ಕುಣಿಗಲ್
ರಾಜ್ಯಾದ್ಯಂತ ರೈತರು, ಬಡವರು, ಕಾರ್ಮಿಕರು ಸೇರಿದಂತೆ ಸಾಮಾನ್ಯ ಜನತೆಯ ಹಸಿದ ಹೊಟ್ಟೆಗೆ ಊಟ ನೀಡುವ ಇಂದಿರಾ ಕ್ಯಾಂಟೀನನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಕಚೇರಿ ಆವರಣದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ, ಪುರಸಭಾ ಕಚೇರಿ ನೂತನವಾಗಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನನ್ನ ಉದ್ಘಾಟಿಸಿ ಮಾತನಾಡುತ್ತಾ, ರಾಜ್ಯಾದ್ಯಂತ ಲಕ್ಷಾಂತರ ಜನರ ಹಸಿದ ಹೊಟ್ಟೆಗೆ ಊಟ ನೀಡುವ ಉದ್ದೇಶದಿಂದ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜಾರಿಗೆ ತಂದಂತಹ ಈ ಯೋಜನೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದಂತಹ ಈ ಇಂದಿರಾ ಕ್ಯಾಂಟೀನನ್ನು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಬಡವರಿಗೆ ಕಡಿಮೆ ವೆಚ್ಚದಲ್ಲಿ ಅನ್ನ ನೀಡುವ ಉದ್ದೇಶದಿಂದ ಜಾರಿ ಮಾಡಿದಂತಹ ಮಹತ್ವಕಾಂಕ್ಷೆಯುಳ್ಳ ಯೋಜನೆಯನ್ನ ಜಾರಿಗೆ ತಂದರು.
ಅದರಂತೆ ಕೇವಲ 25 ರೂ.ವೆಚ್ಚದಲ್ಲಿ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಕೂಲಿ ಕಾರ್ಮಿಕರಿಗೆ, ಬಡವರಿಗೆ ಹಸಿದ ಹೊಟ್ಟೆಗೆ ಅನ್ನ ನೀಡುವ ಉದ್ದೇಶದಿಂದ ಈ ಯೋಜನೆಯನ್ನ ಜಾರಿಗೆ ತಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಆರಂಭ ಮಾಡಲಾಗಿದೆ. ಇವರ ಸೇವೆ ಅತ್ಯಮೂಲ್ಯವಾಗಿದ್ದು, 20 ಅಂಶಗಳ ಕಾರ್ಯಕ್ರಮ, ದೀನದಲಿತರ ಕೆಲಸ, ಬ್ಯಾಂಕ್ ರಾಷ್ಟ್ರೀಕರಣ, ಉಳುವವನೇ ಭೂಮಿ ಒಡೆಯ,ನಿರ್ಗತಿಕರಿಗೆ ಮನೆ, ನಿವೇಶನ ನೀಡಿದಂತಹ ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಈ ಯೋಜನೆಯನ್ನ ಜಾರಿಗೆ ತಂದಿರುವುದು ಸ್ವಾಗತಾರ್ಹವಾಗಿದೆ.
ಈ ಯೋಜನೆಯನ್ನ ಯಾವುದೇ ಸರ್ಕಾರವೂ ರದ್ದು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.ಕುಣಿಗಲ್ ದೊಡ್ಡಕೆರೆಗೆ ಹೇಮಾವತಿ ನೀರು ಹರಿಸುವಲ್ಲಿ ಕಳೆದ 25 ವರ್ಷಗಳಿಂದ ವಂಚನೆಯಾಗಿರುವುದನ್ನ ಸರಿಪಡಿಸಲು 615 ಕೋಟಿ ವೆಚ್ಚದಲ್ಲಿ ಲಿಂಕ್ ಕೆನಾಲ್ ಪೈಪ್ಲೈನುಗಳ ಮೂಲಕ ಕುಣಿಗಲ್ ಪಾಲಿನÀ ಮೂರು ಮುಕ್ಕಾಲು ಟಿಎಂಸಿ ನೀರನ್ನ ತೆಗೆದುಕೊಳ್ಳಲು ಈಗಾಗಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜಲಸಂಪನ್ಮೂಲಮಂತ್ರಿ ಡಿ.ಕೆ.ಶಿವಕುಮಾರ್ ಅನುಮತಿ ನೀಡಿರುತ್ತಾರೆ.
ಆದರೆ ಕೆಲವು ರಾಜಕೀಯ ವ್ಯಕ್ತಿಗಳು ಲಿಂಕ್ ಕೆನಾಲ್ ನಿಲ್ಲ್ಲಿಸಲು ಷಡ್ಯಂತ್ರ ಮಾಡುತ್ತಿರುವುದರಿಂದ ಈ ಭಾಗದ ಎಲ್ಲಾ ಪಕ್ಷದ ರಾಜಕೀಯ ಮುಖಂಡರು ಪಕ್ಷಭೇದ ಮರೆತು ಹೋರಾಟಕ್ಕೆ ಸಿದ್ಧರಾಗಬೇಕಾಗಿದೆ. ಈ ಬಗ್ಗೆ ಮಾನ್ಯ ಮುಖ್ಯಮಮತ್ರಿ ಯಡಿಯೂರಪ್ಪನವರಲ್ಲಿಯೂ ಸಹ ಮನವಿ ಮಾಡಲಾಗುವುದು. ತಾಲ್ಲೂಕಿನ ನೀರಿನ ಹಕ್ಕಿಗಾಗಿ ಯಾವುದೇ ಹೋರಾಟಕ್ಕೂ ಸಿದ್ದ ಇರುವುದಾಗಿ ತಿಳಿಸಿದರು. ತಾಲ್ಲೂಕಿನಾದ್ಯಂತ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಇವುಗಳ ಸಂಪೂರ್ಣ ಅಭಿವೃದ್ಧಿಯನ್ನ ಕೈಗೊಳ್ಳಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಹೆಚ್.ಡಿ.ರಂಗನಾಥ್ ಮಾತನಾಡಿ, ಬಡವರಿಗೆ, ರೈತರಿಗೆ ಅನ್ನ ಭಾಗ್ಯ ನೀಡಿ ಇಂದಿರಾ ಕ್ಯಾಂಟೀನ್ ಆರಂಭವಾಗಿದೆ. ಹೇಮಾವತಿ ಲಿಂಕ್ ಕೆನಾಲ್ ಯೋಜನೆಯನ್ನ ಜಿಲ್ಲೆಯ ಹತ್ತು ಶಾಸಕರು ವಿರೋಧಿಸಿದರೂ ಸಹ ಹಿಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರಿಂದ ಈ ಯೋಜನೆ ಕಾರ್ಯವ್ಯಾಪ್ತಿಗೆ ಬಂದಿದೆ. ಬಿಜೆಪಿಯ ಅಕಾಲಿಕ ಸರ್ಕಾರ ನಿಲ್ಲಿಸಲು ಸಂಚು ರೂಪಿಸಿರುವುದರಿಂದ ಈ ಬಗ್ಗೆ ಬೆಂಗಳೂರು ಚಲೋ ಕೈಗೊಳ್ಳಲು ರೈತರು, ನಾಗರೀಕರು ಸಿದ್ಧವಾಗಿರಬೇಕಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಸಲ್ಲಿ ತಾ.ಪಂ.ಅಧ್ಯಕ್ಷ ಹರೀಶ್ ನಾಯ್ಕ್, ಉಪವಿಭಾಗಾಧಿಕಾರಿ ಸಿ.ಎಲ್.ಶಿವಕುಮಾರ್, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ಬಿ.ಟಿ.ರಂಗಸ್ವಾಮಿ, ತಹಸೀಲ್ದಾರ್ ವಿಶ್ವನಾಥ್, ಇ.ಒ. ಶಿವರಾಜಯ್ಯ, ಪುರಸಭಾ ಸದಸ್ಯರುಗಳಾದ ರಂಗಸ್ವಾಮಿ, ಮಂಜುಳಾ ಡಿ.ಕೆ.ರಂಗಪ್ಪ, ಮುಖ್ಯಾಧಿಕಾರಿ ಆರ್.ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/08/3-Kunigal.gif)