ತುಮಕೂರು

ಕುಡಿಯುವ ನೀರಿನ ಪರಿಸ್ಥಿತಿ ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ಅತ್ಯಂತ ಕ್ಲಿಷ್ಟಕರವಾಗುತ್ತಿದೆ. ಅನುದಾನ ಲಭ್ಯವಿದ್ದು, ಕೊಳವೆಬಾವಿ ಕೊರೆಸಿದರೂ, ನೀರು ಸಿಗಲಾರದಂತಹ ಸ್ಥಿತಿ ಉದ್ಭವಿಸುತ್ತಿದೆ ಎಂದು ತುಮಕೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ ಆತಂಕ ವ್ಯಕ್ತಪಡಿಸಿದರು.
ಅವರು ಮಂಗಳವಾರ ಬೆಳಗ್ಗೆ ತುಮಕೂರು ನಗರದ ತುಮಕೂರು ತಾಲ್ಲೂಕು ಪಂಚಾಯಿತಿಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಮಹಾತ್ಮಗಾಂಧಿ ರೂರಲ್ ಡೆವೆಲಪ್ಮೆಂಟ್ ಅಂಡ್ ಯೂತ್ ವೆಲ್ಫೇರ್ ಸೆಂಟರ್ ಸಂಯುಕ್ತಾಶ್ರಯದಲ್ಲಿ ಏರ್ಪಟ್ಟಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮಾಂತರದಲ್ಲಿ ಕುಡಿಯುವ ನೀರಿಗೆ ಕೊಳವೆ ಬಾವಿಗಳೆ ಆಧಾರವಾಗಿವೆ. ಆದರೆ ಈಗ ಅಂತರ್ಜಲ ಅಭಾವದಿಂದ ಇರುವ ಕೊಳವೆ ಬಾವಿಗಳಲ್ಲೂ ನೀರು ಲಭ್ಯವಾಗುತ್ತಿಲ್ಲ. ಅನುದಾನಗಳನ್ನು ಬಳಸಿಕೊಂಡು ಹೊಸ ಕೊಳವೆಬಾವಿಗಳನ್ನು ಕೊರೆಸಿದರೂ, ಅದರಲ್ಲೂ ನೀರು ಸಿಗದಿರುವಂತಹ ಕಳವಳಕಾರಿ ಸನ್ನಿವೇಶ ಎದುರಾಗುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ಖಾಸಗಿ ಟ್ಯಾಂಕರ್ಗಳನ್ನು ಬಾಡಿಗೆಗೆ ಗೊತ್ತು ಮಾಡಿದರೂ, ಅವರಿಗೂ ನೀರು ಲಭಿಸದೆ ನೀರು ಸರಬರಾಜು ಮಾಡುವುದು ಕಷ್ಟಕರವಾಗುತ್ತಿದೆ. ಒಬ್ಬ ವ್ಯಕ್ತಿಗೆ ಒಂದು ದಿನಕ್ಕೆ ಸುಮಾರು 40 ಲೀಟರ್ಗಳಷ್ಟು ನೀರಿನ ಅವಶ್ಯಕತೆ ಇದೆಯೆಂದು ನಿಗದಿಪಡಿಸಿದ್ದರೂ, ಅಷ್ಟು ನೀರನ್ನು ಕೊಡಲು ಸಹ ಆಗದಿರುವ ವಾತಾವರಣ ಸೃಷ್ಟಿಯಾಗುತ್ತಿದೆ ಎಂದು ಕಳವಳದಿಂದ ವಿವರಿಸಿದರು.
ಗ್ರಾಮಾಂತರ ಪ್ರದೇಶಗಳಲ್ಲಿ ಮಳೆ ನೀರು ವ್ಯರ್ಥವಾಗದಂತೆ ಕಟ್ಟೆಗಳನ್ನು ಕಟ್ಟಿ ನೀರು ಇಂಗುವಂತೆ ಮಾಡಿ ಅಂತರ್ಜಲ ವೃದ್ಧಿಯಾಗುವಂತೆ ಮಾಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಗ್ರಾಮಗಳ ಮಟ್ಟದಲ್ಲಿ ನೈರ್ಮಲ್ಯ ಸಮಸ್ಯೆ ಇರುವುದನ್ನೂ ಪ್ರಸ್ತಾಪಿಸಿದ ಗಂಗಾಂಜನೇಯ, ಎಲ್ಲರೂ ಕಡ್ಡಾಯವಾಗಿ ಕಸವನ್ನು ಒಣಕಸ ಮತ್ತು ಹಸಿಕಸ ಎಂದು ವಿಂಗಡಿಸಿಕೊಡುವ ಮೂಲಕ ಸಹಕಾರ ನೀಡುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ತುಮಕೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಜೈಪಾಲ್ ಮಾತನಾಡಿ, ಕುಡಿಯುವ ನೀರು ಮತ್ತು ನೈರ್ಮಲ್ಯದ ವಿಚಾರದ ಬಗ್ಗೆ ಇಂದು ಸಾರ್ವತ್ರಿಕವಾಗಿ ಎಲ್ಲರಲ್ಲೂ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಮನೆಗಳಲ್ಲಿ ಹಾಗೂ ಮನೆಯ ಹೊರಗೆ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆ ಇರಬೇಕು. ಸ್ವಚ್ಛತೆ ಇದ್ದಷ್ಟೂ ಕುಡಿಯುವ ನೀರು ಸಹ ಶುದ್ಧವಾಗಿರುತ್ತದೆ ಎಂದು ಹೇಳಿದರು.
ಸೆಂಟರ್ ಕಾರ್ಯದರ್ಶಿ ಉಮೇಶ್ಕುಮಾರ್ ಮಾತನಾಡಿ, ಘನತ್ಯಾಜ್ಯದಿಂದ ಕುಡಿಯುವ ನೀರು ಅಶುದ್ಧವಾಗುತ್ತಿರುವುದು ಇಂದು ವೈಜ್ಞಾನಿಕವಾಗಿ ದೃಢಪಟ್ಟಿರುವುದರಿಂದ ಘನತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಅಂತರ್ಜಲ ವೃದ್ಧಿಗಾಗಿ ಮಳೆ ನೀರು ಇಂಗಿಸುವ ಕುರಿತು ಅರಿವು ಮೂಡಿಸಬೇಕಾಗಿದೆ. ಇವೆಲ್ಲದರ ಜೊತೆ ಜೊತೆಗೆ ದ್ರವತ್ಯಾಜ್ಯದ ವಿಲೇವಾರಿ ಬಗ್ಗೆಯೂ ಇಂದು ಹೆಚ್ಚಿನ ಗಮನ ನೀಡಬೇಕಾಗಿದೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು.
ವೇದಿಕೆಯಲ್ಲಿ ಗ್ರಾಮೀಣ ನೀರು ಪೂರೈಕೆ ಇಲಾಖೆ ಅಧಿಕಾರಿ ಅರುಣಾಚಲ ಇದ್ದರು. ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಪ್ರತಿನಿಧಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
