ಹಿರಿಯೂರು :
ಕಾಂಗ್ರೆಸ್ ಪಕ್ಷದ ಬೇರೆಬೇರೆ ಹಂತದ ಮುಖಂಡರು ಮೋದಿಯವರ ಬಗ್ಗೆ ಟೀಕೆ ಮಾಡುವ ಭರದಲ್ಲಿ ಸುಳ್ಳಿನ ಕಂತೆಗಳನ್ನು ಪೋಣಿಸುತ್ತಿದ್ದಾರೆ. ಅದಕ್ಕೆಲ್ಲ ಉತ್ತರ ನೀಡುವ ಅಗತ್ಯವಿಲ್ಲ. ಕಾರಣ ಮೋದಿ ಏನೆಂಬುದನ್ನು ಮತದಾರರು ಚೆನ್ನಾಗಿ ಅರಿತಿದ್ದಾರೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದಲ್ಲಿ ಬೆಂಬಲಿಗರ ಜೊತೆ ಬಿಜೆಪಿ ಪಕ್ಷದ ಲೋಕಸಭಾ ಅಭ್ಯರ್ಥಿ ಎ.ನಾರಾಯಣಸ್ವಾಮಿ ಪರವಾಗಿ ಪಾದಯಾತ್ರೆಯ ಮೂಲಕ ಮತ ಯಾಚಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.ಕಾಂಗ್ರೆಸ್ ಜೆಡಿಎಸ್ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಕೈಜೋಡಿಸಿರುವುದಾಗಿ ಹೇಳಿಕೊಂಡಿದೆ. ಯಾರು ಕೋಮುವಾದಿಗಳು ಯಾರು ಜಾತಿವಾದಿಗಳು, ಎಂಬುದನ್ನು ಮಂಡ್ಯದಲ್ಲಿ ನಡೆಯುತ್ತಿರುವ ಚುನಾವಣೆಯನ್ನು ನೋಡಿದವರು ಅರ್ಥಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾರಾಯಣಸ್ವಾಮಿ ಬಗ್ಗೆ ಸಲ್ಲದ ಅಪಪ್ರಚಾರ ಮಾಡಲಾಗುತ್ತಿದೆ. ಸಮಾಜ ಕಲ್ಯಾಣ ಸಚಿವರಾಗಿ ಅವರು ಮಾಡಿದ ಅಭಿವೃದ್ಧಿ ಕೆಲಸಗಳನ್ನು ನಾಡಿನ ಜನ ಮರೆತಿಲ್ಲ. ಎಲ್ಲ ಅಪಪ್ರಚಾರಗಳನ್ನು ಮೀರಿ ಅವರು ಗೆಲುವು ಪಡೆಯಲಿದ್ದಾರೆ. ಪ್ರಚಾರಕ್ಕೆ ಹೋದ ಕಡೆ ಜನ ಮೋದಿ ಮೋದಿ ಎಂದು ಸ್ವಯಂ ಪ್ರೇರಿತರಾಗಿ ಪೋಷಣೆ ಕೂಗುತ್ತಾರೆ. ದೇಶದ ಭದ್ರತೆಗೆ ಅಭಿವೃದ್ಧಿಗೆ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕೆಂಬುದು ದೇಶದ ಜನತೆಯ ಬಯಕೆ ಎಂದು ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ದ್ಯಾಮಣ್ಣ, ನಗರಸಭೆ ಮಾಜಿ ಸದಸ್ಯೆ ತಿಪ್ಪಮ್ಮ, ಶಿವರಂಜಿನಿ ಮುಂತಾದವರು ಉಪಸ್ಥಿತರಿದ್ದರು.