ದಾವಣಗೆರೆ:
ನಗರದ ಹೈಸ್ಕೂಲ್ ಮೈದಾನದಲ್ಲಿರುವ ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣದಲ್ಲಿ ಫೆ.17ರಂದು ದಾವಣಗೆರೆ ಪೆಟ್ ಲವರ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ನಾಲ್ಕನೇ ರಾಜ್ಯಮಟ್ಟದ ಶ್ವಾನ ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ನಲ್ಲೂರು ಎಸ್.ರಾಘವೇಂದ್ರ ತಿಳಿಸಿದರು.
ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯಲ್ಲಿ ವಿಜೇತವಾದ ಶ್ವಾನಗಳಿಗೆ ಮೊದಲನೇ ಬಹುಮಾನ 15 ಸಾವಿರ, ಎರಡನೇ ಬಹುಮಾನ 10 ಸಾವಿರ, ಮೂರನೇ ಬಹುಮಾನ 5 ಸಾವಿರ ರೂ. ಮತ್ತು ಟ್ರೋಫಿ ನೀಡಲಾಗುವುದು. ದೇಸಿ ತಳಿಗೆ 3 ಸಾವಿರ ರೂ., ಬೆಸ್ಟ್ ಪಪ್ಪಿಗೆ 2 ಸಾವಿರ ರೂ., ಬೆಸ್ಟ್ ಜೂನಿಯರ್ ಹ್ಯಾಂಡ್ಲರ್ಗೆ ಆಕರ್ಷಕ ಬಹುಮಾನವಿರುತ್ತದೆ. ಶ್ವಾನದ ನಡಿಗೆ, ದೇಹಾಕಾರ, ಹಲ್ಲು ಮತ್ತು ಅದರ ವರ್ತನೆಯನ್ನು ನೋಡಿ ತೀರ್ಪುಗಾರರು ತೀರ್ಪು ನೀಡುತ್ತಾರೆ ಎಂದರು.
ದೇಶಿಯ ತಳಿಗಳಾದ ಮುಧೋಳ್ ಹೌಂಡ್, ರಾಜ್ಯಪಾಳ್ಯಂ, ಕಣ್ಣಿ ಮುಂತಾದವುಗಳನ್ನು ಪ್ರೋತ್ಸಾಹಿಸಲು ಉಚಿತ ಪ್ರವೇಶ ಒದಗಿಸಿದ್ದೇವೆ. ವಿದೇಶಿ ತಳಿಗಳಿಗೆ 200 ರೂ. ಪ್ರವೇಶ ಶುಲ್ಕವಿದ್ದು, ಹೆಸರು ನೋಂದಾಯಿಸಲು ಫೆ.16 ಕೊನೆಯ ದಿನ. ಸ್ಥಳದಲ್ಲೇ ನೋಂದಾವಣಿಗೆ 250 ರೂ. ಶುಲ್ಕ ಇರುತ್ತದೆ. ಸ್ಪರ್ಧೆಗೆ ಬಂದ ಎಲ್ಲಾ ಶ್ವಾನಗಳಿಗೆ ಹಾಲು, ನೀರು ವ್ಯವಸ್ಥೆ ಮಾಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂ:70191 61612, 76878 87766 ಸಂಪರ್ಕಿಸುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಗುರುರಾಜ, ಗೋಪಿನಾಥ, ಹರೀಶ, ದೇವರಾಜ, ಪವನ್, ಆನೆ ಸಿದ್ದು, ಗಣಪತಿ, ಸಂಜಯ ಶಿಂಧೆ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
