ಚಳ್ಳಕೆರೆ
ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪ್ರೇರಕವಾಗುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಾಸ್ಟಲ್ ಸೌಕರ್ಯವನ್ನು ಕಲ್ಪಿಸಿದ್ದು, ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ಶೈಕ್ಷಣಿಕ ಪ್ರಗತಿ ಹೊಂದುವತ್ತ ಗಮನ ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಆರ್.ಮಂಜಪ್ಪ ತಿಳಿಸಿದರು.
ಅವರು, ಗುರುವಾರ ಇಲ್ಲಿನ ಕಾಲುವೇಹಳ್ಳಿ ಬಾಲಕರ ವಿದ್ಯಾರ್ಥಿನಿಯಲದ ಆವರಣದಲ್ಲಿ ಹಮ್ಮಿಕೊಂಡಿದ್ದ ವಿದ್ಯಾರ್ಥಿ ನಿಲಯಪಾಲಕರ ತರಬೇತಿ ಕಾರ್ಯಗಾರ ಇಲಾಖೆಯ ಸಿ ಮತ್ತು ಡಿ. ಗ್ರೂಪ್ ನೌಕರರಿಗೆ ವ್ಯಕ್ತಿ ವಿಕಾಸನ ಶಿಬಿರ ಹಾಗೂ ಸಸಿ ನೆಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಮೂಲಕ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಇಲಾಖೆಯ ನೌಕರರು ತಮ್ಮ ಕಾರ್ಯಚಟುವಟಿಕೆಗಳ ಬಗ್ಗೆ ಒತ್ತು ನೀಡಲು ಸಹಾಯಕವಾಗುತ್ತದೆಯಲ್ಲದೆ ಸರ್ಕಾರಿ ನಿಯಮಗಳ ಅನ್ವಯ ಹಾಸ್ಟಲ್ ನಿರ್ವಹಣೆಯ ಬಗ್ಗೆಯೂ ಸಹ ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗುತ್ತದೆ. ಎಲ್ಲಾ ಹಾಸ್ಟಲ್ ಆವರಣದಲ್ಲಿ ಸ್ವಚ್ಚತಾ ಅಂದೋಲನ ಜಾಗೃತಿಗೊಳಿಸುವ ನಿಟ್ಟಿನಲ್ಲಿ ಸಸಿಗಳನ್ನು ನಡೆಸುವ ಮೂಲಕ ಎಲ್ಲರೂ ಸ್ವಚ್ಚತಾ ಅಂದೋಲನ ಯಶಸ್ಸಿಗೆ ಕಾರ್ಯನಿರ್ವಹಿಸಲು ಇಂತಹ ಕಾರ್ಯಕ್ರಮಗಳು ಹೆಚ್ಚು ಉಪಯುಕ್ತವಾಗುತ್ತವೆ ಎಂದರು.
ರಾಜ್ಯ ಯೋಜನಾ ಸೇವೆ ಮತ್ತು ಕ್ರೀಡಾ ಇಲಾಖೆಯ ರಾಜ್ಯ ಪ್ರಶಸ್ತಿ ವಿಜೇತ ಆರ್.ಜಕ್ಲಿ ಶಿವಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಇಲಾಖೆಯ ನೌಕರರಿಗೆ ತರಬೇತಿಯನ್ನು ನೀಡುವ ಮೂಲಕ ಅವರ ತಮ್ಮ ಕಾರ್ಯದಲ್ಲಿ ಸದಾಕಾಲ ಕ್ರಿಯಾಶೀಲವಾಗಿರುವಂತೆ ಜಾಗೃತೆ ವಹಿಸಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ.
ವಿಶೇಷವಾಗಿ ನಿಲಯ ಪಾಲಕರು ಹಲವಾರು ಸಂದರ್ಭಗಳಲ್ಲಿ ಕಾನೂನಿನ ವ್ಯವಸ್ಥೆಯನ್ನು ಅರಿಯದೇ ಲೋಪವೆಸಗುವ ಸಂದರ್ಭವಿದ್ದು ಅವರಿಗೂ ಸಹ ಇಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಸಾಮಾನ್ಯವಾಗಿ ಹಾಸ್ಟಲ್ಗಳಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಉನ್ನತ್ತಿ ಹೊಂದಲು ಸಾಧ್ಯವಿಲ್ಲವೆಂಬ ವ್ಯಾಪಕ ಅಸಮದಾನ ಸಾರ್ವಜನಿಕರಲ್ಲಿದೆ ಆದರೆ, ಇತ್ತೀಚಿನ ದಿನಗಳಲ್ಲಿ ಇಂತಹ ಹಾಸ್ಟಲ್ಗಳಲ್ಲಿ ಅಭ್ಯಾಸ ಮಾಡಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಕಾಣಬಹುದು ಎಂದರು.
ಕೆ.ಹನುಮಂತಪ್ಪ, ಜೀವನ ಕೌಶಲ್ಯ ತರಬೇತಿ ಬಗ್ಗೆ ಬೀದಿ ನಾಟಕದ ಮೂಲಕ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಇದೇ ಸಂದರ್ಭದಲ್ಲಿ ನಿಲಯದ ಕರ್ತವ್ಯ ಪಾಲನೆಯಲ್ಲಿ ಶೇ. 100ರ ಪ್ರಗತಿ ಸಾಧಿಸಿದ ನಿಲಯ ಪಾಲಕರಾದ ಟಿ.ಬೋರಯ್ಯ, ಮಂಜಪ್ಪ ಇವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಿ.ಅಲಿಜಾನ್, ಎನ್.ಟಿ.ಮಂಜುಳಾ, ವ್ಯವಸ್ಥಾಪಕ ಕೆ.ರವಿಶಂಕರ್, ಮುಸ್ಟೂರಪ್ಪ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
