತನಾಡಿ, ಕೇಂದ್ರ ಸರ್ಕಾರ ಈ ಕಾಯ್ದೆಗೆ ತಿದ್ದುಪಡಿ ತರುವ ಮೊದಲು ಆಕ್ಷೇಪಣೆಗಳನ್ನು ಕೇಳಿತ್ತು. ಆದರೆ, ಆಗ ಯಾರೂ ಆಕ್ಷೇಪಣೆ ಸಲ್ಲಿಸಲಿಲ್ಲ. ಈಗಾಗಲೇ ಕಾಯ್ದೆ ರೂಪಗೊಂಡಿದ್ದು, ಇದರ ವಿರುದ್ಧ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ನ್ಯಾಯಾಂಗ ಹೋರಾಟ ನಡೆಸುವುದೊಂದೇ ದಾರಿಯಾಗಿದೆ ಎಂದು ಹೇಳಿದರು.
ದಬ್ಬಾಳಿಕೆಯ ಆಳ್ವೆಕೆ:
ಲಯನ್ಸ್ ಸಂಸ್ಥೆಯ ಮಂಜುನಾಥಸ್ವಾಮಿ ಮಾತನಾಡಿ, ದೇಶದ ಜನರ ವರಮಾನ ಎಷ್ಟಿದೆ ಎಂಬುದನ್ನು ಅರಿತು, ದಂಡ ನಿಗದಿ ಮಾಡಬೇಕಾಗಿರುವುದು ಒಂದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯವಾಗಿದೆ. ಆದರೆ, ಬಡವರನ್ನು ದಬ್ಬಾಳಿಕೆಯಿಂದ ಆಳುವ ಕೇಂದ್ರ ಸರ್ಕಾರದ ಕ್ರಮ ಆಕ್ಷೇಪಾರ್ಯವಾಗಿದ್ದು, ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳು ದಂಡ ವಿಧಿಸುವ ಬದಲು ಕಾಲೇಜುಗಳಲ್ಲಿ ಸಂಚಾರಿ ನಿಯಮ ಪಾಲನೆಯ ಬಗ್ಗೆ ಜಾಗೃತಿ ಮೂಡಿಸುವತ್ತ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ಚಾರ್ಟಡ್ ಅಕೌಂಟೆಡ್ ಉಮೇಶ್ ಶೆಟ್ಟಿ, ನಮ್ಮ ದೇಶದ ಜನರ ಮಾಸಿಕ ತಲಾ ಆದಾಯ ಹತ್ತೂವರೆ ಸಾವಿರ ಇದೆ. ಆದರೆ, ತಲ ವರಮಾನಕ್ಕೂ ಹೆಚ್ಚು ದಂಡ ವಿಧಿಸಲು ಅವಕಾಶ ನೀಡಿರುವ ಕಾಯ್ದೆಯು ಅವೈಜ್ಞಾನಿಕವಾಗಿದೆ. ಅದಲ್ಲದೇ, ದೇಶದಲ್ಲಿ ಅವೈಜ್ಞಾನಿಕ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆಯಿಂದಲೂ ಅಪಘಾತ ಹೆಚ್ಚಾಗುತ್ತಿದೆ. ಆದ್ದರಿಂದ ಅಗತ್ಯ ಸೌಲಭ್ಯ ಕಲ್ಪಿಸುವತ್ತ ಸರ್ಕಾರ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಗೋಕಾಕ್ ಚಳವಳಿ ಮಾದರಿ ಹೋರಾಟ:
ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ ಮಾತನಾಡಿ, ಹೊಸ ಮೋಟಾರು ವಾಹನ ಕಾಯ್ದೆಯನ್ನು ದಕ್ಷಿಣ ಭಾರತದ ಬಹುತೇಕ ರಾಜ್ಯಗಳು ಜಾರಿ ಮಾಡಿಲ್ಲ. ಆದರೆ, ಕರ್ನಾಟಕ ಸರ್ಕಾರ ಮಾತ್ರ ಜಾರಿ ಮಾಡಿದ್ದು, ಇದರ ವಿರುದ್ಧ ಗೋಕಾಕ್ ಚಳವಳಿಯ ಮಾದರಿಯಲ್ಲಿ ಹೋರಾಟ ರೂಪಿಸಬೇಕಾಗಿದೆ. ಅಲ್ಲದೇ, ಯುವಕರು ಹೆಚ್ಚಿನ ರೀತಿಯಲ್ಲಿ ಸಂಚಾರಿ ನಿಯಮ ಉಲ್ಲಂಘಿಸುತ್ತಿದ್ದು, ಅಂತಹವರ ವಿರುದ್ಧ ಕಾನೂನು ಬಿಗಿ ಮಾಡುವುದಲ್ಲದೇ, ದಂಡದ ಮೊತ್ತ ಕಡಿಮೆ ಆಗುವ ನಿಟ್ಟಿನಲ್ಲಿ ನಮ್ಮ ಹೋರಾಟ ಇರಬೇಕು. ಈ ನಿಟ್ಟಿನಲ್ಲಿ ಕನ್ನಡಪರ ಒಕ್ಕೂಟದಿಂದ ಈ ವಾರದಲ್ಲಿಯೇ ಬೆಂಗಳೂರಿನ ಟೌನ್ಹಾಲ್ನಿಂದ ವಿಧಾನಸೌಧದ ವರೆಗೂ ಪ್ರತಿಭಟನೆ ಆಯೋಜಿಸುತ್ತಿದ್ದು, ಈ ಹೋರಾಟದಲ್ಲಿ ಎಲ್ಲರೂ ಭಾಗವಹಿಸಬೇಕೆಂದು ಕರೆ ನೀಡಿದರು.
ಬಂದ್ಗೆ ಕರೆ ನೀಡಿ:
ಲಾರಿ ಮಾಲೀಕರ ಸಂಘದ ಸೈಯದ್ ಸೈಫುಲ್ಲಾ ಮಾತನಾಡಿ, ಈ ಕಾಯ್ದೆಯಿಂದಾಗಿ ಜನಸಾಮಾನ್ಯರು ಹೊಟ್ಟೆ ಪಾಡಿಗಾಗಿಯೂ ವಾಹನ ಓಡಿಸಲು ಭಯ ಪಡುತ್ತಿದ್ದಾರೆ. ಸರ್ವಾಧಿಕಾರದಿಂದ ಜಾರಿಗೆ ಮಾಡಿರುವ ಹೊಸ ಐಎಂವಿ ಕಾಯ್ದೆಯು ಭ್ರಷ್ಟಾಚಾರ ನಡೆಸಲು ಆಸ್ಪದ ಮಾಡಿಕೊಡಲಿದ್ದು, ಆದ್ದರಿಂದ ಈ ಕಾಯಿದೆಯ ಮರು ಪರಿಶೀಲನೆಗೆ ಒತ್ತಾಯಿಸಿ ಮಧ್ಯ ಕರ್ನಾಟಕ ಬಂದ್ಗೆ ಕರೆ ನೀಡಬೇಕೆಂದು ಸಲಹೆ ನೀಡಿದರು.
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ಮಾತನಾಡಿ, ಇನ್ನಷ್ಟು ದಿನ ಈ ಕಾಯ್ದೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಬಾರದಿತ್ತು. ಏಕೆಂದರೆ, ಕೇಂದ್ರ ಸರ್ಕಾರವನ್ನು ಹೊತ್ತಿ ಕುಣಿದು ರಾಜ್ಯದಿಂದ 25 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿರುವವರು, ಅದೇ ಸಂಸದರ ಕೊರಳುಪಟ್ಟಿ ಹಿಡಿದು ಪ್ರಶ್ನಿಸುವ ವಾತಾವರಣ ಸೃಷ್ಟಿಯಾಗಬೇಕಿತ್ತು.
ದೇಶದ ರಸ್ತೆಗಳು ಯಾವ ಮಟ್ಟಕ್ಕೆ ಇವೆ ಎಂಬುದನ್ನೂ ಯೋಚಿಸದೇ ಕೇಂದ್ರ ಸರ್ಕಾರ ಹೊಸ ಮೋಟಾರು ವಾಹನ ಕಾಯ್ದೆ ಜಾರಿಗೆ ತರುವ ಮೂಲಕ ಕಾನೂನಿನ ಹೆಸರಿನಲ್ಲಿ ದಬ್ಬಾಳಿಕೆ ನಡೆಸಿದರೆ, ಜನರು ಬದುಕಬೇಕೋ, ಬೇಡವೋ? ಇದಕ್ಕೆ ನಿಮಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.ಈ ಕಾಯ್ದೆ ವಿರೋಧಿಸಿ ದಾವಣಗೆರೆ ಬಂದ್ಗೆ ಕರೆ ನೀಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯ ಗಂಟೆ ಬಾರಿಸೋಣ ಎಂದು ಸಲಹೆ ನೀಡಿದರು.ಸಭೆಯಲ್ಲಿ ಆಟೋ ಕಾಲೋನಿ ಕಲ್ಲೇಶಪ್ಪ, ಪಳನಿಸ್ವಾಮಿ, ಎ.ನಾಗರಾಜ್, ಶ್ರೀಕಾಂತ್ ಬಗರೆ, ಸೋಮಲಾಪುರದ ಹನುಮಂತಪ್ಪ, ಡಿ.ಎನ್.ಜಗದೀಶ್, ಬಾಡಾ ಕ್ರಾಸ್ ಶ್ರೀನಿವಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
