ಚಿತ್ರದುರ್ಗ:
ಶಿಕ್ಷಣದ ಜೊತೆಯಲ್ಲಿ ಎನ್.ಎಸ್.ಎಸ್.ನಲ್ಲಿ ತೊಡಗಿಕೊಳ್ಳುವುದರಿಂದ ಭವಿಷ್ಯದಲ್ಲಿ ಅನುಕೂಲವಾಗಲಿದೆ ಎಂದು ಹಿರಿಯ ನ್ಯಾಯವಾದಿ ಹಾಗೂ ಸರಸ್ವತಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಿ.ಕೆ.ಶೀಲಾ ಕಾನೂನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ ಹುಬ್ಬಳ್ಳಿ, ಸರಸ್ವತಿ ವಿದ್ಯಾಸಂಸ್ಥೆ ಚಿತ್ರದುರ್ಗ ಹಾಗೂ ಸರಸ್ವತಿ ಕಾನೂನು ಕಾಲೇಜು ಸಹಯೋಗದೊಂದಿಗೆ ತಾಲೂಕಿನ ತೋಪುರಮಾಳಿಗೆಯಲ್ಲಿ ಸೋಮವಾರದಿಂದ ಆರಂಭಗೊಂಡು ಏ.28ರವರೆಗೆ ಏಳು ದಿನಗಳ ಕಾಲ ನಡೆಯುವ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ವಾರ್ಷಿಕ ಶಿಬಿರವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಎನ್.ಎಸ್.ಎಸ್.ನಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮ ಅಸ್ತಿತ್ವ, ವ್ಯಕ್ತಿತ್ವವನ್ನು ಸಮಾಜಕ್ಕೆ ತೋರಿಸಲು ಸಹಕಾರಿಯಾಗಲಿದೆ. ವೈದ್ಯಕೀಯ, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂತಹ ಸೇವೆಯಲ್ಲಿ ತೊಡಗಿಕೊಳ್ಳಲು ಅವಕಾಶವಿರುವುದಿಲ್ಲ. ಕಾನೂನು ವಿದ್ಯಾರ್ಥಿಗಳ ವ್ಯಾಪ್ತಿ ದೊಡ್ಡದು.
ಕಾನೂನು ಪದವಿ ಪೂರೈಸಿದರೆ ವಕೀಲರು, ನ್ಯಾಯಾಧೀಶರಾಗಬಹುದು. ಜೊತೆಗೆ ರಾಜಕಾರಣಿ, ಸಮಾಜ ಸೇವಕರಾಗಿಯೂ ಕರ್ತವ್ಯ ನಿರ್ವಹಿಸಬಹುದು. ವಿದ್ಯಾರ್ಥಿ ಜೀವನ ಅಮೂಲ್ಯವಾದುದು. ಏಳು ದಿನಗಳ ಕಾಲ ನಡೆಯುವ ಎನ್.ಎಸ್.ಎಸ್.ಶಿಬಿರದಲ್ಲಿ ತೋಪುರಮಾಳಿಗೆ ಗ್ರಾಮವನ್ನು ಸ್ವಚ್ಚಗೊಳಿಸಿ ಗ್ರಾಮೀಣ ಜನತೆಯಲ್ಲಿ ಪರಿಸರವನ್ನು ಶುದ್ದವಾಗಿಟ್ಟುಕೊಳ್ಳುವ ಅರಿವು ಮೂಡಿಸುವಂತೆ ಕಾನೂನು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ಭಾಗವಹಿಸುವುದರಿಂದ ನಾಯಕತ್ವದ ಗುಣ ಬೆಳೆಯುತ್ತದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯವನ್ನು ಕಂಡುಕೊಳ್ಳಿ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎಂ.ಎಸ್.ಸುಧಾದೇವಿ ಮಾತನಾಡಿ ಹಳ್ಳಿಗಳ ಉದ್ದಾರದಿಂದ ದೇಶದ ಉದ್ದಾರ ಎಂದು ರಾಷ್ಟ್ರಪಿತ ಮಹಾತ್ಮಗಾಂಧಿ ಹೇಳಿದ್ದರು. ಹಾಗಾಗಿ ಸ್ವಚ್ಚತೆ ಎನ್ನುವುದು ಗಾಂಧೀಜಿ ಕನಸಾಗಿತ್ತು. ಎನ್.ಎಸ್.ಎಸ್.ಶಿಬಿರದ ಮೂಲಕ ತೋಪುರಮಾಳಿಗೆಯಲ್ಲಿ ರಸ್ತೆ, ಚರಂಡಿ, ಬೀದಿ ದೀಪ, ಸ್ವಚ್ಚತೆ ಹೀಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಗ್ರಾಮಸ್ಥರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವಲ್ಲಿ ಶ್ರಮಿಸುವಂತೆ ಕಾನೂನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಎಲ್ಲಾ ಶಾಲಾ-ಕಾಲೇಜುಗಳಲ್ಲಿಯೂ ಎನ್.ಎಸ್.ಎಸ್.ಘಟಕವನ್ನು ತೆರೆಯಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಮೂಲಭೂತ ಸೌಲಭ್ಯಗಳನ್ನು ಕೇಳಿ ಪಡೆಯುವಂತೆ ಜನತೆಯನ್ನು ಜಾಗೃತರನ್ನಾಗಿಸಬೇಕಾಗಿದೆ. ಯುವಶಕ್ತಿ ಮನಸ್ಸು ಮಾಡಿದರೆ ದೇಶದಲ್ಲಿ ಸಾಕಷ್ಟು ಬದಲಾವಣೆ ತರಬಹುದು. ದೇಶಕ್ಕೆ ಅನ್ನ ನೀಡುವ ರೈತ ತೊಂದರೆ ಅನುಭವಿಸುತ್ತಿದ್ದಾನೆ. ಶ್ರಮಪಟ್ಟು ರೈತ ದುಡಿದಾಗ ಮಾತ್ರ ದೇಶದ ಪ್ರತಿಯೊಬ್ಬರಿಗೂ ಅನ್ನ ಸಿಗುತ್ತದೆ. ಎಷ್ಟೆ ದುಡಿದರು ಹಸಿವಿಗೆ ದುಡ್ಡು ತಿನ್ನಲು ಬರುವುದಿಲ್ಲ ಎಂದು ಹೇಳಿದರು.
ದೇಶದ ಪ್ರಧಾನಿ ನರೇಂದ್ರಮೋದಿ ಸ್ವಚ್ಚ ಭಾರತ್ ಅಭಿಯಾನಕ್ಕೆ ಒತ್ತು ಕೊಟ್ಟಿದ್ದಾರೆ. ದೇಶದ ಸ್ವಾತಂತ್ರಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಹಿರಿಯರ ವಿಚಾರಗಳ್ನು ಇಂದಿನ ಮಕ್ಕಳಿಗೆ ಪರಿಚಯಿಸಬೇಕಿದೆ. ರಾಜಮದಕರಿನಾಯಕ ಆಳಿದ ಐತಿಹಾಸಿಕ ಚಿತ್ರದುರ್ಗದಲ್ಲಿ ಸಾಕಷ್ಟು ಸ್ಮಾರಕಗಳಿವೆ. ದುರ್ಗದ ಇತಿಹಾಸ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಯುವ ಪೀಳಿಗೆಗೆ ತಿಳಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ವಿದೇಶಿ ಸಂಸ್ಕೃತಿಗಳಿಗೆ ಮಾರು ಹೋಗಿರುವುದರಿಂದ ಸ್ವದೇಶಿ ಸಂಸ್ಕೃತಿ ಕಣ್ಮರೆಯಾಗುತ್ತಿದೆ ಎಂದು ವಿಷಾಧಿಸಿದರು.
ಎನ್.ಎಸ್.ಎಸ್.ನಲ್ಲಿ ಪಾಲ್ಗೊಳ್ಳುವುದರಿಂದ ನಿಸ್ವಾರ್ಥ ಮನೋಭಾವ ಬೆಳೆಯುತ್ತದೆ. ದ್ವೇಷ, ಅಸೂಯೆಯನ್ನು ತೊಡೆದು ಹಾಕಬಹುದು. ವ್ಯಕ್ತಿತ್ವ ವಿಕಸನಗೊಂಡು ಪರಸ್ಪರ ಒಬ್ಬರಿಗೊಬ್ಬರ ಪರಿಚಯವಾಗಿ ವಿಚಾರ ವಿನಿಮಯ ಮಾಡಿಕೊಳ್ಳಲು ಸಹಕಾರಿಯಾಗಲಿದೆ. ಧೈರ್ಯ, ಆತ್ಮವಿಶ್ವಾಸ, ನಂಬಿಕೆ ಬೆಳೆಯುತ್ತದೆ. ತೋಪುರಮಾಳಿಗೆಯಲ್ಲಿ ಎನ್.ಎಸ್.ಎಸ್.ಶಿಬಿರದಲ್ಲಿ ಪಾಲ್ಗೊಳ್ಳುತ್ತಿರುವ ಕಾನೂನು ವಿದ್ಯಾರ್ಥಿಗಳೊಂದಿಗೆ ಕೈಜೋಡಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ದೇಶ ಕಾಯುವ ಸೈನಿಕರಿಂದ ಇಂದು ದೇಶದಲ್ಲಿ ಎಲ್ಲರೂ ನೆಮ್ಮದಿಯಿಂದ ಇದ್ದಾರೆ. ಸೇವಾ ಮನೋಭಾವದ ಮೂಲಕ ಒಳ್ಳೆಯ ಸಮಾಜ ನಿರ್ಮಿಸಿ ಎಂದು ಕಾನೂನು ವಿದ್ಯಾರ್ಥಿಗಳಿಗೆ ಹಾಗೂ ತೋಪುರ ಮಾಳಿಗೆ ಗ್ರಾಮಸ್ಥರನ್ನು ಕೋರಿದರು.
ತೋಪುರಮಾಳಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಬಿ.ಎ.ಸುಧಾ ಮಾತನಾಡುತ್ತ ಪ್ರತಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಎನ್.ಎಸ್.ಎಸ್.ಶಿಬಿರದಲ್ಲಿ ಭಾಗವಹಿಸುವುದರಿಂದ ಜೀವನದಲ್ಲಿ ಶಿಸ್ತು, ಸಂಯಮ, ಸಹಕಾರ, ಪರೋಪಕಾರ ಗುಣ ಬೆಳೆಯುತ್ತದೆ ಎಂದು ಹೇಳಿದರು.
ಶಾಲೆಯ ಎಸ್.ಡಿ.ಎಂ.ಸಿ.ಅಧ್ಯಕ್ಷರು ಹಾಗೂ ದ್ಯಾಮವ್ವನಹಳ್ಳಿ ಗ್ರಾ.ಪಂ.ಸದಸ್ಯ ಸಾಹಿನಾಥ್ರೆಡ್ಡಿ, ವೆಂಕಟೇಶ್ರೆಡ್ಡಿ, ಸರಸ್ವತಿ ಕಾನೂನು ಕಾಲೇಜು ದೈಹಿಕ ನಿರ್ದೇಶಕ ಪಿ.ಸಿ.ಮುರುಗೇಶ್ ವೇದಿಕೆಯಲ್ಲಿದ್ದರು.ಪುಟಾಣಿ ಮಕ್ಕಳು ಪ್ರಾರ್ಥಿಸಿದರು. ಕಾನೂನು ವಿದ್ಯಾರ್ಥಿ ವೆಂಕಟೇಶ್ ಸ್ವಾಗತಿಸಿದರು. ಭಾವನಾ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
