ಬೆಂಗಳೂರು:
ಕಾಂಗ್ರೆಸ್ ಸಿದ್ಧಪಡಿಸಿದ ಮನೆಗೆ ಸುಣ್ಣ-ಬಣ್ಣ ಹಚ್ಚಿ ಮನೆ ಹೇಗಿದೆ ನೋಡಿ ಎಂದು ಮೋದಿ ಕೇಳುತ್ತಿದ್ದಾರೆ. ಆದರೆ ಮನೆ ಕಟ್ಟಿದ್ದು ಮಾತ್ರ ಕಾಂಗ್ರೆಸ್ ಅನ್ನುವುದನ್ನು ಮರೆತಿದ್ದಾರೆ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಟಾಂಗ್ ಕೊಟ್ಟಿದ್ದಾರೆ.
ಮಿಷನ್ ಶಕ್ತಿ ಉಪಗ್ರಹ ಉಡಾವಣೆ ಬಗ್ಗೆ ಕಲಬುರಗಿ ನಗರದಲ್ಲಿ ಮಾತನಾಡಿದ ಅವರು, ವಿಜ್ಞಾನಿಗಳು ಮಾಡಿದ ಕೆಲಸಕ್ಕೆ ಮೋದಿ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ. ಉಪಗ್ರಹ ನಿರೋಧಕ ಕ್ಷಿಪಣಿ(ಎ-ಸ್ಯಾಟ್) ಯುಪಿಎ ಅವಧಿಯಲ್ಲಿ ಸಿದ್ಧಗೊಂಡಿತ್ತು.
2012ರಲ್ಲೇ ಇದರ ಉಡಾವಣೆಗೆ ಸಿದ್ಧತೆ ಆರಂಭವಾಗಿತ್ತು. ಯುಪಿಎ ಸರ್ಕಾರ ಸಿದ್ಧಪಡಿಸಿದ್ದನ್ನು ಈಗ ಉಡಾವಣೆ ಮಾಡಿ ತಮ್ಮದೆಂದು ಶಹಬ್ಬಾಷ್ ಗಿರಿ ತೆಗೆದುಕೊಳ್ಳುತ್ತಿದ್ದಾರೆ ಅಷ್ಟೇ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಮೋದಿಗೆ ಟಾಂಗ್ ನೀಡಿದ ಖರ್ಗೆಯುಪಿಎ ಸರ್ಕಾರದಲ್ಲಿ 12 ಬಾರಿ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೆವು. ಆದರೆ ನಾವೆಂದೂ ಈ ರೀತಿ ಪ್ರಚಾರ ಪಡೆಯಲಿಲ್ಲ. ದೇಶದ ಪ್ರಧಾನಿ ಯಾರೇ ಇದ್ದರೂ, ಸೈನಿಕರು ಅವರೇ ಇರುತ್ತಾರೆ. ಸೈನಿಕರು, ವಿಜ್ಞಾನಿಗಳು ಮಾಡಿದ ಕೆಲಸಕ್ಕೆ ನಾವು ಮಾಡಿದ್ದೇವೆ ಎಂದು ಹೇಳಿಕೊಳ್ಳುವುದು ಸರಿಯಲ್ಲ ಎಂದು ಖರ್ಗೆ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
