ಬೆಂಗಳೂರು
ತೋಟಗಾರಿಕೆಯನ್ನೇ ನಂಬಿರುವ ರೈತರಿಗೆ ಶಕ್ತಿ ತುಂಬಲು 25 ಕೋಟಿರೂ ದೀರ್ಘಾವಧಿ ಸಾಲ ಸೌಲಭ್ಯ ನೀಡುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಪೌರಾಡಳಿತ, ತೋಟಗಾರಿಕೆ ಸಚಿವ ನಾರಾಯಣಗೌಡ ಅವರು ತಿಳಿಸಿದ್ದಾರೆ.
ನಗರದ ಲಾಲ್ಬಾಗ್ನಲ್ಲಿ ಬುಧವಾರ ಹಾಪ್ಕಾಮ್ಸ್ ಆಯೋಜಿಸಿದ್ದ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳ ಉದ್ಘಾಟಿಸಿ ಅವರು ಮಾತನಾಡಿದ ಅವರು ತೋಟಗಾರಿಕೆಯನ್ನೇ ನಂಬಿರುವ ಸಮಾರು 10 ಸಾವಿರ ರೈತರಿಗೆ ಶಕ್ತಿ ತುಂಬಲು ದೀರ್ಘಾವಧಿ ಸಾಲ ನೀಡುವುದು ಅತ್ಯವಶ್ಯಕವಾಗಿದೆ ಎಂದರು.
ಹಾಪ್ಕಾಮ್ಸ್ ಅಭಿವೃದ್ಧಿ ರೈತರ ಸಂಕಷ್ಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ 25 ಕೋಟಿ ರೂ. ದೀರ್ಘಾವಧಿಯ ಸಾಲ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುವುದಲ್ಲದೆ, ಆಪ್ಕಾನ್ ಅಭಿವೃದ್ಧಿಗೆ ಸಂಬಂಧಿಸಿದಂತೆ ರೈತರು, ಅಧಿಕಾರಿಗಳು, ಕೃಷಿ ತಜ್ಞಗೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಸುಮಾರು ೧೯೮ ಹಾಪ್ಕಾಮ್ಸ್ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ. ರೈತರ ಬೆನ್ನೆಲುಬಾದ ಹಾಪ್ಕಾಮ್ಸ್ ಗ್ರಾಹಕರಿಗೆ ಗುಣಮಟ್ಟದ ವಿವಿಧ ತಳಿಯ ಹಣ್ಣುಗಳು, ತರಕಾರಿಗಳನ್ನು ಸಬ್ಸಿಡಿ ದರದಲ್ಲಿ ಮಾರಾಟ ಮಾಡುತ್ತಿದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ಹೇಳಿದರು.
ಹಾಪ್ಕಾಮ್ಸ್ ನಿಂದ ಪಂಚತಾರಾ ಹೋಟೆಲ್ ಸೇರಿದಂತೆ ಇನ್ನಿತರ ಉತ್ತಮ ಶ್ರೇಣಿಯ ಹೋಟೆಲ್ಗಳಿಗೆ ತರಕಾರಿ, ಹಣ್ಣುಗಳನ್ನು ಸರಬರಾಜು ಮಾಡುವ ಸಂಬಂಧ ಶೀಘ್ರದಲ್ಲಿಯೇ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ದುಸ್ತಿತಿಯಲ್ಲಿರುವ ಹಲವು ಹಾಪ್ಕಾಮ್ಸ್ ಮಳಿಗೆಗಳನ್ನು ಸುಧಾರಣೆಗೊಳಿಸಲು ಕ್ರಮ ಕೈಗೊಳ್ಳುತ್ತೇನೆ ಹಾಪ್ಕಾಮ್ಸ್ ಅಧಿಕಾರಿಗಳು ರೈತರೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡು ರೈತರ ಸಮಸ್ಯೆಗೆ ಸ್ಪಂದಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಹಾಪ್ಕಾಮ್ಸ್ ಅಧ್ಯಕ್ಷ ಚಂದ್ರೇಗೌಡ, ನಿರ್ದೇಶಕ ವೆಂಕಟೇಶ್, ವ್ಯವಸ್ಥಾಪಕ ನಿರ್ದೇಶಕ ಬಿ.ಎನ್. ಪ್ರಸಾದ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
