ಬೆಂಗಳೂರು
ಜಿಂಕೆ ಕೊಂಬು, ಆನೆ ದಂತ, ನಾಡ ಬಂದೂಕು ಮಾರಾಟ ಮಾಡಲು ಯತ್ನಿಸಿದ್ದ ವ್ಯಕ್ತಿ ಓರ್ವನನ್ನು ಸಿಕೆ ಅಚ್ಚುಕಟ್ಟು ಪೊಲೀಸರು ಬಂಧಿಸಿ, 5 ಜಿಂಕೆ ಕೊಂಬುಗಳು, ಒಂದು ಚಿಕ್ಕ ಆನೆ ದಂತ ಸೇರಿ ಒಂದು ಸಿಂಗಲ್ ಬ್ಯಾರಲ್ ನಾಡ ಬಂದೂಕು ವಶಪಡಿಸಿಕೊಂಡಿದ್ದಾರೆ. ರಾಮನಗರ ಮೂಲದ ಮಲ್ಲೇಶ್ (50) ಬಂಧಿತ ಆರೋಪಿಯಾಗಿದ್ದಾನೆ.
ಶನಿವಾರ ಬೆಳಗ್ಗೆ ನಗರದ ಬನಶಂಕರಿ ಬಸ್ ನಿಲ್ದಾಣ ಪಕ್ಕದ ಗಂಗಮ್ಮ ದೇವಸ್ಥಾನದ ಬಳಿ ವ್ಯಕ್ತಿ ಓರ್ವ ಎರಡು ಗೋಣಿ ಚೀಲದಲ್ಲಿ ಜಿಂಕೆ ಕೊಂಬು, ಆನೆ ದಂತ, ನಾಡ ಬಂದೂಕು ಇರಿಸಿಕೊಂಡು ಯಾರಿಗೋ ಕಾಯುತ್ತಿದ್ದಾನೆ ಎಂಬ ಬಾತ್ಮಿದಾರ ನೀಡಿದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದರು.
ಆರೋಪಿ ವಿರುದ್ಧ ವನ್ಯ ಜೀವಿ ಸಂರಕ್ಷಣೆ ಕಾಯ್ದೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಬಂಧಿತ ಮೂಲತ: ರಾಮನಗರ ಜಿಲ್ಲೆಯವನಾಗಿದ್ದು, ಆತನ ತಂದೆ ಕಾಲದಿಂದಲೂ ಇವರ ಕುಟುಂಬ ಬಂದೂಕಿನಿಂದ ಕಾಡು ಪ್ರಾಣಿಗಳನ್ನು ಬೇಟೆ ಯಾಡುತ್ತಿದ್ದರು. ಪ್ರಾಣಿಗಳ ಮಾಂಸ, ಚರ್ಮ, ಕೊಂಬು ಮಾರಾಟ ಮಾಡಿದರೆ ಹಣ ಬರುತ್ತದೆ ಎಂಬ ಉದ್ದೇಶದಿಂದ ತಮಿಳುನಾಡಿಗೆ ಹೋಗುವ ರಸ್ತೆಯಲ್ಲಿ ಯಾರಾದರೂ ದಾರಿ ಹೋಕರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದನು.
ಮೂರು ಜಿಂಕೆಗಳನ್ನು ಕೊಂದಿದ್ದು, ಅದರಲ್ಲಿನ 6 ಕೊಂಬಿನಲ್ಲಿ ಒಂದು ಕೊಂಬು ಮಾರಾಟ ಮಾಡಿ, 5 ಕೊಂಬು ತನ್ನ ಹೊಲದಲ್ಲಿ ಬಚ್ಚಿಟ್ಟಿದ್ದ. ನಂತರ ಆತನಿಗೆ ಕಾಡಿನಲ್ಲಿ ಚಿಕ್ಕ ಆನೆ ದಂತದಂತಹ ವಸ್ತು ದೊರಕಿತ್ತು. ಅದನ್ನು ಸೇರಿಸಿ ಕೊಂಬಿನ ಜೊತೆಗಿಟ್ಟಿದ್ದನು. ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದ ಆತ ಅವುಗಳನ್ನು ಮಾರಾಟ ಮಾಡಿ ಹಣ ಸಂಪಾದಿಸಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
