ಶಿರಾ:
ಶನಿವಾರ ರಾತ್ರಿ ದೇವರ ಪ್ರಸಾದವನ್ನು ತಿಂದ ಸುಮಾರು 150ಕ್ಕೂ ಹೆಚ್ಚು ಮಂದಿ ಗ್ರಾಮಸ್ಥರು ಅಸ್ವಸ್ಥರಾಗಿ ವಾಂತಿ-ಬೇಧಿಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಘಟನೆ ಭಾನುವಾರ ನಡೆದಿದೆ.
ಘಟನೆಯ ವಿವರ:
ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ಚಿನ್ನಪ್ಪನಹಳ್ಳಿ ಗ್ರಾಮದಲ್ಲಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಏ:27ರ ಶನಿವಾರ ಸಂಜೆ ಇದೇ ಗ್ರಾಮದ ಮರಿಯಣ್ಣ ಎಂಬುವರು ದೇವರಿಗೆ ಪೂಜೆ ಮಾಡಿಸಿ ಎಲ್ಲರಿಗೂ ಅನ್ನ, ಸಾಂಬರ್ ಹಾಗೂ ಸಿಹಿ ಪದಾರ್ಥದ ಊಟವನ್ನು ಹಾಕಿಸಿದ್ದರು.
ಭಾನುವಾರ ಮಧ್ಯಾನ್ಹ ಶನಿವಾರ ಊಟಮಾಡಿದ್ದ ಮಾಡಿದ್ದ ಕೆಲವು ಮಂದಿ ಹೊಟ್ಟೆ ನೋವು, ವಾಂತಿ, ಬೇಧಿ ಎಂದು ಸಮೀಪದ ಕಳ್ಳಂಬೆಳ್ಳ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಾರಂಭಿಸಿದರು.ಮಧ್ಯಾನ್ಹದ ನಂತರ ಮತ್ತಲವು ಮಂದಿ ವಾಂತಿ-ಬೇಧಿ ಜಾಸ್ತಿಯಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಾದರು. ರಾತ್ರಿ 7 ಗಂಟೆಯ ಹೊತ್ತಿಗೆ ತುರ್ತು ವಾಹನದಲ್ಲಿ 100ಕ್ಕೂ ಹೆಚ್ಚು ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಸುಮಾರು ಒಟ್ಟು 150 ಮಂದಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದಾರೆ, 45ಕ್ಕೂ ಹೆಚ್ಚು ಮಂದಿಯನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಶನಿವಾರದಂದು ದೇವರ ಪ್ರಸಾದವೆಂದು ನೀಡಲಾಗಿದ್ದ ಆಹಾರವನ್ನು ತಾಮ್ರದ ಪಾತ್ರೆಯಲ್ಲಿ ತಯಾರಿಸಿದ್ದು ಎನ್ನಲಾಗಿದ್ದು ಸದರಿ ಆಹಾರ ವಿಷಪೂರಿತವಾಗಿರಬಹುದೆಂದು ಶಂಕಿಸಲಾಗಿದೆ. ಗ್ರಾಮದ ಕುಡಿಯುವ ನೀರಿನ ಪೂರೈಕೆಯ ವ್ಯತ್ಯಯದಲ್ಲೂ ಈ ಘಟನೆ ಸಂಭವಿಸಿರಬಹುದೆಮದು ಶಂಕಿಸಲಾಗಿದೆ. ಚಿನ್ನಪ್ಪನಹಳ್ಳಿಯ ಕಿರಣ್ಕುಮಾರ್, ತಿಪ್ಪಯ್ಯ, ಲಿಂಗಪ್ಪ, ಜೈಪ್ರಕಾಶ್, ಸುಶೀಲಮ್ಮ, ಬೂತಣ್ಣ, ಗಂಗಮ್ಮ, ರಾಮಕೃಷ್ಣಯ್ಯ, ಜಗನ್ನಾಥ್, ನಾಗರತ್ನಮ್ಮ, ನಾಗರಾಜು, ಚಿಕ್ಕೀರಪ್ಪ, ಕಮಲಮ್ಮ, ತಿಮ್ಮರಾಯಪ್ಪ, ಪಲ್ಲವಿ, ಹನುಮಂತರಾಯಪ್ಪ ಸೇರಿದಂತೆ 60ಕ್ಕೂ ಹೆಚ್ಚು ಮಮದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ, ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಿ, ನಗರಸಭೆಯ ಮಾಜಿ ಅಧ್ಯಕ್ಷ ಆರ್.ರಾಘವೇಂದ್ರ, ತಾ.ಪಂ. ಉಪಾಧ್ಯಕ್ಷ ರಂಗನಾಥಗೌಡ, ರವಿಶಂಕರ್, ರಮೇಶ್(ಪಡಿ) ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿದರು.
ಡಿ.ಎಸ್.ಪಿ. ವೆಂಕಟಸ್ವಾಮಿ, ನಗರ ಠಾಣಾ ಸಿ.ಪಿ.ಐ. ರಂಗಸ್ವಾಮಿ ಶಿರಾ ಆಸ್ಪತ್ರೆಯಲ್ಲಿಯೇ ಮೊಕ್ಕಾಂ ಹೂಡಿ ವಾಂತಿ-ಬೇಧಿ ಪ್ರಕರಣದಿಂದ ದಾಖಲಾದವರ ಬಗ್ಗೆ ಮಾಹಿತಿ ಪಡೆದು ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡುವ ಪ್ರಯತ್ನ ಮಾಡುತ್ತಿದ್ದರೆ ಮತ್ತೊಂದೆಡೆ ಸ್ಥಳೀಯ ವೈದ್ಯರು ಸೂಕ್ತ ಚಿಕಿತ್ಸಾ ಕ್ರಮಗಳನ್ನು ಕೈಗೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/04/sira-photo-number-228.4.20.gif)