ಬೆಂಗಳೂರು
ಕಾರು ಇಳಿದು ಹೋಗುತ್ತಿದ್ದ ವ್ಯಕ್ತಿಯೊಬ್ಬರ ಬಳಿ 3.5 ಲಕ್ಷ ರೂ. ಹಣವಿದ್ದ ಬ್ಯಾಗನ್ನು ದುಷ್ಕರ್ಮಿಯೊಬ್ಬ ಬೆದರಿಸಿ ಕಸಿದು ಪರಾರಿಯಾಗಿರುವ ದುರ್ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಾವರೆಕೆರೆಯ ಕ್ಯಾಬ್ ಚಾಲಕ ಈರೇಗೌಡ ಅವರು ರಾತ್ರಿ 11.30ರ ವೇಳೆ ಜಾಲಹಳ್ಳಿ ಕ್ರಾಸ್ನಿಂದ ಕಾರಿನಲ್ಲಿ ಬಂದು ಲಗ್ಗೆರೆ ಬಳಿ ಇಳಿದುಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.
ಕಾರುಗಳನ್ನು ಬಾಡಿಗೆಗೆ ಬಿಡುತ್ತಿದ್ದ ಈರೇಗೌಡ ಅವರು, ಬಾಡಿಗೆ ಹಣವನ್ನು ವಸೂಲಿ ಮಾಡಿಕೊಂಡು ಬ್ಯಾಗ್ನಲ್ಲಿ ಇಟ್ಟುಕೊಂಡು ಜಾಲಹಳ್ಳಿ ಕ್ರಾಸ್ ಬಳಿ ನಿಂತಿದ್ದರು. ಈ ವೇಳೆ ಬಂದ ಕಾರನ್ನು ಹತ್ತಿಕೊಂಡ ಅವರು, ಲಗ್ಗೆರೆಗೆ ಬಿಡುವಂತೆ ಕೇಳಿದ್ದರು.
ಕಾರಿನಲ್ಲಿ ಹತ್ತಿಸಿಕೊಂಡ ಚಾಲಕ ಲಗ್ಗೆರೆ ಬಳಿ ಇಳಿಸಿ ಹಣ ಕೇಳಿದಾಗ ಬ್ಯಾಗ್ನಲ್ಲಿದ್ದ 3.5 ಲಕ್ಷ ರೂ. ಹಣದಲ್ಲಿ ನೂರು ರೂ. ವನ್ನು ತೆಗೆದುಕೊಟ್ಟಿದ್ದರು. ಹಣ ನೋಡಿದ ಚಾಲಕ ಕೂಡಲೇ ಬೆದರಿಸಿ, ಬ್ಯಾಗನ್ನು ಕಸಿದು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾನೆ.
ಪ್ರಕರಣ ದಾಖಲಿಸಿರುವ ಪೀಣ್ಯ ಪೊಲೀಸರು, ಹಣ ದೋಚಿದ ದುಷ್ಕರ್ಮಿಗಾಗಿ ತೀವ್ರ ಶೋಧ ನಡೆಸಿದ್ದಾರೆ
ಹಳೆ ಆರೋಪಿಗಳ ವಿಚಾರಣೆ
ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಮಾರು 90 ಮಂದಿ ಹಳೆ ಆರೋಪಿಗಳನ್ನು ಶನಿವಾರ ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಮುಂಜಾನೆಯಿಂದಲೇ ಕಾರ್ಯಾಚರಣೆ ನಡೆಸಿದ ಪೊಲೀಸರು ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ, ವಾಹನ ಕಳವು ಸೇರಿದಂತೆ, ಇನ್ನಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿರುವ ಹಳೆಆರೋಪಿಗಳನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ ಎಂದು ಡಿಸಿಪಿ ಕಲಾಕೃಷ್ಣಸ್ವಾಮಿ ತಿಳಿಸಿದ್ದಾರೆ.
ಹಳೆಆರೋಪಿಗಳ ಚಟುವಟಿಕೆಗಳು, ಉದ್ಯೋಗ, ವಾಸ ಸ್ಥಳ, ಸಂಬಂಧಿಕರ ಮಾಹಿತಿ ಪಡೆದುಕೊಳ್ಳಲಾಗಿದ್ದು, ಮುಂದೆ ಅಪರಾಧ ಕೃತ್ಯಗಳಲ್ಲಿ ತೊಡಗದಂತೆ, ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








