ಲೋಕಸಭಾ ಚುನಾವಣೆಗೆ ನಾಳೆ ಮತದಾನ

ದಾವಣಗೆರೆ:

      ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಎರಡನೇ ಹಂತದ ಮತದಾನ ಇಂದು (ಏ.23ರಂದು) ನಡೆಯಲಿದೆ. ದಾವಣಗೆರೆ ಕ್ಷೇತ್ರ ವ್ಯಾಪ್ತಿಯ 1,949 ಮತಗಟ್ಟೆಯಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6ರ ವರೆಗೆ ಹಕ್ಕು ಚಲಾಯಿಸಬಹುದಾಗಿದೆ.ಪ್ರಜಾತಂತ್ರದ ಹಬ್ಬವೆಂದೇ ಬಿಂಬಿತವಾಗಿರುವ ಮತದಾನಕ್ಕೆ ತಿಂಗಳಿಂದ ಸಜ್ಜಾಗಿದ್ದ ಚುನಾವಣಾ ಸಿಬ್ಬಂದಿ ಸೋಮವಾರ ಉತ್ಸಾಹದಿಂದ ಮತಗಟ್ಟೆಗಳತ್ತ ಹೆಜ್ಜೆ ಹಾಕಿದರು. ಅಭ್ಯರ್ಥಿ ಆಯ್ಕೆಗೆ ಮತದಾರರು ನೀಡುವ ಆದೇಶ ಹೊತ್ತು ಮಂಗಳವಾರ ರಾತ್ರಿ ಮರಳಲಿದ್ದಾರೆ. ಮೇ 23ರಂದು ಮತ ಎಣಿಕೆ ನಡೆಯಲಿದೆ.

      ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಸೇರಿ ದಾವಣಗೆರೆ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ, ಎಸ್‍ಯುಸಿಐ, ಬಿಎಸ್‍ಪಿ ಹಾಗೂ ಇತರೆ ಸಣ್ಣ-ಪುಟ್ಟ ಪಕ್ಷಗಳು ಮತ್ತು ಪಕ್ಷೇತರರು ಸೇರಿ ಒಟ್ಟು 25 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

       ಬಹಿರಂಗ ಚುನಾವಣಾ ಪ್ರಚಾರಕ್ಕೆ ಭಾನುವಾರ ಸಂಜೆಯೇ ತೆರೆ ಬಿದ್ದಿದ್ದು, ಮತದಾನದ ಮುನ್ನಾದಿನವಾದ ಸೋಮವಾರ ಅಭ್ಯರ್ಥಿಗಳು ಹಾಗೂ ಆಯಾ ಪಕ್ಷದ ಕಾರ್ಯಕತ್ರು ಮನೆಮನೆಗೆ ತೆರಳಿ ಮತ ಯಾಚಿಸುತ್ತಿದ್ದ ದೃಶ್ಯವೂ ಅಲ್ಲಲ್ಲಿ ಕಂಡುಬಂತು.

ಮಸ್ಟರಿಂಗ್ ಅಚ್ಚುಕಟ್ಟು:

     ಜಗಳೂರಿನ ಸರ್ಕಾರಿ ಪಿಯು ಕಾಲೇಜು, ಹರಪನಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಆಂಗ್ಲಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ, ಹರಿಹರದ ಸೇಂಟ್ ಮೇರಿಸ್ ಕಾನ್ವೆಂಟ್, ದಾವಣಗೆರೆ ಉತ್ತರ ಕ್ಷೇತ್ರದ ಶ್ರೀತರಳಬಾಳು ವಿದ್ಯಾಸಂಸ್ಥೆಯ ಅನುಭವನ ಮಂಟಪ, ದಾವಣಗೆರೆ ದಕ್ಷಿಣ ಕ್ಷೇತ್ರದ ಶ್ರೀತರಳಬಾಳು ವಿದ್ಯಾಸಂಸ್ಥೆ, ಅನುಭವನ ಮಂಟಪ (ಸಿಬಿಎಸ್‍ಸಿ ಬ್ಲಾಕ್). ಮಾಯಕೊಂಡ ಕ್ಷೇತ್ರಕ್ಕೆ ಸಂಬಂಧಿಸಿದಂತೆ ದಾವಣಗೆರೆಯ ಮೋತಿವೀರಪ್ಪ ಕಾಲೇಜು, ಚನ್ನಗಿರಿಯ ಸರ್ಕಾರಿ ಪಿಯು ಕಾಲೇಜು ಹಾಗೂ ಹೊನ್ನಾಳಿಯ ಶ್ರೀಮತಿ ಗಂಗಮ್ಮ ವೀರಭದ್ರಶಾಸ್ತ್ರಿ ಐಟಿಐ ಕಾಲೇಜುಗಳಲ್ಲಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ಕೇಂದ್ರ ತೆರೆಯಲಾಗಿತ್ತು.

      ಈ ಕಾಲೇಜುಗಳ ಆವರಣದಲ್ಲಿ ತೆರೆದಿದ್ದ ಮಸ್ಟರಿಂಗ್ ಕೇಂದ್ರಗಳಿಗೆ ಬಂದ ಸಿಬ್ಬಂದಿಗೆ ಬೆಳಗಿನ ಉಪಾಹಾರದ ವ್ಯವಸ್ಥೆ ಕಲ್ಪಿಸಲಾಗಿತ್ತು. ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತೆರೆದಿರುವ 1,949 ಮತಗಟ್ಟೆಗಳಿಗೆ ಅಗತ್ಯವಿರುವ ಪರಿಕರ ವಿತರಣೆ ಅಚ್ಚುಕಟ್ಟಾಗಿ ನಡೆಯಿತು. ಮತಗಟ್ಟೆಗೆ ಅನುಗುಣವಾಗಿ ನಿಗದಿಪಡಿಸಿದ್ದ ಕೊಠಡಿಯಲ್ಲಿ ಕುಳಿತ ಸಿಬ್ಬಂದಿಗೆ ಅಧಿಕಾರಿಗಳು ವಿದ್ಯುನ್ಮಾನ ಮತಯಂತ್ರ, ಮತಖಾತರಿ ಯಂತ್ರ (ವಿ.ವಿ.ಪ್ಯಾಟ್) ಹಾಗೂ ಮತಗಟ್ಟೆಗೆ ಅಗತ್ಯವಿರುವ ಪರಿಕರಗಳನ್ನು ವಿತರಿಸಿದರು.
 

     ಪ್ರತಿ ಮತಗಟ್ಟೆಗಳಿಗೆ ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ಇಬ್ಬರು ಸಹಾಯಕರನ್ನು ನಿಯೋಜಿಸಲಾಗಿದೆ. ಭದ್ರತೆಗೆ ಪೆಲೀಸ್ ಸಿಬ್ಬಂದಿ ಕೂಡ ಇರಲಿದ್ದಾರೆ. ಮತಯಂತ್ರ ಹಾಗೂ ಪರಿಕರಗಳನ್ನು ಸ್ವೀಕರಿಸಿದ ಸಿಬ್ಬಂದಿಯ ಮೊಗದಲ್ಲಿ ಮಂದಹಾಸ ಮೂಡಿತ್ತು. ಮತಯಂತ್ರ ಜೋಡಣೆ, ನಿರ್ವಹಣೆ ಹಾಗೂ ಸಾಗಣೆಗೆ ಸಂಬಂಧಿಸಿದಂತೆ ಅಧಿಕಾರಿಗಳು ತರಬೇತಿ ನೀಡಿದರು. ಮಧ್ಯಾಹ್ನದ ಊಟ ಮುಗಿಸಿಕೊಂಡು ಸಿಬ್ಬಂದಿಗಳನ್ನು ಮತಗಟ್ಟೆಗೆ ಕರೆದೊಯ್ಯಲು ವ್ಯವಸ್ಥೆ ಮಾಡಿದ್ದ 332 ಬಸ್‍ಗಳಲ್ಲಿ ಮತಗಟ್ಟೆಗಳತ್ತ ಪ್ರಯಾಣ ಬೆಳೆಸಿದರು. ಒಟ್ಟು 8,064 ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

      ತಾಪಮಾನ ಏರಿಕೆಯಿಂದ ಬಿಸಿಲಿನ ಧಗೆ ಹೆಚ್ಚಾಗಿದೆ. ಹೀಗಾಗಿ ಸಿಬ್ಬಂದಿಯ ಆರೋಗ್ಯದ ದೃಷ್ಟಿಯಿಂದ ಪ್ರತಿ ಮತಗಟ್ಟೆಗೆ ಕಿಟ್ ವಿತರಿಸಲಾಗಿದೆ. ಇದರಲ್ಲಿ ಕೆಲ ಮಾತ್ರೆಗಳು ಹಾಗೂ ಪ್ರಥಮ ಚಿಕಿತ್ಸೆಗೆ ಅಗತ್ಯವಿರುವ ಔಷಧಗಳು ಇವೆ. ಊಟ, ವಸತಿ, ಶೌಚಾಲಯ ಸೇರಿ ಮೂಲ ಸೌಕರ್ಯ ಒದಗಿಸಲಾಗಿದೆ.

       ಪ್ರತಿ ಸಿಬ್ಬಂದಿಗೆ ಊಟದ ಭತ್ಯೆ 150 ರೂ. ನೀಡಲಾಗುತ್ತಿದೆ. ಊಟದ ವ್ಯವಸ್ಥೆಯನ್ನು ಸಿಬ್ಬಂದಿಯೇ ಮಾಡಿಕೊಳ್ಳಬೇಕು. ಅಗತ್ಯ ಸಹಕಾರವನ್ನು ಮಾತ್ರ ನೀಡಲು ಸಾಧ್ಯವಿದೆ. ಬಿಸಿಯೂಟದ ಸಿಬ್ಬಂದಿಯ ಸೇವೆ ಪಡೆದು ಊಟ ತಯಾರಿಸಿಕೊಳ್ಳಲು ಅವಕಾಶವಿದೆ. ಆದರೆ, ಬಿಸಿಯೂಟದ ಸಾಮಗ್ರಿಗಳನ್ನು ಬಳಸಿಕೊಳ್ಳುವಂತಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ತಿಳಿಸಿದ್ದಾರೆ.

      ಕಣದಲ್ಲಿ 25 ಜನ ಅಭ್ಯರ್ಥಿಗಳು ಇರುವುದರಿಂದ ಎರಡು ಬ್ಯಾಲೆಟ್ ಯುನಿಟ್ (ಬಿಯು) ಉಪಯೋಗಿಸಲಾಗುತ್ತಿದೆ. ಇವುಗಳನ್ನು ಕ್ರಮಬದ್ಧವಾಗಿ ಜೋಡಿಸುವಂತೆ ಸೂಚಿಸಲಾಗಿದೆ. ಜೋಡಣೆ ಹಾಗೂ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಭಿತ್ತಿಪತ್ರವನ್ನು ಸಿಬ್ಬಂದಿಗೆ ನೀಡಲಾಗಿದೆ. ಮತಗಟ್ಟೆಯಲ್ಲಿ ಇವುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ.

       ಮತಗಟ್ಟೆಯಲ್ಲಿ ಮಂಗಳವಾರ ನಸುಕಿನಿಂದಲೇ ಮತದಾನದ ಪ್ರಕ್ರಿಯೆ ಆರಂಭವಾಗಲಿದೆ. ಬೆಳಿಗ್ಗೆ 6ರಿಂದ ಎಲ್ಲ ಅಭ್ಯರ್ಥಿಗಳ ಏಜೆಂಟರ ಸಮ್ಮುಖದಲ್ಲಿ ಅಣಕು ಮತದಾನ ನಡೆಯಲಿದೆ. ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗೆ ಕನಿಷ್ಠ ಒಂದೊಂದು ಮತಹಾಕಿ ಪರಿಶೀಲನೆ ಮಾಡಬಹುದಾಗಿದೆ. ಅಣಕು ಮತದಾನಕ್ಕೆ ಗರಿಷ್ಠ 50 ಮತಗಳನ್ನು ಹಾಕಲು ಅವಕಾಶವಿದೆ. ಎಲ್ಲವೂ ಸರಿಯಾಗಿದ್ದರೆ 7ಕ್ಕೆ ಸರಿಯಾಗಿ ಮತದಾನ ಶುರುವಾಗಲಿದೆ.

ವಿ.ವಿ.ಪ್ಯಾಟ್ ಸಂರಕ್ಷಣೆ:

       ಬಿಸಿಲ ಧಗೆಯಿಂದ ಮತ ಖಾತರಿ ಯಂತ್ರ (ವಿ.ವಿ.ಪ್ಯಾಟ್) ಸಂರಕ್ಷಣೆ ಮಾಡುವುದು ಸವಾಲಾಗಿದೆ. ಸೆನ್ಸಾರ್ ತಂತ್ರಜ್ಞಾನದಿಂದ ಕಾರ್ಯನಿರ್ವಹಿಸುವ ವಿ.ವಿ.ಪ್ಯಾಟ್‍ಗಳನ್ನು ತಂಪಾದ ಸ್ಥಳದಲ್ಲಿ ಇಡಬೇಕು. ಬಿಸಿಲು ತಾಗಿದರೆ, ಉಷ್ಣಾಂಶ ಹೆಚ್ಚಾದರೆ ಇದು ಕಾರ್ಯನಿರ್ವಹಸುವುದಿಲ್ಲ. ಹೀಗಾಗಿ, ಕಿಟಕಿಯ ಪಕ್ಕದಲ್ಲಿ ಮತಯಂತ್ರ ಇಡದಂತೆ ತಿಳಿವಳಿಕೆ ನೀಡಲಾಗಿದೆ. ಬೆಳಕು ನೇರವಾಗಿ ಯಂತ್ರದ ಮೇಲೆ ಬೀಳದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸಿಬ್ಬಂದಿಯ ಮೇಲಿದೆ.

      ಬಿಸಿಲು ಹೆಚ್ಚಾಗಿರುವ ಕಡೆಗಳಲ್ಲಿ ಮತಯಂತ್ರ ಹಾಗೂ ವಿವಿ ಪ್ಯಾಟ್ ಕೈಕೊಡುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ಮತಯಂತ್ರ, ವಿ.ವಿ.ಪ್ಯಾಟ್ ಇಟ್ಟುಕೊಳ್ಳಲಾಗಿದೆ. ಯಂತ್ರ ಕಾರ್ಯನಿರ್ವಹಿಸುತ್ತಿಲ್ಲ ಎಂಬುದು ಖಚಿತವಾದ ತಕ್ಷಣ ಮತ್ತೊಂದು ಯಂತ್ರವನ್ನು ಮತಗಟ್ಟೆಗೆ ಸಾಗಿಸಲಾಗುತ್ತದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

      ಲೋಕಸಭಾ ಕ್ಷೇತ್ರದ ವ್ಯಾಪ್ತಿಯ 1,949 ಮತಗಟ್ಟೆಗಳ ಪೈಕಿ 516 ಕ್ರಿಟಿಕಲ್ ಹಾಗೂ 80 ದುರ್ಬಲ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಮತಗಟ್ಟೆಗಳ ಮೇಲೆ ಆಯೋಗ ವಿಶೇಷ ನಿಗಾ ವಹಿಸಲಿದ್ದು, ಹೆಚ್ಚುವರಿ ಭದ್ರತೆ ಕಲ್ಪಿಸಲಾಗಿದೆ.

       ಮಾದರಿ ನೀತಿ ಸಂಹಿತೆ ಉಲ್ಲಂಘನೆ ತಡೆದು ಕ್ರಮ ಜರುಗಿಸಲು ಜಿಲ್ಲೆಯಲ್ಲಿ 203 ಸೆಕ್ಟರ್ ಆಫೀಸರ್ಸ್, 25 ಫ್ಲೈಯಿಂಗ್ ಸ್ಕ್ವಾಡ್, 44 ಎಸ್‍ಎಸ್‍ಟಿ, 11 ಸಹಾಯಕ ವೆಚ್ಚ ವೀಕ್ಷಕರು, 11 ಅಕೌಂಟಿಂಗ್ ಟೀಂ, 28 ವಿವಿಟಿ, 22 ವಿಎಸ್‍ಟಿ, 1 ಎಂಸಿಎಂಸಿ ಮತ್ತು 1 ಮೀಡಿಯಾ ಮಾನಿಟರಿಂಗ್ ಸೆಲ್ ಕಾರ್ಯ ನಿರ್ವಹಿಸಿದೆ.

3500 ಪೊಲೀಸರು:

       ಎಲ್ಲ ಮತಗಟ್ಟೆಗಳಲ್ಲಿನ ಭದ್ರತೆ ಮತ್ತು ಚುನಾವಣಾ ಕರ್ತವ್ಯಕ್ಕಾಗಿ ಸಿವಿಲ್, ಕೆಎಸ್‍ಆರ್‍ಪಿ, ಹೋಂಗಾಡ್ರ್ಸ್, ಸೆಂಟ್ರಲ್ ಡಿಫೆನ್ಸ್ ಸೇರಿದಂತೆ ಸುಮಾರು 3500 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ವಿಶೇಷ ಚೇತನ ಮತಗಟ್ಟೆ:

       ಅಂಗವಿಕಲ ಸಿಬ್ಬಂದಿಯೇ ಕಾರ್ಯನಿರ್ವಹಿಸುವ ಮತಗಟ್ಟೆಯನ್ನು ಇದೇ ಮೊದಲ ಬಾರಿಗೆ ಸ್ಥಾಪಿಸಲಾಗಿದೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಮತ್ತು ಹೊನ್ನಾಳಿ ತಲಾ ಒಂದು ವಿಶೇಷ ಚೇತನರ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.ಮುಕ್ತ ಮತ್ತು ನ್ಯಾಯಸಮ್ಮತ ಮತದಾನಕ್ಕೆ ತಂತ್ರಜ್ಞಾನದ ನೆರವು ಪಡೆದಿರುವ ಚುನಾವಣಾ ಆಯೋಗ ಜಿಪಿಎಸ್ ಕಣ್ಗಾವಲು ವ್ಯವಸ್ಥೆ ರೂಪಿಸಿದೆ. ಮತಯಂತ್ರಗಳನ್ನು ಮತಗಟ್ಟೆಗೆ ತಲುಪಿಸುವ ಹಾಗೂ ಮರಳಿ ಭದ್ರತಾ ಕೊಠಡಿಗೆ ತರುವ ವಾಹನಗಳ ಮೇಲೆ ಅಧಿಕಾರಿಗಳು ಹಾಗೂ ಅಭ್ಯರ್ಥಿಗಳು ನಿಗಾ ಇಡಲು ಸಾಧ್ಯವಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link