ತುಮಕೂರು

ತುಮಕೂರು ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಲು ಸ್ವತಂತ್ರ ಅನುಷ್ಠಾನ ಮೌಲ್ಯಮಾಪನ ಹಾಗೂ ಯೋಜನಾ ತಂಡವನ್ನು ರಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧ್ಯಕ್ಷೆ ಡಾ|| ಶಾಲಿನಿ ರಜನೀಶ್ ತಿಳಿಸಿದ್ದಾರೆ.
ತುಮಕೂರು ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪಿಎಂಸಿ ಸಂಸ್ಥೆ ಹಾಗೂ ಸ್ಮಾರ್ಟ್ ಸಿಟಿ ಲಿಮಿಟೆಡ್ನ ಅಭಿಯಂತರರ ತಂಡಗಳು ಸಮರ್ಪಕವಾಗಿ ನಿರ್ವಹಿಸದೇ ಇರುವುದರಿಂದ ಜನಸಾಮನ್ಯರಿಗೆ ತೊಂದರೆ, ಅಸಮಾಧಾನ ಉಂಟಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಅದೇ ರೀತಿ ಕಾಮಗಾರಿಯ ಗುಣಮಟ್ಟದ ಬಗ್ಗೆ ಜನಪ್ರತಿನಿಧಿಗಳಿಂದ ಆರೋಪಗಳು ಬರುತ್ತಿರುವುದರಿಂದ ಈ ತಂಡವನ್ನು ರಚಿಸಲಾಗಿದೆ.
ತಂಡದ ಅಧ್ಯಕ್ಷರನ್ನಾಗಿ ಬೆಂಗಳೂರಿನ ಕಾವೇರಿ ನೀರಾವರಿ ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಕೆ. ಜೈಪ್ರಕಾಶ್, ಸದಸ್ಯರುಗಳನ್ನಾಗಿ ಕಾವೇರಿ ನೀರಾವರಿ ನಿಗಮದ ತಾಂತ್ರಿಕ ನಿರ್ದೇಶಕ ಎಂ.ರವೀಂದ್ರಪ್ಪ, ತುಮಕೂರಿನ ನಿವೃತ್ತ ಅಧೀಕ್ಷಕ ಅಭಿಯಂತರರು ಡಿ.ಎಸ್. ಹರೀಶ ಹಾಗೂ ತುಮಕೂರಿನ ಭದ್ರಾ ಮೇಲ್ದಂಡೆ ಯೋಜನೆಯ ಉಪ ಮುಖ್ಯ ಅಭಿಯಂತರರು ಹೆಚ್.ಬಿ.ಮಲ್ಲೇಶ್ ಅವರನ್ನು ನೇಮಿಸಲಾಗಿದೆ.
ಈ ತಂಡವು ನಗರದಲ್ಲಿ ಕೈಗೊಂಡಿರುವ ವಿವಿಧ ಸ್ಮಾರ್ಟ್ ಸಿಟಿ ಕಾಮಗಾರಿಗಳ ತಾಂತ್ರಿಕ ವಿವರಗಳನ್ನು ಪಡೆದು ಅದರ ಅಗತ್ಯತೆ ಹಾಗೂ ಗುಣಮಟ್ಟದ ವರದಿಯನ್ನು ನೀಡಬೇಕು. ಅಲ್ಲದೆ ತಪ್ಪಿತಸ್ಥ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್(ಕಪ್ಪು ಪಟ್ಟಿ)ಗೆ ಸೇರಿಸಲು ಪ್ರಸ್ತಾವನೆ ಸಲ್ಲಿಸಬೇಕು. ತಂಡದ ಸದಸ್ಯರುಗಳು ಡಿಸೆಂಬರ್ 16ರಂದು ನಡೆಯಲಿರುವ ಸಭೆಯಲ್ಲಿ ಅಮಾನಿಕೆರೆ ಕಾಮಗಾರಿ, ಸ್ಮಾರ್ಟ್ ರಸ್ತೆ ಕಾಮಗಾರಿಗಳ ಬಗ್ಗೆ ಸಂಪೂರ್ಣ ವರದಿಯನ್ನು ಅಧ್ಯಕ್ಷ ಜಯಪ್ರಕಾಶ್ ಅವರಿಗೆ ನೀಡತಕ್ಕದ್ದು ಎಂದು ಅವರು ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
