ಸಂಚಾರಿ ನಿಯಮ ಸದ್ಯಕ್ಕೆ ಜಾರಿಯಿಲ್ಲ.!

ತುಮಕೂರು:
      ಸಂಚಾರಿ ನಿಯಮ ಉಲ್ಲಂಘಿಸಿದರೆ ಭಾರಿ ದಂಡ ತೆರಬೇಕಾಗಿದ್ದ ದಿನ ಬಂದೇ ಬಿಟ್ಟಿತು ಎನ್ನುವವರಿಗೆ ಕೆಲವು ದಿನಗಳ ಕಾಲ ರಿಲೀಫ್ ಸಿಕ್ಕಿದೆ. 
     ಸೆ.1 ರಿಂದ ಹೊಸ ಸಂಚಾರಿ ನಿಯಮ ಜಾರಿಯಾಗಲಿದೆ ಎಂದು ಈ ಹಿಂದೆ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿತ್ತು. ವಾಹನ ಸವಾರರು ಸೆ 1 ರಿಂದ ಈ ಹೊಸ ನೀತಿ ಜಾರಿಗೆ ಬರುತ್ತದೆ ಎಂಬ ಆತಂಕದಲ್ಲಿದ್ದರು. ಆದರೆ ಹೊಸ ನಿಯಮದ ಜಾರಿ ಕುರಿತು ಇನ್ನೂ ಅಧಿಕೃತ ಆದೇಶ ಸಂಬಂಧಪಟ್ಟ ಇಲಾಖೆಗಳಿಗೆ ತಲುಪಿಲ್ಲ. ಸರ್ಕಾರವೇನೋ ಆದೇಶ ಹೊರಡಿಸಬಹುದು, ಕಾನೂನು ರಚಿಸಬಹುದು.
      ಆದರೆ ಆ ಕಾನೂನು ಜಾರಿಯಾಗಬೇಕಾದರೆ ನಿರ್ದಿಷ್ಟ ನಿಯಮಾವಳಿಗಳು ಅಸ್ತಿತ್ವಕ್ಕೆ ಬರಬೇಕು. ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆಗಳು ರವಾನೆಯಾಗಬೇಕು. ಕೇಂದ್ರ ಸರ್ಕಾರದ ಈ ಆದೇಶ ಸಾರಿಗೆ ಇಲಾಖೆಗೆ ತಲುಪಬೇಕು. ಅಲ್ಲಿಂದ ಪೊಲೀಸ್ ಇಲಾಖೆಗೆ ಮಾಹಿತಿ ಹೋಗಬೇಕು. ಆದರೆ ಈ ಪ್ರಕ್ರಿಯೆಗಳು ಇನ್ನೂ ಜರುಗಿಲ್ಲ. ಹೀಗಾಗಿ ಸೆ.1 ರಿಂದ ಜಾರಿಯಾಗಬೇಕಿದ್ದ ನೂತನ ಸಂಚಾರಿ ನಿಯಮ ಸದ್ಯಕ್ಕಂತೂ ಮುಂದೂಡಲ್ಪಟ್ಟಿದೆ. 
     ಸಂಚಾರಿ ನೂತನ ನಿಯಮಗಳ ಜಾರಿ ಕುರಿತು ಪೊಲೀಸ್ ಇಲಾಖೆಗೆ ಯಾವುದೇ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ. ಈ ನಡುವೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಸಂಚಾರಿ ಉಲ್ಲಂಘನೆಗೆ ದಂಡದ ನಿಯಮಾವಳಿಗಳು ಭಾರಿ ದುಬಾರಿಯಾಗಿದ್ದು, ಇದರ ವಿರುದ್ಧ ಕೆಲವು ಸಂಘಟನೆಗಳು ಪ್ರತಿಭಟಿಸುತ್ತಲೇ ಬಂದಿವೆ. ಸರ್ಕಾರಕ್ಕೆ ಮನವಿಗಳು ಸಹ ಸಲ್ಲಿಕೆಯಾಗಿವೆ. 
     ಸಂಚಾರಿ ನಿಯಮ ಉಲ್ಲಂಘನೆ ತಡೆಗಟ್ಟಲು ಬೇರೆ ಬೇರೆ ವಿಧಾನಗಳಿವೆ. ಕೇವಲ ದಂಡದ ರೂಪದಲ್ಲಿ ಅಧಿಕ ಹಣ ವಿಧಿಸುವುದು ಸರಿಯಾದ ಕ್ರಮವಲ್ಲ. ಇದರಿಂದ ಅಪಘಾತಗಳು ಕಡಿಮೆಯೇನಾಗುವುದಿಲ್ಲ ಎನ್ನುತ್ತಾರೆ ಕೆಲವರು. ಈಗ ಸರ್ಕಾರ ಜಾರಿಗೆ ತರಲು ಹೊರಟಿರುವ ನಿಯಮಾವಳಿಗಳು ಗಾಬರಿ ಮೂಡಿಸುತ್ತವೆ. ವಿಪರೀತ ದಂಡ ಹಾಕುವ ಅವಕಾಶಗಳಿವೆ. ಆದರೆ ಸರ್ಕಾರದ ಸೌಲಭ್ಯಗಳೇ ಸರಿಯಿಲ್ಲ. ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಸರ್ಕಾರಗಳು ಮೊದಲು ತೆರಿಗೆದಾರ ನಾಗರಿಕನಿಗೆ ಸೌಕರ್ಯ ಕಲ್ಪಿಸಿ ನಂತರ ನೂತನ ನಿಯಮ ಜಾರಿ ಮಾಡಲಿ ಎಂಬುದು ಬಹಳಷ್ಟು ಜನರ ಅನಿಸಿಕೆ.
     
  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link