ಬೆಂಗಳೂರು
ಸರ್ಕಾರ ರೂಪಿಸಿದ ಬಡ್ತಿ ಮೀಸಲಾತಿ ಕಾಯ್ದೆ -2018ನ್ನು ಅನುಷ್ಠಾನಗೊಳಿಸಲು ಯಾವುದೇ ಅಡ್ಡಿ ಇಲ್ಲ ಎಂದು ನಿವೃತ್ತ ಅಟಾರ್ನಿ ಜನರಲ್ ಮುಕುಲ್ ರೋಹ್ತಗಿ ಅಭಿಪ್ರಾಯ ಸೂಚಿಸಿದ್ದಾರೆ.
ಸರ್ಕಾರದ ಬಡ್ತಿ ಮೀಸಲು ಕಾಯ್ದೆ 2002 ನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ 2017 ಫೆಬ್ರವರಿ 9 ರಂದು ನೀಡಿದ್ದ ತೀರ್ಪು ಪಾಲನೆಯಾಗಿಲ್ಲ ಎಂದು ಸಲ್ಲಿಸಿದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಯುತ್ತಿರುವ ನಡುವೆಯೇ ರಾಜ್ಯ ಸರ್ಕಾರ ಹೊಸ ಕಾಯ್ದೆ ರೂಪಿಸಿತ್ತು.
ಪ್ರಕರಣದ ವಿಚಾರಣೆ ಹಂತದಲ್ಲಿರುವಾಗ ಕಾಯ್ದೆ ಅನುಷ್ಠಾನ ಮಾಡಬಹುದೇ ಎಂದು ಪ್ರಕರಣದ ಪರ ವಾದ ಮಂಡಿಸುತ್ತಿರುವ ಮುಕುಲ್ ರೋಹ್ತಗಿ ಅವರ ಅಭಿಪ್ರಾಯ ನೀಡುವಂತೆ ಸರ್ಕಾರ ಕೇಳಿತ್ತು. ಸರ್ಕಾರಕ್ಕೆ ಅವರು 8 ಪುಟುಗಳ ಮಾಹಿತಿಯೊಂದಿಗೆ ಅಭಿಪ್ರಾಯ ನೀಡಿದ್ದಾರೆ.
ಶಾಸನ ಸಭೆಯಲ್ಲಿ ಅಂಗೀಕಾರಗೊಂಡ ಕಾಯ್ದೆಯನ್ನು ಜಾರಿಗೊಳಿಸುವುದು ಸರ್ಕಾರದ ಕರ್ತವ್ಯ, ಅದ ನ್ನು ಹೊರತುಪಡಿಸಿ ಅನ್ಯ ಮಾರ್ಗವಿಲ್ಲ. ಆದರೆ ಕಾಯ್ದೆಯ ಅವಧಿಯನ್ನು ಕೋರ್ಟ್ ನಿರ್ಣಯಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ, ಅಹಿಂಸಾ ಸಂಘಟನೆ ಸದಸ್ಯರು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಧರಣಿ ನಡೆಸುವ ಮೂಲಕ ಮುಂಬಡ್ತಿ ಕಾಯ್ದೆ ಜಾರಿಗೆ ತರದಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








