ಆ.9ಕ್ಕೆ ಸಚಿವ ಸಂಪುಟ ವಿಸ್ತರಣೆ..!

ಬೆಂಗಳೂರು

    ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಅಗಸ್ಟ್ 9 ರಂದು ವಿಸ್ತರಣೆಯಾಗಲಿದ್ದು ಹಿರಿಯ ನಾಯಕರಾದ ಜಗದೀಶ್ ಶೆಟ್ಟರ್, ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರ್ಜೋಳ್, ಉಮೇಶ್ ಕತ್ತಿ, ಬಿ.ಶ್ರೀರಾಮುಲು ಸೇರಿದಂತೆ 12 ರಿಂದ 15 ಮಂದಿ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ.

   ಸಚಿವರಾಗುವವರ ಪಟ್ಟಿಯಲ್ಲಿ ಬಸವರಾಜ ಬೊಮ್ಮಾಯಿ, ಅಂಗಾರ, ಕೋಟ ಶ್ರೀನಿವಾಸ ಪೂಜಾರಿ ಇದ್ದು ಶಾಸಕತ್ವ ಅನರ್ಹಗೊಂಡಿರುವವರ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಪೂರಕವಾಗಿ ಇತ್ಯರ್ಥವಾದರೆ ಹೆಚ್.ವಿಶ್ವನಾಥ್, ರಮೇಶ್ ಜಾರಕಿಹೊಳಿ, ಎಸ್.ಟಿ.ಸೋಮಶೇಖರ್ ಅವರು ಮಂತ್ರಿಗಳಾಗಲಿದ್ದಾರೆ.

   ಒಂದು ವೇಳೆ ಶಾಸಕತ್ವದಿಂದ ಅನರ್ಹಗೊಂಡವರ ಪ್ರಕರಣ ತ್ವರಿತವಾಗಿ ಇತ್ರ್ಯರ್ಥವಾಗದೆ ಇದ್ದರೆ ಬಿಜೆಪಿಯ ಶಾಸಕರು ಮಾತ್ರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಉನ್ನತ ಮೂಲಗಳು ವಿವರಿಸಿವೆ.ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂ ರಪ್ಪ ಅವರು ಜುಲೈ 26 ರಂದು ಪ್ರಮಾಣ ವಚನ ಸ್ವೀಕರಿಸಿದ್ದಲ್ಲದೆ ತಮ್ಮ ಸರ್ಕಾರಕ್ಕಿರುವ ಬಹುಮತವನ್ನು ಜುಲೈ 29 ರಂದು ಸಾಬೀತುಪಡಿಸಿದ್ದರು.

   ಇದಾದ ನಂತರ ಅವರು ಅಧಿಕಾರಿಗಳೊಂದಿಗೆ ಸಚಿವ ಸಂಪುಟ ಸಭೆ ನಡೆಸುವುದು ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದು ಸಹಜವಾಗಿಯೇ ಸಂಪುಟ ವಿಸ್ತರಣೆಯಿಲ್ಲದೆ ಹೆಜ್ಜೆ ಇಡುತ್ತಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.ಈ ಮಧ್ಯೆ ಮಂತ್ರಿಗಿರಿಗಾಗಿ ದೊಡ್ಡ ಮಟ್ಟದ ಲಾಬಿ ನಡೆಯುತ್ತಿದೆಯಾದರೂ ಬಿಜೆಪಿ ಹೈಕಮಾಂಡ್ ಅತ್ಯಂತ ಬಲಿಷ್ಟವಾಗಿರುವುದರಿಂದ ಯಾರೂ ಬಹಿರಂಗವಾಗಿ ಚಟುವಟಿಕೆ ನಡೆಸುತ್ತಿಲ್ಲ.

    ಆದರೂ ಹೈಕಮಾಂಡ್ ಮತ್ತು ಸಂಘಪರಿವಾರದ ನಾಯಕರ ಬಳಿ ಮಂತ್ರಿಗಿರಿಗಾಗಿ ಒಂದು ಮಟ್ಟದಲ್ಲಿ ಪ್ರಮುಖ ನಾಯಕರು ಲಾಬಿ ನಡೆಸುತ್ತಿದ್ದು ಬೆಂಗಳೂರಿನಿಂದ ಬ್ರಾಹ್ಮಣರ ಕೋಟಾದಡಿ ಸುರೇಶ್ ಕುಮಾರ್ ಇಲ್ಲವೇ ರವಿ ಸುಬ್ರಮಣ್ಯ ಅವರು ಮಂತ್ರಿಮಂಡಲಕ್ಕೆ ಸೇರ್ಪಡೆಯಾಗಲಿದ್ದಾರೆ.

    ಇದೇ ರೀತಿ ದಾವಣಗೆರೆ ಜಿಲ್ಲೆಯಿಂದ ಮಂತ್ರಿಗಳಾಗಲು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಎಂ.ಪಿ.ರವೀಂದ್ರನಾಥ್ ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಯಡಿಯೂರಪ್ಪ ಅವರು ಮಂಗಳವಾರ ಬೆಳಿಗ್ಗೆ ಪಕ್ಷದ ನಾಯಕರಾದ ನಡ್ಡಾ ಸೇರಿದಂತೆ ಹಲವರನ್ನು ಭೇಟಿ ಮಾಡಿದರಲ್ಲದೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೊಂದಿಗೆ ಚರ್ಚಿಸಿದರು.

    ಮೂಲಗಳ ಪ್ರಕಾರ, ಯಡಿಯೂರಪ್ಪ ಅವರು ತಮ್ಮ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಬೇಕಾದವರ ಪಟ್ಟಿಯೊಂದನ್ನು ತಯಾರಿಸಿಕೊಂಡು ದಿಲ್ಲಿಗೆ ಹೋಗಿದ್ದು, ಅದೇ ಕಾಲಕ್ಕೆ ಸಂಘಪರಿವಾರದ ನಾಯಕರ ಶಿಫಾರಸು ಪಟ್ಟಿಯೂ ಹೈಕಮಾಂಡ್ ವರಿಷ್ಟರಿಗೆ ತಲುಪಿದೆ.ಹೀಗಾಗಿ ಯಡಿಯೂರಪ್ಪ ಅವರ ಪಟ್ಟಿಯೊಂದಿಗೆ ಸಂಘಪರಿವಾರದ ನಾಯಕರು ರವಾನಿಸಿದ ಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ವರಿಷ್ಟರು ಮೊದಲ ಕಂತಿನ ಪಟ್ಟಿಗೆ ಗ್ರೀನ್ ಸಿಗ್ನಲ್ ನೀಡಲಿದ್ದಾರೆ.

    ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಲು ಈವರೆಗೆ ಒಪ್ಪಿಗೆ ನೀಡದ ಹೈಕಮಾಂಡ್ ಸಧ್ಯದ ಸ್ಥಿತಿಯಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪರ್ಯಾಯವಾಗಿ ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸುವ ಅಗತ್ಯವಿಲ್ಲ ಎಂದು ಹೇಳಿದೆ.ಹೀಗಾಗಿ ಉಪಮುಖ್ಯಮಂತ್ರಿಗಳಾಗಲು ತವಕಿಸುತ್ತಿದ್ದ ಹಲವು ನಾಯಕರು ನಿರಾಸೆಗೊಳ್ಳುವಂತಾಗಿದ್ದು ಇಷ್ಟಾದರೂ ಚಕಾರ ಎತ್ತದೆ ಮೌನವಾಗಿರಬೇಕಾದ ಅಸಹಾಯಕ ಸ್ಥಿತಿಯಲ್ಲಿದ್ದಾರೆ.

ತಂಡ ರಚನೆ?

    ಈ ಮಧ್ಯೆ ಯಡಿಯೂರಪ್ಪ ಅವರ ನೇತೃತ್ವದ ಸಚಿವ ಸಂಪುಟ ರಚನೆಯಾಗುತ್ತಿದ್ದಂತೆಯೇ ಅದರ ಕಾರ್ಯ ಚಟುವಟಿಕೆಗಳ ಮೇಲೆ ನಿಗಾ ಇಡಲು, ಸಲಹೆ ನೀಡಲು ಬಿಜೆಪಿ ಹಾಗೂ ಸಂಘಪರಿವಾರದ ನಾಯಕರಿರುವ ಒಂದು ತಂಡ ನೇಮಕಗೊಳ್ಳಲಿದೆ ಎಂಬುದು ಮೂಲಗಳ ಹೇಳಿಕೆ.

   ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಸರ್ಕಾರ ಒಂದು ನಿರ್ಣಯ ಕೈಗೊಳ್ಳುವ ಮುನ್ನ ಈ ತಂಡದ ಗಮನಕ್ಕೆ ತರಬೇಕು ಎಂದು ಈಗಾಗಲೇ ಮೌಖಿಕವಾಗಿ ಸೂಚನೆ ನೀಡಲಾಗಿದ್ದು ಈ ತಂಡ ಹೈಕಮಾಂಡ್ ಹಾಗೂ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡಲಿದೆ.ರಾಜ್ಯದ ಹಿತದೃಷ್ಟಿಯಿಂದ ಆಗಬೇಕಾದ ಕೆಲಸಗಳ ಬಗ್ಗೆ ಹೈಕಮಾಂಡ್ ನಾಯಕರು ನೀಡುವ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಈ ತಂಡ ನೀಡುವ ಸಲಹೆಗಳನ್ನು ಸರ್ಕಾರ ಪರಿಗಣಿಸಬೇಕಾಗುತ್ತದೆ ಎಂದು ಈ ಮೂಲಗಳು ತಿಳಿಸಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link