ಧರ್ಮಪುರ;
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮತ್ತು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರಗಳ ಅವಧಿಯಲ್ಲಿ ರೈತಪರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಟಾನದ ಬದಲಾಗಿ ರೈತರ ಆತ್ಮಹತ್ಯೆಗಳೇ ಸರ್ಕಾರಗಳ ಉಡುಗೊರೆಗಳಾದವು ಎಂದು ಚಿತ್ರದುರ್ಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಡಾ|| ಬಿ.ಮಹಂತೇಶ್ ಆರೋಪಿಸಿದರು.
ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿಯ ಐನಹಳ್ಳಿ ಗ್ರಾಮದಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಹಿರಿಯೂರು ಇದರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ “ಚುನಾವಣಾ ಪ್ರಚಾರ ಸಭೆ ಮತ್ತು ಮನೆ ಮನೆ ಸಂಪರ್ಕ ಅಭಿಯಾನ” ಕಾರ್ಯಕ್ರಮದಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಇವರ ಪರವಾಗಿ ಮತಯಾಚಿಸಿ ಮಾತನಾಡಿದರು.
ಕೃಷಿ ಕ್ಷೇತ್ರದ ಪ್ರಗತಿಯಲ್ಲಿ ರಾಜ್ಯಸರ್ಕಾರಗಳ ಪಾತ್ರ ತುಂಬಾ ಮಹತ್ವದ್ದು. ಆದರೆ ಕೃಷಿ ಪ್ರಧಾನ ರಾಜ್ಯವಾದ ಕರ್ನಾಟಕದಲ್ಲಿ ಮಾತ್ರ ಹಿಂದೆ ಆಳಿದ ಕಾಂಗ್ರೆಸ್ ಮತ್ತು ಈಗಿನ ಜನತಾದಳ ಪಕ್ಷಗಳು ಕೃಷಿಯನ್ನು ಸಂಪೂರ್ಣ ನಿರ್ಲಕ್ಷಿಸಿವೆ, ಹೀಗಾಗಿ ಕಳೆದ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯ 5 ವರ್ಷಗಳಲ್ಲಿ 3781 ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾದರು ಎಂದು ಆರೋಪಿಸಿದರು
ಕರ್ನಾಟಕದಲ್ಲಿ ಕಳೆದ 5 ವರ್ಷಗಳ ಕಾಂಗ್ರೆಸ್ ಸರ್ಕಾರ ಮತ್ತು ಈಗಿನ ಮೈತ್ರಿ ಸರ್ಕಾರದ ಒಂದು ವರ್ಷದ ಅವಧಿಯಲ್ಲಿ ಒಟ್ಟು 4064 ಕ್ಕೂ ಹೆಚ್ಚು ಸರಣಿ ಆತ್ಮಹತ್ಯೆಗಳು ಸತತವಾಗಿ ನಡೆದರೂ ಸಹ ರೈತರ ಆತ್ಮಹತ್ಯೆಗಳಿಗೆ ಕಾರಣಗಳೇನು? ಎಂಬ ಬಗ್ಗೆಯಾಗಲೀ, ರೈತರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕುರಿತಾಗಲೀ, ಆತ್ಮಹತ್ಯೆಗಳನ್ನು ತಡೆಯುವ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮತ್ತು ಮೈತ್ರಿ ಸರ್ಕಾರಗಳು ಮಾಡಲಿಲ್ಲ. ಬದಲಾಗಿ ರೈತ ವಿರೋಧಿ ನೀತಿ ಅನುಸರಿಸಿದವು ಎಂದರು
ಬ್ಯಾಡರಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ನಾಗೇಶ್ ಮಾತನಾಡಿ, ಸ್ವಾತಂತ್ರಾನಂತರ ದೇಶವನ್ನು ಬಹುಕಾಲ ಆಳಿದ ಕಾಂಗ್ರೆಸ್ನ ತಪ್ಪು ನಿರ್ಧಾರಗಳಿಂದ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಟೀಕಿಸಿದರು
ಈ ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರಾದ ಶಿವಲಿಂಗಪ್ಪ, ನಾಗರಾಜು, ಈಶ್ವರಪ್ಪ, ರಾಜಶೇಖರಪ್ಪ, ಸೋಮಶೇಖರಪ್ಪ, ತಿಪ್ಪೇರುದ್ರಪ್ಪ, ಪರ್ವಪ್ಪ, ಸುರೇಶ್, ಅನಸೂಯಮ್ಮ, ಗೌರಮ್ಮ, ಶಾಂತಮ್ಮ, ಶಿಲ್ಪಶ್ರೀ, ಲತಾ, ಗಂಗಮ್ಮ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.