ಹೊಸದುರ್ಗ :
ಕೇಂದ್ರ ಸರ್ಕಾರ ರೂಪಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಪ್ರಸ್ತಾವಿತ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ) ಜಾರಿ ವಿರೋಧಿಸಿ ಮುಸ್ಲಿಂ ಸಮುದಾಯ ಪಟ್ಟಣದ ಜಾಮಿಯಾ ಮಸೀದಿಯಲ್ಲಿ ಶುಕ್ರವಾರ ಬೃಹತ್ ಸಭೆ ನಡೆಸಿತು.ಎನ್ಆರ್ಸಿ ಮತ್ತು ಸಿಎಎ ವಿರೋಧಿ ಜಾಮಿಯಾ ಮಸೀದಿ ಒಕ್ಕೂಟ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಕಾಂಗ್ರೆಸ್ ಮಾಜಿ ಶಾಸಕ ಬಿಜಿ ಗೋವಿಂದಪ್ಪ ಸೇರಿದಂತೆ ವಿವಿಧ ಮುಖಂಡರು ಬೆಂಬಲ ವ್ಯಕ್ತಪಡಿಸಿದರು.
ಮಂಗಳೂರಿನ ಎಸ್ ಎಸ್ ಎಫ್ ರಾಜ್ಯ ಕಾರ್ಯದರ್ಶಿ ಕೆ.ಎಂ ಮುಸ್ತಾಫ ಇಮಾಮಿ ಸಕಾಫಿ ಮಾತನಾಡಿ, ಮುಸ್ಲಿಮರು ಈ ದೇಶದ ಪ್ರಜೆಗಳು. ನಾವೂ ಭಾರತೀಯರೇ. ಯಾವುದೇ ಕಾರಣಕ್ಕೂ ಸಿಎಎ ಮತ್ತು ಎನ್ಆರ್ಸಿಯನ್ನು ನಾವು ಒಪ್ಪುವುದಿಲ್ಲ. ಕೇಂದ್ರ ಸರ್ಕಾರ ಇವುಗಳನ್ನು ಜಾರಿಗೊಳಿಸಲು ಮುಂದಾಗಬಾರದು? ಎಂದರು.
ಮಾಜಿ ಶಾಸಕ ಬಿಜಿ ಗೋವಿಂದಪ್ಪ ಮಾತನಾಡಿ, ಕೇಂದ್ರ ಸರ್ಕಾರ ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ರೂಪಿಸಿ ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿದೆ. ಸಿಎಎ ಮತ್ತು ಎನ್ಆರ್ಸಿಗಳಿಂದಾಗಿ ಮುಸ್ಲಿಮರಿಗೆ ಅಭದ್ರತೆ ಭಾವನೆ ಉಂಟಾಗಿದೆ. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಒಕ್ಕೂಟ ಬಲವಾಗಿ ಖಂಡಿಸುತ್ತದೆ. ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕಾಯ್ದೆಯನ್ನು ವಾಪಸ್ ಪಡೆಯಬೇಕು ಹಾಗೂ ಎನ್ಆರ್ಸಿಯನ್ನು ದೇಶದಾದ್ಯಂತ ಜಾರಿ ಮಾಡಬಾರದು ಎಂದು ಹೇಳಿದರು.
ಪುರಸಭೆ ಮಾಜಿ ಅಧ್ಯಕ್ಷ ಗೋ ತಿಪ್ಪೇಶ್ ಮಾತನಾಡಿ, ಜಾತ್ಯಾತೀತರನ್ನು ಅವಹೇಳನ ಮಾಡುವ ಕಾರ್ಯ ನೋವು ತರುತ್ತದೆ. ಮನುಷ್ಯ ಪ್ರೀತಿ ಮಾಡುವವರನ್ನು ಅಪಮಾನ ಮಾಡಲಾಗುತ್ತಿದೆ. ನರೇಂದ್ರ ಮೋದಿಯ ನೀತಿಗಳು ಸರಿ ಇಲ್ಲ. ಶ್ರೀಮಂತರ, ಬಂಡವಾಳಶಾಹಿಗಳ ಪರ ಸರಕಾರ ಇದೆ. ಒಟ್ಟಾಗಿ ಬದುಕಬೇಕು ಎಂಬ ಚಿಂತನೆಯನ್ನು ರಾಷ್ಟ್ರ ಮಾಡುತ್ತಿದ್ದರೆ, ಅದನ್ನು ಒಡೆಯುವ ಕೆಲಸವನ್ನು ಕೇಂದ್ರ ಮಾಡುತ್ತಿದೆ ಎಂದರು.
ಇದೇ ವೇಳೆ ಜಿಲ್ಲಾ ಪಂಚಾಯತ್ ಸದಸ್ಯ ಡಾ.ಕೆ ಅನಂತ್ ಮಾತನಾಡಿದರು. ಗೌಸಿಯಾ ಗ್ರೂಪ್ ಮುಖಂಡ ಪುರಸಭಾ ಸದಸ್ಯ ಜಾಫರ್ ಸಾಧಿಕ್, ಇಮ್ರಾನ್, ಅಲ್ತಾಫ್, ಸೈಫುಲ್ಲಾ, ಮುಜಾಫಾಷಾ, ಅಪ್ತರ ಅಹಮದ್, ಜೆಡಿಎಸ್ ಯುವ ಮುಖಂಡ ಅರ್ಪಥ್ ಖಾನ್ ಹಾಗೂ ಮುಖಂಡರು ಭಾಗವಹಿಸಿದ್ದರು.