ಹೊನ್ನಾಳಿ:
ಎನ್ನೆಸ್ಸೆಸ್ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಗ್ರಾಮೀಣ ಜನಜೀವನದ ಪರಿಚಯ ಮಾಡಿಸುತ್ತದೆ. ಸಮಾಜದಲ್ಲಿ ಹೇಗೆ ಸಹಜೀವನ ನಡೆಸಬೇಕು ಎಂಬುದನ್ನು ಯುವಜನತೆಗೆ ಕಲಿಸುತ್ತದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕೂಲಂಬಿ-ಕುಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ “ವಿಜ್ಞಾನ ಮತ್ತು ವೈಜ್ಞಾನಿಕ ಮನೋಭಾವನೆಗಾಗಿ ವಿದ್ಯಾರ್ಥಿಗಳು” ಎಂಬ ಶೀರ್ಷಿಕೆಯಡಿ ಕೂಲಂಬಿ ಮತ್ತು ಕುಂದೂರು ಗ್ರಾಮಗಳಲ್ಲಿ ಹಮ್ಮಿಕೊಂಡ ಎನ್ನೆಸ್ಸೆಸ್ ವಿಶೇಷ ವಾರ್ಷಿಕ ಶಿಬಿರವನ್ನು ಕಾಲೇಜಿನ ಆವರಣದಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ನಾಡಿನ ಧೀಮಂತ ನಾಯಕರಾದ ಸ್ವಾಮಿ ವಿವೇಕಾನಂದ, ಎಪಿಜೆ ಅಬ್ದುಲ್ ಕಲಾಂ ಅವರಂಥ ವ್ಯಕ್ತಿತ್ವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಇದಕ್ಕೆ ಎನ್ನೆಸ್ಸೆಸ್ ಸಹಕಾರಿಯಾಗಿದೆ. ಆದ್ದರಿಂದ, ಎಲ್ಲಾ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಒತ್ತು ನೀಡಬೇಕು ಎಂದು ತಿಳಿಸಿದರು.
ನಮ್ಮ ದೇಶ ಕೇವಲ ಆರ್ಥಿಕ ರಂಗದಲ್ಲಿ ಅಭಿವೃದ್ಧಿ ಸಾಧಿಸಿದರೆ ಸಾಲದು, ಬದಲಿಗೆ ಶಿಕ್ಷಣ ರಂಗದಲ್ಲೂ ಉನ್ನತ ಸಾಧನೆ ಮಾಡಬೇಕು. ಇದು ನಮ್ಮ ವಿದ್ಯಾರ್ಥಿ ಸಮೂಹದಿಂದ ಸಾಧ್ಯ. ಹಾಗಾಗಿ, ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಗುಣಾತ್ಮಕ ಶಿಕ್ಷಣ ಪಡೆಯಬೇಕು ಎಂದು ವಿವರಿಸಿದರು.
ಪ್ರಾಂಶುಪಾಲ ಎ.ಎಸ್. ಮಂಜಪ್ಪ, ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಮಂಜುನಾಥ್ ಐರಣಿ, ಉಪನ್ಯಾಸಕರಾದ ಭೀಮಾನಾಯ್ಕ್, ಬಿ.ಸಿ. ಬಸವರಾಜಪ್ಪ ಇತರರು ಮಾತನಾಡಿದರು,
ಗ್ರಾಪಂ ಅಧ್ಯಕ್ಷೆ ಗಾಯತ್ರಿ ಪ್ರಶಾಂತ್, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾದ ಬಸವರಾಜಪ್ಪ, ಎನ್.ವಿ. ವರಗಿರಿ, ಉಮಾಪತಿ, ಅಜ್ಜಪ್ಪ, ಲಿಂಗರಾಜ್, ಮುಖಂಡರಾದ ಯಕ್ಕನಹಳ್ಳಿ ಜಗದೀಶ್, ಮರುಳಸಿದ್ಧಪ್ಪ, ಮಂಜುನಾಥ್, ರಮೇಶ್, ಕೆ.ಎ. ಪೂಜಾ, ಕೂಲಂಬಿ ಹಾಗೂ ಕುಂದೂರು ಗ್ರಾಮಗಳ ಮುಖಂಡರು ಉಪಸ್ಥಿತರಿದ್ದರು.ಎನ್ನೆಸ್ಸೆಸ್ ಸ್ವಯಂ ಸೇವಕರು ಕಾಲೇಜು ಆವರಣವನ್ನು ಶುಚಿಗೊಳಿಸಿದರು.
