ಯುಜಿಡಿ ಸಂಪರ್ಕ ಗೊಂದಲ: ಪಾಲಿಕೆಗೆ ಮಂಡಲಿ ಪತ್ರ

ತುಮಕೂರು
     ತುಮಕೂರು ನಗರದಲ್ಲಿ ಒಳಚರಂಡಿ (ಯುಜಿಡಿ) ಯೋಜನೆ ಅನುಷ್ಠಾನದಲ್ಲಿ ಗೊಂದಲ ಆಗಿರುವುದು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ, ಇದೀಗ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಯು ತುಮಕೂರು ಮಹಾನಗರ ಪಾಲಿಕೆಗೆ ಪತ್ರ ಬರೆದು ನಗರದಲ್ಲಿರುವ ಒಟ್ಟು ಮನೆಗಳ ಸಂಖ್ಯೆ ಮತ್ತು ಒಳಚರಂಡಿ ಸಂಪರ್ಕ ಪಡೆದಿರುವ ಸಂಖ್ಯೆಯ ವಿವರ ನೀಡುವಂತೆ ಕೋರಿರುವುದು ಬೆಳಕಿಗೆ ಬಂದಿದೆ.
     ಪ್ರಸ್ತುತ ಅಮೃತ್ ಸಿಟಿ ಯೋಜನೆಯಡಿ ಗುಜರಾತಿನ ಜಯಂತಿ ಸೂಪರ್ ಕನ್ಸ್‍ಟ್ರಕ್ಷನ್ ಪ್ರೈ.ಲಿ. ಕಂಪನಿಯು ಮೊದಲನೆ ಹಂತದ ಒಳಚರಂಡಿ ಯೋಜನೆಯಲ್ಲಿ “ಮಿಸ್ಸಿಂಗ್ ಲಿಂಕ್ಸ್” (ಬಿಟ್ಟು ಹೋಗಿರುವ ಸಂಪರ್ಕ) ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಇದರಲ್ಲಿ 25,096 ಗೃಹ ಸಂಪರ್ಕಗಳನ್ನು ಕಲ್ಪಿಸಲು ಅವಕಾಶವಿದೆ. ಆದರೆ ಈವರೆಗೂ 4,160 ಮನೆಗಳಿಗೆ ಮಾತ್ರ ಒಳಚರಂಡಿ ಸಂಪರ್ಕ ಕಲ್ಪಿಸಲು ಸಾಧ್ಯವಾಗಿದೆ
     ಇದಲ್ಲದೆ ಮೊದಲನೇ ಹಂತದ ಒಳಚರಂಡಿ ಯೋಜನೆಯ ಪ್ರದೇಶ (ಕೋರ್ ಏರಿಯಾ) ದಲ್ಲಿ ಹಾಲಿ ಇರುವ ಮನೆಗಳಿಗೆ ಹೊಸದಾಗಿ ಒಳಚರಂಡಿ ಸಂಪರ್ಕ ಪಡೆದುಕೊಳ್ಳುವಂತೆ ಕೋರಿದ್ದರೂ, ನಿವಾಸಿಗಳಿಂದ ಯಾವುದೇ ಕೋರಿಕೆ ಬಂದಿಲ್ಲದಿರುವುದು ಮಂಡಲಿಯ ಕಳವಳಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಮಂಡಲಿಯು ಪಾಲಿಕೆಗೆ ಪತ್ರ ಬರೆದಿದೆ.
     ಒಳಚರಂಡಿ ಯೋಜನೆಗೆ ಸಂಬಂಧಿಸಿದಂತೆ ಒಟ್ಟು 88,523 ಆಸ್ತಿಗಳಿವೆಯೆಂದು ಮೊದಲಿಗೆ ಮಾಹಿತಿ ನೀಡಲಾಗಿತ್ತು. ಇದರಲ್ಲಿ 2 ನೇ ಹಂತದ ಕಾಮಗಾರಿಗಳಿಗೆ ಪರಿಗಣಿಸಿರುವ ಒಟ್ಟು 48,000 ಗೃಹ ಸಂಪರ್ಕಗಳು ಹಾಗೂ ಈಗಾಗಲೇ 1 ನೇ ಹಂತದ ಒಳಚರಂಡಿ ಕಾಮಗಾರಿಯಲ್ಲಿ ಸಂಪರ್ಕಿಸಿರುವ ಒಟ್ಟು 15,429 ಗೃಹಸಂಪರ್ಕಗಳನ್ನು ಹೊರತುಪಡಿಸಿ ಅಮೃತ್ ಯೋಜನೆಯಡಿ ಒಳಚರಂಡಿ ಕಾಮಗಾರಿಯಲ್ಲಿ ಒಟ್ಟು 25,096 ಗೃಹ ಸಂಪರ್ಕ ಕಲ್ಪಿಸಲು ಅನುವು ಮಾಡಲಾಗಿದೆ ಎಂದೂ ಸಹ ಸದರಿ ಪತ್ರದಲ್ಲಿ ವಿವರಿಸಲಾಗಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link