ಹುಳಿಯಾರು
ಹುಳಿಯರು ಹೋಬಳಿಯ ರೈತರ ರಾಸುಗಳಿಗೆ ಮೇವಿ ವಿತರಿಸುವ ಸಲುವಾಗಿ ಇಲ್ಲಿನ ಎಪಿಎಂಸಿ ಆವರಣದಲ್ಲಿ ಸೋಮವಾರ ತಹಸೀಲ್ದಾರ್ ತೇಜಸ್ವಿನಿ ಅವರು ಮೇವು ಬ್ಯಾಂಕ್ ಆರಂಭಿಸಿದರು.
ರಾಸುಗಳಿಗೆ ಮೇವು ತಿನ್ನಿಸುವ ಮೂಲಕ ಮೇವು ಬ್ಯಾಂಕ್ ಆರಂಭಿಸಿ ಅವರು ಮಾತನಾಡಿ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಈಗಾಗಲೇ ಕಸಬ ಮತ್ತು ಶೆಟ್ಟಿಕೆರೆಯಲ್ಲಿ ಮೇವು ಬ್ಯಾಂಕ್ ತೆರೆಯಲಾಗಿದ್ದು ಇಂದು ಹುಳಿಯಾರಿನಲ್ಲಿ ನಾಳೆ ಹಂದನಕೆರೆಯಲ್ಲಿ, ನಾಡಿದ್ದು ಕಂದಿಕೆರೆಯಲ್ಲಿ ಮೇವು ಬ್ಯಾಂಕ್ ಆರಂಭಿಸುವುದಾಗಿ ತಿಳಿಸಿದರು.
ಈಗಾಗಲೇ ಪಶು ಆಸ್ಪತ್ರೆ, ಹಾಲಿನ ಡೇರಿಗಳಲ್ಲಿ ನೊಂದಣಿ ಮಾಡಿಕೊಂಡವರಿಗೆ ಮೇವು ವಿತರಿಸಲಾಗುತ್ತಿದ್ದು ಪ್ರತಿ ಕೆ.ಜಿ.ಮೇವಿಗೆ 2 ರೂ.ನಂತೆ ಮೇವು ನಿಧಿ ಪಡೆದು ಪ್ರತಿ ರಾಸಿಗೆ ದಿನಕ್ಕೆ 5 ಕೆ.ಜಿಯಂತೆ 15 ದಿನಕ್ಕಾಗುವಷ್ಟು ಮೊದಲ ಹಂತದಲ್ಲಿ ಮೇವು ವಿತರಿಸಲಾಗುವುದು. ನಂತರ ಎರಡನೇ ಹಂತದಲ್ಲಿ ಪುನಃ 15 ದಿನಕ್ಕಾಗುವಷ್ಟು ಮೇವು ವಿತರಿಸಲಾಗುವುದು ಎಂದರು.
ತಾಲೂಕಿನ ಗಡಿ ಪ್ರದೇಶಗಳಾದ ಬೊಮ್ಮೇನಹಳ್ಳಿ, ನಡುವನಹಳ್ಳಿ, ದಸೂಡಿ, ದಬ್ಬಗುಂಟೆ, ರಾಮನಗರ ಸೇರಿದಂತೆ ಅನೇಕ ಹಳ್ಳಿಗಳ ರೈತರು ಹೋಬಳಿ ಕೇಂದ್ರಕ್ಕೆ ಬಂದು ಮೇವು ಪಡೆಯುವುದು ದುತ್ಸರವಾಗುತ್ತದೆ. ಹಾಗಾಗಿ ಮೇವು ಲಭ್ಯತೆ ನೋಡಿಕೊಂಡು ಗಡಿ ಗ್ರಾಮಗಳಿಗೆ ಮೇವಿನ ಲಾರಿ ಕಳುಹಿಸಿ ರೈತರಿಗೆ ಅಲ್ಲೇ ವಿತರಿಸುವ ಚಿಂತನೆ ಮಾಡಿರುವುದಾಗಿ ತಿಳಿಸಿದರು.
ಪಶು ಇಲಾಖೆಯ ಸಹಾಯಕ ನಿರ್ದೆಶಕ ಡಾ.ಪುಟ್ಟರಾಜು ಅವರು ಮಾತನಾಡಿ ತಾಲುಕಿನಲ್ಲಿ ಮೇವಿಗಾಗಿ ಈಗಾಗಲೇ 15 ಸಾವಿರ ರೈತರು ನೊಂದಣಿ ಮಾಡಿಸಿದ್ದು ತಾಲೂಕಿನ 5 ಮೇವು ಕೇಂದ್ರದಲ್ಲೂ ದಿನಕ್ಕೆ 30 ಕಾರ್ಡ್ನಂತೆ 8 ರಿಂದ 10 ಟನ್ ಮೇವು ವಿತರಿಸಲಾಗುತ್ತಿದೆ. ಬಳ್ಳಾರಿಯಿಂದ ನಿತ್ಯ 10 ಟನ್ ಮೇವು ಬರುತ್ತಿದ್ದು ಕೆಲ ದಿನಗಳಲ್ಲಿ ನೊಂದಣಿ ಮಾಡಿಸಿರುವ ಎಲ್ಲಾ ರೈತರಿಗೂ ಮೊದಲ ಹಂತದ 15 ದಿನಕ್ಕಾಗುವಷ್ಟು ಮೇವು ವಿತರಿಸಲಾಗುವುದು ಎಂದರು.
ಉಪ ತಹಸೀಲ್ದಾರ್ ಮಲ್ಲಿಕಾರ್ಜುನಯ್ಯ, ಕಂದಾಯ ತನಿಖಾಧಿಕಾರಿ ಮಂಜುನಾಥ್, ಗ್ರಾಮ ಲೆಕ್ಕಿಗ ಎಸ್.ಲಕ್ಷ್ಮೀಪತಿ, ಹುಳಿಯಾರು ಪಶುವೈದ್ಯ ಡಾ.ಮಂಜುನಾಥ್, ಯಳನಾಡು ಪಶುವೈದ್ಯೆ ಸಂಧ್ಯಾರಾಣಿ, ಗಾಣಧಾಳು ಪಶು ಆಸ್ಪತ್ರೆಯ ಪಶು ಪರೀಕ್ಷಕ ಜಿ.ವೆಂಕಟಪ್ಪ, ಹೊಯ್ಸಲಕಟ್ಟೆಯ ಭವ್ಯರಾಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/13HULIYAR5.gif)