ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ..!!

ಬೆಂಗಳೂರು

       ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಅಗಸ್ಟ್ 9 ಇಲ್ಲವೇ 11 ರಂದು ವಿಸ್ತರಣೆಯಾಗಲಿದೆ.ಸಚಿವ ಸಂಪುಟ ವಿಸ್ತರಣೆ ಸಂಬಂಧ ಅಗಸ್ಟ್ 5ರಂದು ಸಿಎಂ ಯಡಿಯೂರಪ್ಪ ಮತ್ತಿತರ ನಾಯಕರು ದೆಹಲಿಗೆ ತೆರಳಲಿದ್ದು ವರಿಷ್ಟರೊಂದಿಗೆ ಚರ್ಚಿಸಿದ ನಂತರ ಮೊದಲ ಕಂತಿನ ಸಂಪುಟ ವಿಸ್ತರಣೆ ನಡೆಯಲಿದೆ.

      ಮೊದಲ ಕಂತಿನಲ್ಲಿ ಹತ್ತು ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು ರಾಜೀನಾಮೆ ನೀಡಿ ಅನರ್ಹಗೊಂಡಿರುವ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಇತ್ಯರ್ಥವಾದರೆ ಮೊದಲ ಕಂತಿನಲ್ಲಿ ಇಪ್ಪತ್ತು ಮಂದಿ ಸಚಿವರಾಗಲಿದ್ದಾರೆ.

      ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರನ್ನು ಸೇರಿಸಿಕೊಳ್ಳಬೇಕು ಎಂದು ಯಡಿಯೂರಪ್ಪ ಅವರು ಪಟ್ಟು ಹಿಡಿದಿದ್ದು ಈ ಹಿನ್ನೆಲೆಯಲ್ಲಿ ಅಗಸ್ಟ್ ಒಂದರಂದು ದೆಹಲಿಗೆ ಹೋಗುವ ಪೂರ್ವ ನಿಯೋಜಿತ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ.

     ಹೈಕಮಾಂಡ್ ವರಿಷ್ಟರಿಗೂ ಈ ಕುರಿತು ಅಧಿಕೃತವಾಗಿ ಸಂದೇಶ ರವಾನಿಸಿದ ಯಡಿಯೂರಪ್ಪ:ರಾಜೀನಾಮೆ ನೀಡಿ ಅನರ್ಹತೆಯ ಶಿಕ್ಷೆಗೊಳಗಾಗಿರುವ ಶಾಸಕರನ್ನು ಕೈ ಬಿಟ್ಟು ಮಂತ್ರಿ ಮಂಡಲ ವಿಸ್ತರಣೆ ಮಾಡಿದರೆ ನಾವೂ ವಚನಭ್ರಷ್ಟತೆಯ ಆರೋಪ ಹೊರಬೇಕಾಗುತ್ತದೆ ಎಂದು ಹೇಳಿದ್ದಾರೆ.

     ಅನರ್ಹಗೊಂಡಿರುವ ಶಾಸಕರ ಬಗ್ಗೆ ಯಾರೇನೇ ಹೇಳಿದರೂ ಅವರನ್ನು ಕೈ ಬಿಟ್ಟು ಸಚಿವ ಸಂಪುಟ ವಿಸ್ತರಿಸಿದರೆ ಬಿಜೆಪಿಯನ್ನು ಯಾರೂ ನಂಬುವುದಿಲ್ಲ.ಇದು ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲ,ರಾಷ್ಟ್ರ ರಾಜಕಾರಣಕ್ಕೂ ಅನ್ವಯವಾಗುತ್ತದೆ ಎಂಬುದು ಯಡಿಯೂರಪ್ಪ ಅವರ ವಾದ.

     ಈ ಹಿನ್ನೆಲೆಯಲ್ಲಿಯೇ ಅಗಸ್ಟ್ 2 ರ ಶುಕ್ರವಾರ ಇಲ್ಲವೇ 5 ರ ಸೋಮವಾರ ಸಚಿವ ಸಂಪುಟ ವಿಸ್ತರಿಸಲು ಹಾಕಿದ್ದ ಲೆಕ್ಕಾಚಾರವನ್ನು ಮುಂದೂಡಲು ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು ಅಗಸ್ಟ್ ಆರರಂದು ಸಂಸತ್ ಅಧಿವೇಶನ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಅಗಸ್ಟ್ ಐದರಂದು ದೆಹಲಿಗೆ ಬನ್ನಿ ಎಂದು ಸೂಚಿಸಿದೆ.

     ವರಿಷ್ಟರ ಸೂಚನೆಯ ಹಿನ್ನೆಲೆಯಲ್ಲಿ ಅಗಸ್ಟ್ ಐದರಂದು ದಿಲ್ಲಿಗೆ ಧಾವಿಸಲಿರುವ ಯಡಿಯೂರಪ್ಪ ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ತ್ವರಿತವಾಗಿ ಇತ್ಯರ್ಥವಾಗಲಿದೆ ಎಂದು ನಂಬಿದ್ದಾರೆ.ಹಾಗೆಯೇ ಇಂದು ಕೂಡಾ ತಮ್ಮ ನಿವಾಸದಲ್ಲಿ ಅತೃಪ್ತ ಶಾಸಕರನ್ನು ಕರೆಸಿ:ಯಾವ ಕಾರಣಕ್ಕೂ ನಿಮ್ಮ ಕೈ ಬಿಡುವ ಪ್ರಶ್ನೆ ಇಲ್ಲ.ಹೀಗಾಗಿ ನೆಮ್ಮದಿಯಾಗಿರಿ ಎಂದು ಭರವಸೆ ನೀಡಿದ್ದಾರೆ.

    ಆದರೆ ಶಾಸಕರನ್ನುಅನರ್ಹಗೊಳಿಸಿದ ಸ್ಪೀಕರ್ ಕ್ರಮದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತ್ವರಿತವಾಗಿ ಯಾವುದೇ ನಿರ್ಧಾರ ಕೈಗೊಳ್ಳದೆ ಹೋದರೆ ಕೇವಲ ಹತ್ತು ಮಂದಿಯನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಸಂಘಪರಿವಾರದ ನಾಯಕರು ವರಿಷ್ಟರಿಗೆ ಹೇಳಿದ್ದಾರೆ.ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಶಾಸಕರನ್ನು ಕೈ ಬಿಡುವ ಅಗತ್ಯವೇ ಇಲ್ಲ.ಅದು ಒಳ್ಳೆಯದೂ ಅಲ್ಲ.ಆದರೆ ಸರ್ಕಾರ ಎಂದರ ಕೇವಲ ಸಿಎಂ ಎಂಬ ವಾತಾವರಣವನ್ನು ಬದಲಿಸಬೇಕು.ಜನರ ಕೆಲಸ ಮಾಡಲು ಬೇರೆಯವರಿದ್ದಾರೆ ಎಂಬ ನಂಬಿಕೆ ಬರಬೇಕು.

     ಹಾಗೆ ಮಾಡದೆ ಸುಧೀರ್ಘ ಕಾಲ ಮುಖ್ಯಮಂತ್ರಿಗಳು ಮಾತ್ರವೇ ಸರ್ಕಾರವೆಂದಾದರೆ ಬಹುಬೇಗ ಅಸಮಾಧಾನ ಶುರುವಾಗುತ್ತದೆ.ಹಾಗಾಗುವುದು ಬೇಡ.ಅನರ್ಹಗೊಂಡ ಶಾಸಕರ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ಇತ್ಯರ್ಥವಾದ ಮರುದಿನವೇ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಿ.ಆದರೆ ಸುಪ್ರೀಂಕೋರ್ಟ್ ಈ ವಿಷಯದಲ್ಲಿ ತ್ವರಿತ ನಿರ್ಣಯ ಕೈಗೊಳ್ಳದೆ ಹೋದರೆ ಇನ್ನಷ್ಟು ಕಾಲ ಕಾಯುತ್ತಾ ಕೂರುವುದು ಬೇಡ ಎಂದು ಸಂಘಪರಿವಾರದ ನಾಯಕರು ಹೈಕಮಾಂಡ್ ವರಿಷ್ಟರಿಗೆ ವಿವರಿಸಿದ್ದಾರೆ ಎಂದು ಮೂಲಗಳು ಹೇಳಿವೆ.

     ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಮಂತ್ರಿಗಿರಿಗಾಗಿ ಲಾಬಿ ತೀವ್ರವಾಗಿದ್ದು ರಾಜಧಾನಿ ಬೆಂಗಳೂರಿನಲ್ಲಿ ಪಕ್ಷದ ಯಾರ್ಯಾರಿಗೆ ಅವಕಾಶ ನೀಡಬೇಕು ಎಂಬುದು ತಲೆನೋವಾಗಿ ಪರಿಣಮಿಸಿದೆ.ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ಮಂತ್ರಿಗಳನ್ನಾಗಿ ಮಾಡಿದರೆ ಉಳಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಂದಿರುವ ಶಾಸಕರ ಪೈಕಿ ನಾಲ್ಕು ಮಂದಿಗೆ ಮಂತ್ರಿಗಿರಿ ನೀಡಲೇಬೇಕಾಗಿದೆ.

      ಆದರೆ ಪೈಪೋಟಿಯಲ್ಲಿ ಈ ಹಿಂದೆ ಸಚಿವರಾದವರ ಹೆಸರುಗಳು ಇದ್ದು ಇದೇ ರೀತಿ ವಿವಿಧ ಜಿಲ್ಲೆಗಳಲ್ಲಿ ಯಾರ್ಯಾರನ್ನು ಮಂತ್ರಿ ಮಾಡಬೇಕು ಎಂಬ ವಿಷಯದಲ್ಲಿ ತಲೆನೋವು ಶುರುವಾಗಿದೆ.ಮೈಸೂರು ಜಿಲ್ಲೆಯ ವಿಷಯದಲ್ಲಿ ದೊಡ್ಡ ತಲೆನೋವೇನೂ ಇಲ್ಲ ಎಂದಿರುವ ಮೂಲಗಳು ಜೆಡಿಎಸ್ ತೊರೆದು ಬಂದಿರುವ ಹೆಚ್.ವಿಶ್ವನಾಥ್ ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕ ಎ.ರಾಮದಾಸ್ ಅವರಿಗೆ ಮಂತ್ರಿಗಿರಿ ಲಭ್ಯವಾಗಲಿದೆ ಎಂದಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap