ಸಹಕಾರ ಸಂಘದಲ್ಲಿ ಹಣ ದುರುಪಯೋಗ: ತನಿಖೆಗೆ ಆಗ್ರಹ

ಕೊರಟಗೆರೆ

        ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘವೊಂದರಲ್ಲಿ 4 ಲಕ್ಷ ರೂ. ಹಣ ದುರುಪಯೋಗವಾಗಿದೆ ಎಂದು ಊರಿನ ಗ್ರಾಮಸ್ಥರು ಕಾರ್ಯದರ್ಶಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಘಟನೆ ತಾಲ್ಲೂಕು ವ್ಯಾಪ್ತಿಯಲ್ಲಿ ಜರುಗಿದೆ.

        ತಾಲ್ಲೂಕಿನ ದೊಡ್ಡಸಾಗ್ಗೆರೆ ಬಳಿಯ ಎಂ.ಗೊಲ್ಲಹಳ್ಳಿ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಈ ದುರುಪಯೋಗ ನಡೆದಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದು, ಇಲ್ಲಿನ ಕಾರ್ಯದರ್ಶಿ ಕಳೆದ 5 ವರ್ಷದಿಂದ ಸಂಘದಲ್ಲಿ ಉಳಿತಾಯ ಹಣದ ಬಳಕೆ ವೇಳೆ ಖರ್ಚಿಗೆ ಸಂಬಂಧಿಸಿದಂತೆ ರಶೀದಿ ನಿರ್ವಹಣೆ ಮಾಡದಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿ ಕಾರ್ಯದರ್ಶಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

        ಎಂ.ಗೊಲ್ಲಹಳ್ಳಿಯ ಮಹಿಳಾ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಘಟಕಕ್ಕೆ ಬೇವಿನಹಳ್ಳಿ, ಓಬನನಾಯಕನಪಾಳ್ಯ ಉಪ್ಪಾಸಪುರ, ಎಂ.ಗೊಲ್ಲಹಳ್ಳಿ ಗ್ರಾಮದ ಸುಮಾರು 100ಕ್ಕೂ ಹೆಚ್ಚು ರೈತರು ಪ್ರತಿದಿನ ಡೈರಿಗೆ ಹಾಲು ಹಾಕುತ್ತಾರೆ. ಪ್ರತಿದಿನ ಸುಮಾರು 1500 ಲೀಟರ್‍ಗೂ ಹೆಚ್ಚು ಹಾಲು ಶೇಖರಣೆ ಆಗುತ್ತದೆ.

         ಪ್ರತಿ ಹದಿನೈದು ದಿನಕ್ಕೊಮ್ಮೆ 5ಲಕ್ಷಕ್ಕೂ ಅಧಿಕ ಹಣ ರೈತರ ಖಾತೆಗಳಿಗೆ ಬ್ಯಾಂಕಿನ ಮೂಲಕ ಜಮಾ ಆಗುತ್ತಿದ್ದು, ಇಲ್ಲಿನ ಕಟ್ಟಡ ನಿರ್ಮಾಣ ವೇಳೆಯಲ್ಲಿ ಹಣ ಬಳಕೆ ಸಂಬಂಧಿಸಿದಂತೆ ಸಮರ್ಪಕವಾಗಿ ವೋಚರ್ ಬಳಕೆ ಮಾಡದಿರುವುದು, ಸ್ಥಳೀಯವಾಗಿ ಹಾಲು ಮಾರಾಟಕ್ಕೆ ಚೀಟಿ ನೀಡದಿರುವುದು ಹಾಗೂ ವಾರ್ಷಿಕ ಸಭೆಯಲ್ಲಿ ಸಂಘಕ್ಕೆ ಸಂಬಂಧಿಸಿದ ಖರ್ಚು ವೆಚ್ಚವನ್ನು ಅಧ್ಯಕ್ಷರು ಹಾಗೂ ಸದಸ್ಯರಿಗೆ ಮಾಹಿತಿ ನೀಡದೆ ಖಾಸಗಿಯವರಿಂದ ಆಡಿಟಿಂಗ್ ಮಾಡಿರುವುದು ಸಾರ್ವಜನಿಕರಲ್ಲಿ ಅನುಮಾನ ಮೂಡಿ ಹಣ ದುರುಪಯೋಗವಾಗಿರಬಹುದೆಂದು ಕಾರ್ಯದರ್ಶಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

       ಮಹಿಳಾ ಸಹಕಾರ ಸಂಘ ಪ್ರಾರಂಭ ಹಂತದಲ್ಲಿ ಚಿಕ್ಕ ಪ್ರಮಾಣದಲ್ಲಿ ಪ್ರಾರಂಭಗೊಂಡು ಮಹಿಳೆಯರ ಶ್ರಮ ಹಾಗೂ ಒಗ್ಗಟ್ಟಿನಿಂದ ಇಂದು ಬೃಹದಾಕಾರದಲ್ಲಿ ಒಂದು ದೊಡ್ಡ ಮಟ್ಟದಲ್ಲಿ ಈ ಮಹಿಳಾ ಸಹಕಾರ ಸಂಘ ಬೆಳೆದಿದ್ದು,

         ಇಂತಹ ಸಂದರ್ಭದಲ್ಲಿ ಕಾರ್ಯದರ್ಶಿಯೊಬ್ಬರ ಹಣ ದುರುಪಯೋಗದಿಂದ ಇಡೀ ಸಹಕಾರ ಸಂಘ ಮೂಲೆ ಗುಂಪಾಗುವ ಸ್ಥಿತಿ ತಲುಪಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿರುವುದಲ್ಲದೆ, ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.

                        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link