ಕೋಲಾರ
ಮಾದಕ ವಸ್ತು ಮಾರಾಟ, ಸೇವನೆ ಯಾರೇ ಮಾಡಿದರೂ ತಪ್ಪು, ಅದು ಚಿತ್ರರಂಗವಿರಲೀ, ಅಥವಾ ಇನ್ಯಾರೇ ಇರಲೀ. ಈ ಜಾಲದಲ್ಲಿರುವ ಕಬ್ಬಿಣದ ಕೈಗಳನ್ನು ಸರ್ಕಾರ ತುಂಡರಿಸುವ ಕೆಲಸ ಮಾಡಲಿದೆ ಎಂದು ಚಿತ್ರಟನ, ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚಿತ್ರನಟಿ ರಾಗಿಣಿ, ಅಥವಾ ಬೇರೆ ಯಾರೇ ಆಗಲೀ ಉಪ್ಪು ತಿಂದವರು ನೀರು ಕುಡಿಯಲೇಬೇಕು. ಯಾರೂ ಕೂಡ ಮಾದಕ ದ್ರವ್ಯಗಳಿಗೆ ವ್ಯಸನಿಗಳಾಗಬಾರದು. ನಮ್ಮ ಕಾಲಕ್ಕೂ ನಮ್ಮ ಮಕ್ಕಳ ಕಾಲಕ್ಕೂ ಜನರೇಷನ್ ಬದಲಾಗುತ್ತಿದೆ. ಚಿತ್ರರಂಗವೂ ಬದಲಾಗಿದೆ ಅಂದಮಾತ್ರಕ್ಕೆ ದುಶ್ಚಟಕ್ಕೆ ಬಲಿಯಾಗುವುದಾಗಲೀ ವ್ಯಸನಿಗಳಾಗುವುದಾಗಲೀ ಮಾಡಬಾರದು ಎಂದರು.
ತನಿಖೆಯಿಂದ ತಪ್ಪು ಯಾರು ಮಾಡಿದ್ದಾರೆ ಎನ್ನುವುದು ಜನರಿಗೆ ಗೊತ್ತಾಗಲಿದೆ. ತನಿಖೆಗೂ ಮುನ್ನ ಸುಕಾಸುಮ್ಮನೆ ಹೇಳಿಕೆ ನೀಡುವುದು, ಯಾರದೋ ಮೇಲೆ ಆರೋಪ ಮಾಡುವುದು ಸರಿಯಲ್ಲ. ಸರ್ಕಾರ ಯಾರನ್ನೂ ರಕ್ಷಿಸುವುದಿಲ್ಲ ಎಂದು ಹೇಳಿದರು.
ರಾಜ್ಯ ಆಹಾರ ನಿಗಮದ ಅಧ್ಯಕ್ಷರಾಗಿರುವ ತಾವು ಫುಡ್ ಪಾರ್ಕ್ ಗಳನ್ನು ಪರಿಶೀಲಿಸುತ್ತಿದ್ದು, ಈ ನಿಟ್ಟಿನಲ್ಲಿ ಮಾಲೂರಿನ ಆಹಾರ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲು ಬಂದಿರುವುದಾಗಿ ಸಚಿವರು ಹೇಳಿದರು. ರಾಜ್ಯದಲ್ಲಿ ಫುಡ್ ಪಾರ್ಕ್ ಗಳ ಸಂಖ್ಯೆಗಳನ್ನು ಹೆಚ್ಚಿಸಲಾಗುವುದು. ಕೋವಿಡ್ ಬಳಿಕ ಸ್ಥಿರವಾಗಿ ಉಳಿದಿರುವ ಕ್ಷೇತ್ರವೆಂದರೆ ಅದು ಕೃಷಿ ಕ್ಷೇತ್ರ ಮಾತ್ರ. 10 ಸಾವಿರ ಕೋಟಿ ರೂ.ಗಳನ್ನು ಪ್ರಧಾನಿ ನರೇಂದ್ರ ಮೋದಿ ಆಹಾರ ಉತ್ಪಾದನೆಗಳಿಗೆ ಮೀಸಲಿಟ್ಟಿದ್ದಾರೆ. ಕೋವಿಡ್ ಬಳಿಕ ಕೃಷಿ ಕ್ಷೇತ್ರಕ್ಕೆ ಹಾಗೂ ಆಹಾರ ಸಂಸ್ಕರಣಾ ಘಟಕಗಳಿಗೆ ಹೆಚ್ಚು ಒತ್ತು ನೀಡಲಾಗಿದ್ದು, ಜನರು ಸಹ ಇವುಗಳತ್ತ ಹೆಚ್ಚು ಒಲವು ತೋರಿದ್ದಾರೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ