ದೇವೇಗೌಡರಿಗೆ ಮಹಿರ್ಷಿ ವಾಲ್ಮೀಕಿ ಪ್ರಶಸ್ತಿ ಕೊಡುವುದರಲ್ಲಿ ಯಾವುದೇ ರಾಜಕೀಯವಿಲ್ಲ

ಬೆಂಗಳೂರು

        ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ರಾಜ್ಯ ಸರ್ಕಾರದ ಪ್ರತಿಷ್ಠಿತ ವಾಲ್ಮೀಕಿ ಪ್ರಶಸ್ತಿ ಪಡೆಯಲು ಸಾಧ್ಯವಾಗಲಿಲ್ಲ. ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವ ಯೋಗ ಕೂಡಿ ಬರಲಿಲ್ಲ.

       ರಾಜ್ಯ ಸರ್ಕಾರದಿಂದ ನಡೆದ ರಾಜ್ಯ ಮಟ್ಟದ ವಾಲ್ಮಿಕಿ ಜಯಂತಿ ಸಮಾರಂಭದ ಹೈ ಲೈಟ್ಸ್ ಇದು. ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭದಿಂದ ಕುಮಾರ ಸ್ವಾಮಿ ದೂರ ಉಳಿದಿದ್ದರು.

        ಲಂಡನ್ ಪ್ರವಾಸಕ್ಕೆ ತೆರಳುವ ಧಾವಂತದಲ್ಲಿದ್ದ ದೇವೇಗೌಡರು, ಶಾಸಕರ ಭವನದ ಮುಂಭಾಗದಲ್ಲಿರುವ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ವಿಧಾನಸೌಧಕ್ಕೆ ತೆರಳದೇ ವಿಮಾನ ನಿಲ್ದಾಣದತ್ತ ಪ್ರಯಾಣ ಬೆಳೆಸಿದರು.

       ತಮ್ಮನ್ನು ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದರಿಂದ ವ್ಯಕ್ತವಾದ ಟೀಕೆಗಳಿಗೆ ಗೌಡರು ನೊಂದಿದ್ದರು. ಆಹಾರದಲ್ಲಿ ವ್ಯತ್ಯಾಸವಾಗಿ ಸಮಾರಂಭದಿಂದಲೇ ಅವರು ದೂರ ಉಳಿದಿದ್ದರು.

         ಸಮಾರಂಭದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಎಚ್.ಡಿ.ದೇವೇಗೌಡ ಅವರನ್ನು ಮಹಿರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದರಲ್ಲಿ ಯಾವುದೇ ರಾಜಕೀಯವಿಲ್ಲ. ನೀಡಿರುವುದಕ್ಕೆ ವ್ಯಕ್ತವಾಗಿರುವ ಟೀಕೆ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

        ದೇವೇಗೌಡರಿಗೆ ಪ್ರಶಸ್ತಿ ಘೋಷಣೆ ಆದ ನಂತರ ಕೆಲವು ಮಾಧ್ಯಮಗಳು ಮಗನಿಂದ ಅಪ್ಪನಿಗೆ ಪ್ರಶಸ್ತಿ ಎಂದು ಟೀಕಿಸಿದವು. ಆದರೆ ಈ ಪ್ರಶಸ್ತಿ ಆಯ್ಕೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇರಲಿಲ್ಲ. ನ್ಯಾಯಮೂರ್ತಿ ನಾಗಮೋಹನ್‍ದಾಸ್ ಅಧ್ಯಕ್ಷತೆ ಸಮಿತಿ ಅವರನ್ನು ಆರಿಸಿತ್ತು. 1984-85ರಲ್ಲಿ ನಾಯಕ ಹಾಗೂ ವಾಲ್ಮೀಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ದೇವೇಗೌಡರು ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ಅವರು ಸಂಸದರಾದ ನಂತರ ಲೋಕಸಭೆಯಲ್ಲಿ ಧ್ವನಿ ಎತ್ತಿ ನಾಯಕ ಸಮುದಾಯದ ಪರ್ಯಾಯ ಪದಗಳನ್ನು ಸೇರಿಸಿ ಸುಗ್ರೀವಾಜ್ಞೆ ಹೊರಡಿಸುವಲ್ಲಿ ಯಶಸ್ವಿ ಆಗಿದ್ದರು. ಈ ಸಾಧನೆ ಗಮನಿಸಿ ಪ್ರಶಸ್ತಿ ನೀಡಲಾಗಿದೆ. ಆಯಾ ಸಮುದಾಯದ ಗಣ್ಯರ ಹೆಸರಿನ ಪ್ರಶಸ್ತಿಗಳನ್ನು ಅದೇ ಸಮುದಾಯದವರಿಗೆ ನೀಡುವುದು ಕಡ್ಡಾಯ ಎನ್ನುವುದನ್ನು ತಪ್ಪಿಸುವುದು ಅಗತ್ಯವಾಗಿದೆ ಎಂದರು.

      ಸಮಾಜದಲ್ಲಿ ಆರ್ಥಿಕ ಸಮಾನತೆ ತರಲು ಹಾಗೂ ನವ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದೆ. ನಮ್ಮ ಸರ್ಕಾರ ಕೊಟ್ಟ ಮಾತಿನಂತೆ ರೈತರ ಸಾಲಮನ್ನಾ ಮಾಡಲಾಗಿದೆ. ಶ್ರೀ ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ಮಹಾಕಾವ್ಯದ ಸ್ಪೂರ್ತಿಯಿಂದ ನಮ್ಮ ಮೈತ್ರಿ ಸರ್ಕಾರ ಜನಪರ ಆಡಳಿತ ನೀಡುತ್ತಿದೆ ಎಂದು ಹೇಳಿದರು.

      ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ನಾಗಮೋಹನ್ ದಾಸ್ ಮಾತನಾಡಿ ವಾಲ್ಮೀಕಿ ಸಮುದಾಯದ ಕಲ್ಯಾಣಕ್ಕಾಗಿ ಧ್ವನಿ ಎತ್ತಿದ ಹಿನ್ನೆಲೆಯಲ್ಲಿ ದೇವೇಗೌಡರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ನ್ಯಾಯಾಂಗ, ಮಾಧ್ಯಮ, ರಾಜಕೀಯ ಕ್ಷೇತ್ರಗಳಲ್ಲಿ ಮೌಲ್ಯಗಳು ಕುಸಿದಿದ್ದು ಅವುಗಳ ರಕ್ಷಣೆ ಆಗಬೇಕಾಗಿದೆ. ರಾಮಾಯಣ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಕೃತಿ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link