ಹಿರಿಯೂರು :
ನಗರದ ಚರ್ಚ್ ರಸ್ತೆಯ ಕಾರ್ಪೋರೇಷನ್ ಬ್ಯಾಂಕ್ ಬಿಲ್ಡಿಂಗ್ ಮಹಡಿಯ ಮೇಲೆ ಏರ್ಟೆಲ್ ಕಂಪನಿಯವರು, ಸೋಲಾರ್ ಯೂನಿಟ್ ಹಾಕುತ್ತಿದ್ದೀವಿ ಎಂಬುದಾಗಿ ಸುತ್ತಲ ಜನರಿಗೆ ಸುಳ್ಳು ಮಾಹಿತಿನೀಡಿ ರಾತ್ರೋರಾತ್ರಿ ಮೊಬೈಲ್ ಟವರ್ ನಿರ್ಮಿಸಿದ್ದಾರೆ.
ಈ ಪ್ರದೇಶದ ಸುತ್ತಲೂ ಸಾರ್ವಜನಿಕ ಶಾಲೆಗಳು ಹಾಗೂ ಸಾರ್ವಜನಿಕ ಆಸ್ಪತ್ರೆ, ಮುಸ್ಲಿಂರಮಸೀದಿ, ಜೈನರದೇವಸ್ಥಾನ, ಹಿಂದೂಗಳ ಶ್ರೀಕೃಷ್ಣದೇವಸ್ಥಾನ, ಬ್ರಮ್ಮಕುಮಾರಿ ವಿಶ್ವವಿದ್ಯಾನಿಲಯ, ಕ್ರೈಸ್ತ ಮಂದಿರ ಸೇರಿದಂತೆ ಅಸಂಷನ್ ಶಾಲೆಯಿದ್ದು ಈ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಕಳಿಯುತ್ತಿದ್ದು ಈ ಟವರ್ ಸುತ್ತಲೂ ಅತ್ಯಂತ ಜನನಿಬಿಡ ವಸತಿ ಪ್ರದೇಶವಿದೆ.
ಹೀಗೆ ಯಾವುದೇ ರೀತಿಯ ಕಡಿವಾಣ ಇಲ್ಲದೆ ಬೇಕಾಬಿಟ್ಟಿ ಮೊಬೈಲ್ ಟವರ್ ಆಳವಡಿಸುವುದನ್ನು ನಿಯಂತ್ರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಎಲ್ಲ ಮೊಬೈಲ್ ಕಂಪನಿಗಳಿಗೆ ಸಾರ್ವಜನಿಕಶಾಲೆ, ಕಾಲೇಜು, ಆಸ್ಪತ್ರೆ, ಧಾರ್ಮಿಕ ಸಂಸ್ಥೆಗಳ ಸಮೀಪ ಟವರ್ ಅಳವಡಿಸುವದನ್ನು ನಿಷೇದಿಸಿ ಆದೇಶ ಹೊರಡಿಸಿದೆ. ಅಲ್ಲದೆ ಈಗಾಗಲೇ ಟವರ್ ಅಳವಡಿಸಿದ್ದರೂ ಮೂರು ತಿಂಗಳ ಒಳಗಾಗಿ ತೆರವುಗೊಳಿಸಬೇಕು ಎಂಬ ನಿಯಮ ರೂಪಿಸಿದೆ.
ಸಾರ್ವಜನಿಕ ಹಿತರಕ್ಷಣೆ ದೃಷ್ಠಿಯಲ್ಲಿ ಈಗಾಗಲೇ ಸರ್ಕಾರಿ ಆದೇಶ ಮತ್ತು ಪತ್ರಿಕಾ ಪ್ರಕಟಣೆ ಆಗಿದ್ದರು ಈ ಮೊಬೈಲ್ ಕಂಪನಿಗಳು ಈ ರೀತಿ ಗುಂಡಾವರ್ತನೆ ಯಿಂದ ರಾತ್ರೋರಾತ್ರಿ ಮೊಬೈಲ್ ಟವರ್ ಅಳವಡಿಸುವುದು ಸಮಂಜಸವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ಬಗ್ಗೆ ನಗರಸಭೆ ಕಮೀಷನರ್ ಸೇರಿದಂತೆ ತಾ||ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಈ ಕೆಲಸಕ್ಕೆ ತಡೆನೀಡುವಂತೆ ಅರ್ಜಿಗಳನ್ನು ಕೊಟ್ಟಿದ್ದರು ಏರ್ಟೆಲ್ ಟವರ್ ಕಂಪನಿಯವರು ನಮಗೆ ಅಧಿಕಾರಿಗಳಿಂದ ಹೇಗೆ ಕೆಲಸ ಮಾಡಿಕೊಳ್ಳಬಹುದು ಎಂಬುದು ಗೊತ್ತಿದೆ ನಿಮ್ಮ ಅರ್ಜಿಗಳಿಗೆಲ್ಲಾ ನಾವು ಅಂಜುವುದಿಲ್ಲಾ ಎಂಬುದಾಗಿ ಜನರಿಗೆ ಅವಾಜ್ ಹಾಕುತ್ತಿದ್ದಾರೆ. ಈ ಬಗ್ಗೆ ಕೂಡಲೇ ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳಬೇಕು ಎಂಬುದಾಗಿ ಸಾರ್ವಜನಿಕರ ಒತ್ತಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ