ಮಧುಗಿರಿ
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಿರ್ಮಾಣವಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ರವರ ಕಂಚಿನ ಪುತ್ಥಳಿಯು ಹೂವಿನ ಹಾರವಿಲ್ಲದೆ ಕಳೆ ಗುಂದಿರುವುದು ವಿಷಾದಕರ ಸಂಗತಿಯಾಗಿದೆ.
ಪಟ್ಟಣದ ಪಾವಗಡ ರಸ್ತೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ನಿರ್ಮಿಸಿದ ಡಾ.ಬಿ.ಆರ್. ಅಂಬೇಡ್ಕರ್ರವರ ಪುತ್ಥಳಿಯನ್ನು ದಲಿತಪರ ಒಕ್ಕೂಟಗಳ ಮನವಿ ಮೇರೆಗೆ ಹಿಂದಿನ ಶಾಸಕ ಕೆ.ಎನ್.ರಾಜಣ್ಣರವರು ಸಮಿತಿಯೊಂದನ್ನು ರಚಿಸಿ ಕಂಚಿನ ಪುತ್ಥಳಿಯ ಜೊತೆಗೆ ಸುಂದರ ಉದ್ಯಾನವನವನ್ನು ಲೋಕಾರ್ಪಣೆ ಮಾಡಿದರು. ಅವರ ಅವಧಿಯಲ್ಲಿ ಹೂವಿನ ಹಾರವು ದಿನಗಳು ಕಳೆದಂತೆ ಬದಲಾಗುತ್ತಿತ್ತು. ಆದರೆ ಇತ್ತೀಚೆಗೆ ಖಾಸಗಿ ಕಾರ್ಯಕ್ರಮಕ್ಕೆಂದು ಪಾವಗಡಕ್ಕೆ ಹೋಗುವಾಗ ಹಾರವಿಲ್ಲದ ಪ್ರತಿಮೆಯನ್ನು ಗಮನಿಸಿ ಹೂ ಮಾಲೆಯನ್ನು ಅವರೆ ಸ್ವತ: ಹಾಕಿಸಿ ಸಂವಿಧಾನ ಶಿಲ್ಪಿಗೆ ಗೌರವ ಸಲ್ಲಿಸಿದ ನಿದರ್ಶನಗಳುಂಟು. ಆದರೆ ದಿನಗಳು ಉರುಳಿದ ಹಾಗೆ ಪ್ರತಿಮೆಗೆ ಹೂ ಮಾಲೆ ಹಾಕುವವರೆ ಮಾಯವಾಗಿ ಕಂಚಿನ ಪ್ರತಿಮೆಯು ಕಳೆಗುಂದಲು ಕಾರಣವಾಗುತ್ತಿದೆ.
ಈ ಬಗ್ಗೆ ಪ್ರತಿಮೆ ಪ್ರತಿಷ್ಟಾನ ಸಮಿತಿ ಕಾರ್ಯದರ್ಶಿ ಬಿ.ನರಸಿಂಹಮೂರ್ತಿ ಮಾತನಾಡಿ ಹಿಂದಿನ ಶಾಸಕರಾಗಿದ್ದ ಕೆ.ಎನ್.ರಾಜಣ್ಣನವರು ಗೌರವಧ್ಯಕ್ಷರಾಗಿದ್ದರು. ಹಾಲಿ ಜಿಪಂ ಸದಸ್ಯ ಕೆಂಚಮಾರಯ್ಯರವರು ಅಧ್ಯಕ್ಷರಾಗಿದ್ದಾರೆ. ಜೊತೆಯಲ್ಲಿ ಪುರಸಭೆಯವರು ಪುತ್ಥಳಿ ಹಾಗೂ ಉದ್ಯಾವನದ ನಿರ್ವಹಣೆ ಮಾಡುತ್ತಿದ್ದರೂ ನನಗೆ ಇದೂವರೆವಿಗೂ ಆವರಣದ ಕೀಲಿ ಕೈಯನ್ನು ನೀಡಿಲ್ಲ.
ನಮ್ಮ ಪ್ರತಿಷ್ಟಾನಕ್ಕೆ ಜಾಗವನ್ನು ಸಹ ಹಸ್ತಾಂತರಿಸಿಲ್ಲ, ಬರುವ ದಿನಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಸಮುದಾಯಗಳ ಉಪವಿಭಾಗ ಮಟ್ಟದ ಕುಂದುಕೊರತೆಯ ಸಭೆ ನಡೆಯಲಿದ್ದು ನಮ್ಮ ಮುಖಂಡರ ಜೊತೆ ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
ಪುರಸಭೆಯ ಮುಖ್ಯಾಧಿಕಾರಿ ಲೋಹಿತ್ ಮಾತನಾಡಿ, ನಾನು ಮಧುಗಿರಿ ಪುರಸಭೆ ಇತ್ತೀಚೆಗೆ ಬಂದಿದ್ದು ಈ ವಿಚಾರದ ಬಗ್ಗೆ ಅಷ್ಟೊಂದು ಮಾಹಿತಿ ತಿಳಿದಿಲ್ಲ. ಪ್ರತಿಮೆಯ ಪ್ರತಿಷ್ಟಾನ ಸಮಿತಿಯವರು ಪತ್ರ ವ್ಯವಹಾರದ ಮೂಲಕ ಪ್ರಸ್ತಾಪ ಮಾಡಿದರೆ ಕಾನೂನಿನ ರೀತಿಯಲ್ಲಿ ಉಪವಿಭಾಗಾಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
