ತುಮಕೂರು
ಲೋಕಸಭಾ ಕ್ಷೇತ್ರದ ಚುನಾವಣಾ ಅಧಿಸೂಚನೆ ನಾಳೆ ಪ್ರಕಟವಾಗಲಿದೆ. ಇದರೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಆರಂಭವಾಗಲಿವೆ. ಉಮೇದುವಾರಿಕೆ ಸಲ್ಲಿಕೆಗೆ ಇರುವ ಅವಧಿ ಕೇವಲ ಒಂದು ವಾರ ಮಾತ್ರ. ಮಾ.26 ರ ಒಳಗೆ ನಾಮಪತ್ರ ಸಲ್ಲಿಸಬೇಕು. ಅತ್ಯಂತ ಕಡಿಮೆ ಅವಧಿ ಇದ್ದರೂ ಸೀಟು ಹಂಚಿಕೆ ಬಿಕ್ಕಟ್ಟು ಮಾತ್ರ ಇತ್ಯರ್ಥವಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂಬ ವಿಷಯ ಹೆಚ್ಚು ತೀವ್ರತೆ ಪಡೆದಿರುವ ಕಾರಣ ತುಮಕೂರು ಲೋಕಸಭಾ ಕ್ಷೇತ್ರದ ಸೀಟು ಹಂಚಿಕೆ ವಿಷಯ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗಳು ಆರಂಭವಾಗುತ್ತಿರುವ ಈ ಸಮಯದಲ್ಲಿ ಇಂದು ಸೀಟು ಹಂಚಿಕೆ ಬಿಕ್ಕಟ್ಟಿಗೆ ಅಂತ್ಯ ಹಾಡಲೇಬೇಕಿದೆ. ಹಾಲಿ ಕ್ಷೇತ್ರವನ್ನು ಉಳಿಸಿಕೊಡುವಂತೆ ಕಾಂಗ್ರೆಸ್ ನಾಯಕರು ಇನ್ನಿಲ್ಲದ ಹರಸಾಹಸ ಪಡುತ್ತಿದ್ದರೆ, ದೋಸ್ತಿ ಪಕ್ಷ ಜೆಡಿಎಸ್ ಮಾತ್ರ ಎಲ್ಲವನ್ನು ಮೌನವಾಗಿಯೇ ನೋಡುತ್ತಿದೆ.
ಬೆಂಗಳೂರು ಉತ್ತರ ಅಥವಾ ತುಮಕೂರು ಕ್ಷೇತ್ರ ಇವೆರಡರಲ್ಲಿ ಯಾವ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕು ಎಂಬ ವಿಷಯದಲ್ಲಿ ದೇವೇಗೌಡರು ಇನ್ನೂ ತೀರ್ಮಾನಕ್ಕೆ ಬಂದಿಲ್ಲ. ಎರಡೂ ಕ್ಷೇತ್ರಗಳನ್ನು ಅಳೆದು ತೂಗುತ್ತಿದ್ದಾರೆ. ದೇವೇಗೌಡರೇ ಇಲ್ಲಿ ಅಭ್ಯರ್ಥಿಯಾಗಲಿ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಸಚಿವ ಕೃಷ್ಣಭೈರೇಗೌಡ ಮತ್ತಿತರರು ಹೇಳಿದ್ದರು. ಇದಾದ ಮಾರನೇ ದಿನವೇ ಅಲ್ಲಿ ಅಪಸ್ವರ ಎದುರಾಯಿತು. ಎಸ್.ಟಿ.ಸೋಮಶೇಖರ್, ಭೈರತಿಸುರೇಶ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ದೇವೇಗೌಡರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿದ್ದಾರೆ.
ತುಮಕೂರು ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ದೇವೇಗೌಡರೆ ಸ್ಪರ್ಧಿಸಲಿ. ಅವರನ್ನು ಹೊರತುಪಡಿಸಿ ಬೇರೆಯವರಿಗೆ ಟಿಕೆಟ್ ಕೊಡುವುದಾದರೆ ವಿರೋಧವಿದೆ. ಬದಲಾಗಿ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಬೇಕು ಎಂಬ ಬೇಡಿಕೆಯನ್ನು ತುಮಕೂರಿನ ಕಾಂಗ್ರೆಸ್ ಮುಖಂಡರು ಇಟ್ಟಿದ್ದಾರೆ. ದೇವೇಗೌಡರು ತಮ್ಮ ಗುಟ್ಟು ಬಿಟ್ಟುಕೊಡುತ್ತಿಲ್ಲ.
ಹೀಗಾಗಿ ಎಲ್ಲವೂ ಮುಗುಂ ಆಗಿ ಕಾಣುತ್ತಿದೆ. ಭಾನುವಾರದ ಬೆಳವಣಿಗೆಯಂತೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ನಡೆಯುತ್ತಿರುವ ಸೀಟು ಹಂಚಿಕೆ ಬಿಕ್ಕಟ್ಟು ಭಾನುವಾರವೂ ಇತ್ಯರ್ಥವಾದಂತೆ ಕಾಣಲಿಲ್ಲ.
ಇದೊಂದು ಸಮಸ್ಯಾತ್ಮಕವಾಗಿಯೇ ಉಳಿದಿದೆ. ಕಾಂಗ್ರೆಸ್ನ ಕೆಲವು ಮುಖಂಡರಂತೂ ತಮ್ಮ ಅತೃಪ್ತಿಯನ್ನು ಬಹಿರಂಗವಾಗಿ ಹೊರಹಾಕಲಾಗದೆ ಸೈಲೆಂಟ್ ಆಗಿ ಇದ್ದಾರೆ. ಜೆಡಿಎಸ್ನವರು ಸಹ ತಮಗೇ ಟಿಕೆಟ್ ಬೇಕೆಂದು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ಆದರೆ ಹೆಚ್.ನಿಂಗಪ್ಪ ಮತ್ತಿತರರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ದೇವೇಗೌಡರು ಇಲ್ಲಿಂದ ಸ್ಪರ್ಧಿಸಲಿ ಎಂಬ ಒತ್ತಾಸೆ ನಮ್ಮದು. ಒಂದು ವೇಳೆ ಅವರು ನಿರಾಕರಿಸಿದರೆ ಇಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಇದ್ದಾರೆ. ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಳ್ಳುವ ಇಲ್ಲಿ ಪ್ರಸ್ತುತ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಜಿಲ್ಲಾ ಪಂಚಾಯತಿ, ತುಮಕೂರು ಮಹಾನಗರ ಪಾಲಿಕೆ ಸೇರಿದಂತೆ ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. 2018ರ ಚುನಾವಣೆಯಲ್ಲಿ ಕೆಲವು ಕಡೆ ಜೆಡಿಎಸ್ ಅಭ್ಯರ್ಥಿಗಳು ಇತರೆ ರಾಜಕೀಯ ಕಾರಣಕ್ಕಾಗಿ ಸೋತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯವಿದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಸ್ಪರ್ಧಿಸಿದರೆ ಗೆಲುವು ಸಾಧ್ಯವಾಗಬಹುದು ಎಂಬ ಲೆಕ್ಕಾಚಾರಗಳಲ್ಲಿ ಜೆಡಿಎಸ್ ಮುಳುಗಿದೆ. ಸಾಧಕ ಬಾಧಕಗಳ ಲೆಕ್ಕಾಚಾರಗಳಲ್ಲಿ ತೊಡಗಿಯೇ ಈವರೆಗೆ ಯಾವುದೇ ಗುಟ್ಟು ಬಹಿರಂಗ ಮಾಡುತ್ತಿಲ್ಲ.
ಆದರೆ ಈ ಕ್ಷೇತ್ರದಲ್ಲಿ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಿದರೆ ನಿರಾಯಾಸವಾಗಿ ಗೆಲುವು ಸಾಧಿಸಬಹುದು. ಆ ಮೂಲಕ ಕೇಂದ್ರದಲ್ಲಿ ಬಿಜೆಪಿಯೇತರ ಪಕ್ಷ ಅಧಿಕಾರಕ್ಕೆ ತರಲು ಪ್ರಯತ್ನಿಸಬಹುದು ಎಂಬ ಲೆಕ್ಕಾಚಾರಗಳು ಕಾಂಗ್ರೆಸ್ ಮುಖಂಡರಲ್ಲಿ ಕೇಳಿಬರುತ್ತಿದೆ.
ತಮಗೆ ದಕ್ಕಿರುವ 8 ಸೀಟುಗಳನ್ನು ಬಿಟ್ಟುಕೊಡಲು ಜೆಡಿಎಸ್ ತಯಾರಿಲ್ಲ. ಮೈತ್ರಿ ಸಹಕಾರದಲ್ಲಿ ಒಂದಷ್ಟು ಸೀಟುಗಳನ್ನು ಗೆಲ್ಲಬಹುದಲ್ಲ ಎಂಬ ಲೆಕ್ಕಾಚಾರ ಆ ಪಕ್ಷದ್ದಾಗಿದೆ. ಆದರೆ ಕ್ಷೇತ್ರ ಮರಳಿ ಪಡೆಯಲು ಕಾಂಗ್ರೆಸ್ ಮುಖಂಡರ ಮನವೊಲಿಕೆ ಪ್ರಯತ್ನಗಳು ಇನ್ನೂ ಮುಂದುವರಿದೇ ಇವೆ. ದೇವೇಗೌಡರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದೇ ಈಗ ಎಲ್ಲರ ಕಾತರ ಕುತೂಹಲ. ಶನಿವಾರ ತಡರಾತ್ರಿಯವರೆಗೂ ತುಮಕೂರು ಕ್ಷೇತ್ರದ ಸಾಧಕ ಬಾಧಕಗಳ ಬಗ್ಗೆ ದೇವೇಗೌಡರು ತಮ್ಮ ನಿವಾಸದಲ್ಲಿ ಕುಮಾರಸ್ವಾಮಿ ಮತ್ತು ರೇವಣ್ಣ ಅವರೊಂದಿಗೆ ಚರ್ಚಿಸಿದ್ದಾರೆ.
ಮೈತ್ರಿ ಪಕ್ಷಗಳಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು ಮುಂದುವರಿದಿರುವ ನಡುವೆ ಬಿಜೆಪಿ ಮಾತ್ರ ತನ್ನ ಕೆಲಸ ಕಾರ್ಯಗಳನ್ನು ಸದ್ದಿಲ್ಲದೆ ಮಾಡಿ ಮುಗಿಸುತ್ತಿದೆ. ಈಗಾಗಲೇ ಅಭ್ಯರ್ಥಿ ಯಾರಾಗಲಿದ್ದಾರೆಂಬುದು ಸಹ ಆ ಪಕ್ಷದಲ್ಲಿ ನಿರ್ಧಾರವಾಗಿದೆ. ಈಗಾಗಲೇ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಿ.ಎಸ್.ಬಸವರಾಜ್ ಅವರ ಹೆಸರು ಕೇಳಿಬರುತ್ತಿದೆ. ಆದರೆ ಮೈತ್ರಿ ಪಕ್ಷಗಳ ಅಭ್ಯರ್ಥಿಯನ್ನು ನೋಡಿ ನಂತರ ಬಿಜೆಪಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಬಹುದಾದ ನಿರೀಕ್ಷೆ ಇದೆ.
ತುಮಕೂರು ಕ್ಷೇತ್ರವನ್ನು ಮರಳಿ ಪಡೆಯಲು ಕಾಂಗ್ರೆಸ್ ಮುಖಂಡರ ಹೋರಾಟ ಭಾನುವಾರದವರೆಗೂ ಮುಂದುವರೆದಿದೆ. ಇಲ್ಲಿನ ಬಿಕ್ಕಟ್ಟು ನವದೆಹಲಿಗೂ ತಲುಪಿದೆ. ಆದರೆ ಈ ಸಮಸ್ಯೆಗೆ ಇತಿಶ್ರೀ ಹಾಡಬೇಕಿರುವವರು ಜೆಡಿಎಸ್ ವರಿಷ್ಠರಾದ ದೇವೇಗೌಡರು.ತುಮಕೂರು ಕ್ಷೇತ್ರದಲ್ಲಿನ ವಿದ್ಯಮಾನಗಳ ಬಗ್ಗೆ ಶನಿವಾರ ರಾತ್ರಿ ದೇವೇಗೌಡರು ಸಭೆ ನಡೆಸಿದ್ದಾರೆ. ತುಮಕೂರಿನಿಂದ ಸ್ಪರ್ಧಿಸುವರೋ? ಅಥವಾ ಪಕ್ಷದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವರೋ? ಇಲ್ಲ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ಕಾಂಗ್ರೆಸ್ಗೆ ಸೀಟು ಬಿಟ್ಟುಕೊಡುವರೋ ಎಂಬುದು ಬಹುತೇಕ ಇಂದು ಸಂಜೆಯೊಳಗೆ ತೀರ್ಮಾನವಾಗಬಹುದು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
