ತುಮಕೂರು;
ಸರ್ವೋಚ್ಛ ನ್ಯಾಯಾಲಯದ ಒಂದು ಸಂಚಾರಿ ಪೀಠವನ್ನು ಬೆಂಗಳೂರು ನಗರದಲ್ಲಿ ಸ್ಥಾಪಿಸುವ ಮೂಲಕ ದಕ್ಷಿಣ ರಾಜ್ಯಗಳ ಕಕ್ಷಿದಾರರಿಗೆ ಅನುಕೂಲ ಮಾಡಿಕೊಡಬೇಕೆಂದು ಸರ್ವೋಚ್ಛ ನ್ಯಾಯಾಲಯ ದಕ್ಷಿಣ ಭಾರತ ಸಂಚಾರಿ ಪೀಠ ಸ್ಥಾಪನಾ ಕ್ರಿಯಾ ಸಮಿತಿ ಮನವಿ ಮಾಡಿದೆ.
ಈ ಸಂಬಂಧ ಕ್ರಿಯಾ ಸಮಿತಿ ಸzಸ್ಯರ ತಂಡ ಶನಿವಾರ ಬೆಳಗ್ಗೆ ಸಿದ್ಧಗಂಗಾ ಮಠಕ್ಕೆ ಆಗಮಿಸಿ ಡಾ.ಶ್ರೀ ಶಿವಕುಮಾರ ಸ್ವಾಮಿಗಳನ್ನು ಭೇಟಿ ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಮನವಿಯೊಂದನ್ನು ಶ್ರೀಗಳಿಗೆ ಸಲ್ಲಿಸಿತು.
ಮನವಿಯಲ್ಲಿ ಈ ಕೆಳಕಂಡ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. ದಕ್ಷಿಣ ಭಾರತ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ನಿಕೋಬರ್ ಮತ್ತು ಲಕ್ಷ ದ್ವೀಪದ ಅನೇಕ ಬಡ ಕಕ್ಷಿದಾರರು ದೆಹಲಿಗೆ ತೆರಳಬೇಕಾಗಿದೆ. ಇವರೆಲ್ಲರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರದಲ್ಲಿ ಒಂದು ಸಂಚಾರಿ ಪೀಠ ಸ್ಥಾಪನೆಯಾದರೆ ಎಲ್ಲರಿಗೂ ಅನುಕೂಲವಾಗುತ್ತದೆ.
ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಷ್ಟ್ರದ ಪರಮೋಚ್ಛ ನ್ಯಾಯಾಲಯವು ಪ್ರಕರಣಗಳನ್ನು ಇತ್ಯರ್ಥಗೊಳಿಸುವಲ್ಲಿ ವಿಳಂಬವಾಗುತ್ತಿರುವುದರಿಂದ ರಾಷ್ಟ್ರದ ನಾಗರಿಕರಿಗೆ ಅದರಲ್ಲೂ ಬಡಜನರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಳಂಬವಾಗುತ್ತಿದೆ.
ಸಂವಿಧಾನದ ಅನುಚ್ಛೇದ 39-ಎ ಅನ್ವಯ ನ್ಯಾಯಕ್ಕಾಗಿ ನೆರವು ನೀಡುವುದು ಸರ್ಕಾರದ ಮತ್ತು ನ್ಯಾಯಾಲಯಗಳ ಸಂವಿಧಾನಬದ್ಧ ಕರ್ತವ್ಯ. ಆದ್ದರಿಂದ ದಕ್ಷಿಣ ಭಾರತ ರಾಜ್ಯಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬೆಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪಿಸುವ ಅಗತ್ಯವಿದೆ. ಇದಕ್ಕಾಗಿ ಸರ್ವೋಚ್ಛ ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರಕ್ಕೆ ಹಕ್ಕೋತ್ತಾಯ ಮಂಡಿಸುವುದು ಅನಿವಾರ್ಯವಾಗಿದೆ. ಅನುಚ್ಛೇದ 130ರ ಪ್ರಕಾರ ಹೆಚ್ಚುವರಿ ನ್ಯಾಯಾಲಯ ಸ್ಥಾಪಿಸುವ ಅಧಿಕಾರ ಸರ್ವೋಚ್ಛ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ.
ಹಲವಾರು ಕಾನೂನು ಆಯೋಗಗಳ ವರದಿಗಳು ದಕ್ಷಿಣಭಾರತದ ಬಡ ಕಕ್ಷಿದಾರರ ತೊಂದರೆಯನ್ನು ಮನಗಂಡು ಸರ್ವೋಚ್ಛ ನ್ಯಾಯಾಲಯದ ಸಂಚಾರಿ ಪೀಠಗಳನ್ನು ಸ್ಥಾಪಿಸಬೇಕೆಂದು ಶಿಫಾರಸ್ಸುಮಾಡಿರುತ್ತದೆ. 2.6,15,20,26, 29 ಮತ್ತು 59ನೇ ವರದಿಗಳು ಒಂದು ಹೆಚ್ಚುವರಿ ಸಂಚಾರಿ ಪೀಠ ಸ್ಥಾಪನೆ ಕುರಿತು ಪ್ರಸ್ತಾಪಿಸಿವೆ. ಈ ಪ್ರಸ್ತಾವನೆಗಳಿಗೆ ಆಲ್ ಇಂಡಿಯಾ ಬಾರ್ ಅಸೊಸಿಯೇಷನ್ ತನ್ನ ಸಹಮತ ಸೂಚಿಸಿದೆ. ಸಂವಿಧಾನದ ಅನುಚ್ಛೇದ 14 ರಂತೆ ಉತ್ತರ ಭಾರತದ ಕಕ್ಷಿದಾರರಂತೆ ದಕ್ಷಿಣ ಭಾರತದ ಕಕ್ಷಿದಾರರಿಗೆ ಅನುಕೂಲ ಒದಗಿಸಿಕೊಡುವ ಸಲುವಾಗಿ ಸರ್ವೋಚ್ಛ ನ್ಯಾಯಾಲಯದ ಸಂಚಾರಿ ಪೀಠ ಸ್ಥಾಪಿಸಬೇಕಾಗಿರುವುದು ಸಂವಿಧಾನ ಬದ್ಧ ಅಗತ್ಯವಾಗಿದೆ.
ಬೆಂಗಳೂರು ಸಿಲಿಕಾನ್ ಸಿಟಿ ಎಂದು ಖ್ಯಾತವಾಗಿರುವ ವಿಶ್ವವಿಖ್ಯಾತ ನಗರ. ಇತ್ತೀಚಿನ ವರದಿಯಂತೆ ಏಷಿಯಾ ಖಂಡದಲ್ಲಿಯೇ ಅತಿ ಹೆಚ್ಚು ಪ್ರಯಾಣಿಕರು ಸಂಚರಿಸುವ ವಿಮಾನ ನಿಲ್ದಾಣ ಹೊಂದಿರುವ ನಗರ. ಎಲ್ಲಾ ಭಾಷೆಗಳನ್ನು ಮಾತನಾಡುವ ಜನ ವಾಸಿಸುತ್ತಿದ್ದಾರೆ. ದಕ್ಷಿಣ ಭಾರತದ ಎಲ್ಲ ರಾಜ್ಯ ಮತ್ತು ಪ್ರದೇಶಗಳ ಭಾಷೆ ಮತ್ತು ಸಂಸ್ಕøತಿಯನ್ನು ಬೆಂಗಳೂರು ಹೊಂದಿದೆ. ಆದ್ದರಿಂದ ಹೊರರಾಜ್ಯದ ಕಕ್ಷಿದಾರರು ಸ್ಥಳೀಯರೊಂದಿಗೆ ಸಂವಹನ ಮಾಡುವುದು ಕಷ್ಟವಾಗುವುದಿಲ್ಲ. ಬೆಂಗಳೂರಿನ ವಾತಾವರಣವು ಸಮಶೀತೋಷ್ಠವಾಗಿದೆ.
ಸರ್ವೋಚ್ಛ ನ್ಯಾಯಾಲಯ ಮತ್ತು ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿನಲ್ಲೇ ವಾಸಿಸುತ್ತಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪನೆ ಅಗತ್ಯವಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಶ್ರೀಗಳನ್ನು ಭೇಟಿ ಮಾಡಿದ ತಂಡದಲ್ಲಿ ಸಂಚಾರಿ ಪೀಠ ಸ್ಥಾಪನಾ ಕ್ರಿಯಾ ಸಮಿತಿ ಕನ್ವಿನರ್ ಭದ್ರಾವತಿ ಸತೀಶ್, ಹಿರಿಯ ವಕೀಲರಾದ ವಿ.ಲಕ್ಷ್ಮೀಕಾಂತರಾವ್, ಹೆಚ್.ಪುರುಷೋತ್ತಮ್, ಬಿ.ಕೆ.ಶರ್ಮಿಳ, ತುಮಕೂರು ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ಅನಿಲ್ ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ