ಸಾವಯವ ಸಂತೆಗೆ ಶಾಸಕರಿಂದ ಚಾಲನೆ

ತುಮಕೂರು

       ನಗರದ ಕುವೆಂಪು ನಗರಕ್ಕೆ ಪ್ರವೇಶಿಸುವ ಮುಖ್ಯರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಸಾವಯವ ಸಂತೆ ಕಾರ್ಯಕ್ರಮಕ್ಕೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು. ಸ್ವದೇಶಿ ಜಾಗರಣ ಮಂಚ್ ನೇತೃತ್ವದಲ್ಲಿ ಆಯೋಜನೆಗೊಂಡಿದ್ದ ಸಾವಯವ ಸಂತೆಯಲ್ಲಿ ಸೊಪ್ಪು, ತರಕಾರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಪ್ರದರ್ಶಿಸಲಾಗಿತ್ತು.

        ಈ ಸಂದರ್ಭದಲ್ಲಿ ಮಾತನಾಡಿದ ಸ್ವದೇಶ ಜಾಗರಣ ಮಂಚ್ ಸಂಚಾಲಕ ಜಗದೀಶ್ ಅವರು ರೈತರಿಗೆ ಉತ್ತಮವಾದ ಬೆಲೆ ಸಿಗಬೇಕು, ಅವರು ಬೆಳೆಯುವ ಬೆಳೆಗೆ ಪ್ರಸ್ತುತ ಸನ್ನಿವೇಶದಲ್ಲಿ ಸಮರ್ಪಕವಾದ ದರ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ದಲ್ಲಾಳಿಗಳಿಂದ ರೈತರನ್ನು ರಕ್ಷಿಸಲು ನೇರ ಮಾರಾಟ ಪ್ರೋತ್ಸಾಹಿಸಲು ಸಾವಯವ ಸಂತೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆ ಮೂಲಕ ರೈತರಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡುವುದು ಸೇರಿದಂತೆ ಅನಗತ್ಯ ಮತ್ತು ಅನುಪಯುಕ್ತ ಖರ್ಚುಗಳನ್ನು ಕಡಿಮೆ ಮಾಡುವುದು, ರೈತರನ್ನು ಪ್ರೋತ್ಸಾಹಿಸುವುದು ಉದ್ದೇಶವಾಗಿದೆ ಎಂದರು.

       ಇತ್ತೀಚೆಗೆ ನಾವು ತಿನ್ನುವ ಆಹಾರ ವಿಷಯುಕ್ತವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಬೆಳೆಯುವ ಧಾನ್ಯ ಮತ್ತು ತರಕಾರಿಗಳಿಗೆ ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆ ಮಾಡುವುದೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಸಹ ಕಾರ್ಯಕ್ರಮದ ಒಂದು ಭಾಗ. ಈಗಾಗಲೇ ತಿಪಟೂರು, ಹಾಸನ, ಬೆಂಗಳೂರು, ಕಡೂರು ಭಾಗಗಳಲ್ಲಿ ಸಾವಯವ ಸಂತೆ ಮಾಡಲಾಗಿದ್ದು, ಇತರ ಜಿಲ್ಲೆಗಳಲ್ಲಿಯೂ ಇದನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

         ಈ ಸಾವಯವ ಸಂತೆಯಲ್ಲಿ ತುಮಕೂರು ಸುತ್ತಮುತ್ತಲ 25 ರೈತರು ಪಾಲ್ಗೊಂಡಿದ್ದರು. ತರಕಾರಿ, ಸೊಪ್ಪು, ದ್ವಿದಳ ಧಾನ್ಯಗಳು ಮತ್ತಿತರ ಆಹಾರ ಪದಾರ್ಥಗಳನ್ನು ಸಂತೆಯಲ್ಲಿ ಇಡಲಾಗಿತ್ತು. ಸಾರ್ವಜನಿಕರು ಸಾಕಷ್ಟು ಪ್ರಮಾಣದಲ್ಲಿ ತರಕಾರಿ, ಸೊಪ್ಪು ಖರೀದಿಸಿದರು.
ಈ ಕಾರ್ಯಕ್ರಮದಲ್ಲಿ ಸ್ವದೇಶಿ ವಿಶ್ವನಾಥ್, ರಾಮಮೂರ್ತಿ, ನಂದೀಶ್, ಲತಾರವೀಶ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link