ಆದಷ್ಟು ಬೇಗ ನೀತಿಯ ಜಾರಿ ಪ್ರಕ್ರಿಯೆ ಆರಂಭ : ಡಿಸಿಎಂ

ಬೆಂಗಳೂರು

     ಶಿಕ್ಷಣ ಕ್ಷೇತ್ರದಲ್ಲಿ ಇಡೀ ದೇಶದಲ್ಲಿಯೇ ಮುಂಚೂಣಿ ರಾಜ್ಯವಾಗಿರುವ ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲು ಆಡಳಿತಾತ್ಮಕ ಹಾಗೂ ಕಾನೂನಾತ್ಮಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.ಆದಷ್ಟು ಬೇಗ ನೀತಿಯ ಜಾರಿ ಪ್ರಕ್ರಿಯೆಯನ್ನು ಆರಂಭ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

    ನಗರದಲ್ಲಿಂದು ಅಸೋಚಂ ಏರ್ಪಡಿಸಿದ್ದ ?ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಉನ್ನತ ಶಿಕ್ಷಣದಲ್ಲಿ ಆಗುವ ಬದಲಾವಣೆ ಮತ್ತು ಬೀರುವ ಪ್ರಭಾವ?ದ ಕುರಿತ ಸಂವಾದದಲ್ಲಿ ವರ್ಚುವಲ್ ವೇದಿಕೆ ಮೂಲಕ ಮಾತನಾಡಿದ ಅವರು, ಒಮ್ಮೆ ಶಿಕ್ಷಣ ನೀತಿಯನ್ನು ಜಾರಿ ಮಾಡಿದರೆ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಗುರುತರ ಬದಲಾವಣೆ ಗಳು ಗೋಚರವಾಗುತ್ತವೆ.ರಾಜ್ಯದ ಉನ್ನತ ಶಿಕ್ಷಣದ ದಿಕ್ಕನ್ನೇ ಬದಲಿಸುವಂಥ ಅಂಶಗಳು ಈ ನೀತಿಯಲ್ಲಿವೆ ಎಂದು ತಿಳಿಸಿದರು.

    ಈಗಾಗಲೇ ನೀತಿಯಲ್ಲಿರುವ ಅಂಶಗಳನ್ನು ಕೂಲಂಕಷವಾಗಿ ವಿಶ್ಲೇಷಣೆ ಮಾಡಲಾಗಿದೆ.ಅದಕ್ಕಾಗಿ ಉನ್ನತಮ ಟ್ಟದ ಕಾರ್ಯಪಡೆಯನ್ನು ರಚನೆ ಮಾಡಲಾಗಿದೆ.ಈಗಾಗಲೇ ಕಾರ್ಯಪಡೆಯ ಜತೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ.ಕಾರ್ಯಪಡೆಯ ಉಪ ಸಮಿತಿಗಳು ನೀಡಿರುವ ವರದಿಗಳನ್ನು ಅಧ್ಯಯನ ಮಾಡಲಾಗಿದೆ.ಇನ್ನು ನೀತಿಯ ಜಾರಿಗೆ ಕಾರ್ಯಪಡೆಯೂ ಅಂತಿಮ ವರದಿ ನೀಡಲಿದ್ದು,ಅದು ಕೈ ಸೇರಿದ ಕೂಡಲೇ ಸರಕಾರವು ಶಿಕ್ಷಣ ನೀತಿಯ ಜಾರಿ ನಿಟ್ಟಿನಲ್ಲಿ ಹೆಜ್ಜೆ ಇಡಲಿದೆ.ಇನ್ನು,ನಮ್ಮ ರಾಜ್ಯಕ್ಕೆ ಸೇರಿದ ತಜ್ಞರೇ ಇದ್ದ ಸಮಿತಿಯು ಅನೇಕ ಕ್ರಾಂತಿಕಾರಕ ಅಂಶಗಳನ್ನು ನೀತಿಯಲ್ಲಿ ಸೇರಿಸಿದೆ.ಎಲ್ಲ ಹಂತಗಳ ಶಿಕ್ಷಣದಲ್ಲೂ ಉತ್ತಮ ಸ್ಥಿತಿಯಲ್ಲಿರುವ ರಾಜ್ಯದಲ್ಲಿ ಮುಂದೆ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದ ಹಂತದವರೆಗೂ ಅಪಾರ ಬದಲಾವಣೆಗಳನ್ನು ಕಾಣಬಹುದು.ಈ ಮೂಲಕ ಭಾರತವು ಜಗತ್ತಿನ ಜ್ಞಾನ ಕಣಜವಾಗಿ ಹೊರಹೊಮ್ಮಲಿದೆ.ಕರ್ನಾಟಕವೂ ಶಿಕ್ಷಣ ನೆಲೆಯಾಗಲಿದೆ ಎಂಬ ವಿಶ್ವಾಸ ನನಗೆ ಸಂಪೂರ್ಣವಾಗಿ ಇದೆ ಎಂದು ಅವರು ವಿವರಿಸಿದರು.

    ಇತರೆ ಐದು ಪ್ರಮುಖ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯವು ಶೈಕ್ಷಣಿಕವಾಗಿ ಶರವೇಗದಲ್ಲಿ ಬೆಳೆಯುತ್ತಿದೆ. ಸರಾಸರಿ ರಾಜ್ಯದ ಜಿಲ್ಲೆಗಳಿಗೆ ಹೋಲಿಸಿದರೆ ಪ್ರತಿ ಜಿಲ್ಲೆಗೆ ಎರಡು ವಿಶ್ವವಿದ್ಯಾಲಯಗಳಿವೆ.ಬೆಂಗಳೂರು ನಗರ ಒಂದರಲ್ಲೇ 880ಕ್ಕೂ ಹೆಚ್ಚು ಕಾಲೇಜುಗಳಿವೆ. ಹೀಗಾಗಿ ಶಿಕ್ಷಣದ ರಾಜಧಾನಿಯಾಗಿ ಹೊರಹೊಮ್ಮುವ ಎಲ್ಲ ಶಕ್ತಿ ಯೂ ಈ ನಗರಕ್ಕಿದೆ.ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ನಂತರ ಈ ಗುರಿಗೆ ಮತ್ತಷ್ಟು ಶಕ್ತಿ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

   ಇಡೀ ದೇಶದಲ್ಲೇ ಶಿಕ್ಷಣ ನೀತಿಯನ್ನು ಜಾರಿ ಮಾಡಿದ ಮೊದಲ ರಾಜ್ಯವಾಗಿ ಕರ್ನಾಟಕವು ಮುನ್ನಡೆಯಲ್ಲಿ ನಿಲ್ಲಲಿದೆ.ಈಗಾಗಲೇ ಸರಕಾರ ಹಾಕಿಕೊಂಡಿರುವ ಯೋಜನೆಯಂತೆ,ತಜ್ಞರು ಕೊಟ್ಟಿರುವ ಸಲಹೆಯಂತೆ ಹಂತ ಹಂತವಾಗಿ ಅನುಷ್ಟಾನ ಮಾಡಲಾಗುವುದು.ಧಾರವಾಡದಲ್ಲಿ 100 ಕೋಟಿ ರೂ.ವೆಚ್ಚದಲ್ಲಿ ಸ್ಥಾಪಿಸಿರುವ ಉನ್ನ ತ ಶಿಕ್ಷಣ ಅಕಾಡೆಮಿ ಕೂಡ ಅನುಕೂಲವಾಗಲಿದೆ.ಇದರ ಜತೆಯಲ್ಲೇ ಬಹು ಉದ್ದೇಶಿತ ಹಾಗೂ ಬಹುವಿಷಯ ಗಳನ್ನು ಬೋಧನೆ ಮಾಡುವ ವಿವಿಗಳನ್ನು ಕೂಡ ಸ್ಥಾಪನೆ ಮಾಡಲಾಗುವುದು ಎಂದು ಅವರು ತಿಳಿಸಿದರು.

   ಸಂವಾದದಲ್ಲಿ ಅಸೋಚಂ ರಾಜ್ಯ ಘಟಕದ ಅಧ್ಯಕ್ಷ ಬಿ.ವಿ.ನಾಯ್ಡು,ಪ್ರಾದೇಶಿಕ ನಿರ್ದೇಶಕಿ ಉಮಾ ನಾಯರ್, ಎಐಸಿಟಿಇ ಅಧ್ಯಕ್ಷ .ಅನಿಲ್ ಸಹಸ್ರಬುದ್ಧೆ,ಬೆಂಗಳೂರಿನ ಐಐಐಟಿ-ಬಿ ನಿರ್ದೇಶಕ  ಎಸ್.ಸಡಗೋಪನ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap