ಬೆಂಗಳೂರು:
ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಗಳು ರೈತರಿಗೆ ಹತ್ತಿರವಾದ ಇಲಾಖೆಗಳಾಗಿದ್ದು, ರೈತ ಕಲ್ಯಾಣಕ್ಕಾಗಿ ಸರ್ಕಾರ ರೂಪಿಸಿದ ಯೋಜನೆಗಳ ಲಾಭ ನಿಜವಾದ ರೈತರಿಗೆ ತಲುಪಬೇಕಾದರೆ ಇಲಾಖೆಗಳು ರೈತಪರ ಹಾಗೂ ಜನಪರವಾಗ ಬೇಕಲ್ಲದೆ, ಎಲ್ಲಾ ಹಂತದ ಅಧಿಕಾರಿಗಳು ಇನ್ನೂ ಹೆಚ್ಚು ಬದ್ಧತೆಯಿಂದ ಹಾಗೂ ಭಾವನಾತ್ಮಕವಾಗಿ ಕರ್ತವ್ಯ ನಿರ್ವಹಿಸಬೇಕಾದ ಅಗತ್ಯವಿದೆ ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.
ಇಂದು ವಿಕಾಸಸೌಧದಲ್ಲಿ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಜಿಲ್ಲಾ ಹಾಗೂ ವಿಭಾಗ ಮಟ್ಟದ ಅಧಿಕಾರಿಗಳೊಂದಿಗೆ ಇಲಾಖೆಯ ಕಾರ್ಯ ವೈಖರಿ ಕುರಿತಂತೆ ಪರಿಶೀಲನಾ ಸಭೆ ನೆಡೆಸಿದ ಸಚಿವರು ಇಲಾಖೆಗೆ ಮಂಜೂರಾದ ಅನುದಾನ ಸಮರ್ಪಕವಾಗಿ ಖರ್ಚಾಗುತ್ತಿಲ್ಲವೆಂದು, ಸಹಾಯಧನ ಯೋಜನೆಗಳಡಿಯ ಸೌಲಭ್ಯ ಅರ್ಹ ಫಲಾನುಭವಿಗಳಿಗೆ ತಲುಪುವಲ್ಲಿ ವಿಳಂಬ ಹಾಗೂ ಅಸಮರ್ಪಕ ವಿತರಣೆ ಬಗ್ಗೆ ಸಾಕಷ್ಟು ದೂರುಗಳಿದ್ದು, ಇದನ್ನು ಸರಿಪಡಿಸಲು ಸೂಚಿಸಿದರು. ಎಂಪ್ಯಾನಲ್ಮೆಂಟ್ ಮಾಡಿರುವ ಸರಬರಾಜುದಾರರು ಒದಗಿಸುತ್ತಿರುವ ಉಪಕರಣಗಳ ಗುಣನಿಯಂತ್ರಣದ ಬಗ್ಗೆ ಗಮನ ನೀಡಲು ಕಿವಿಮಾತು ಹೇಳಿದರು.
ತೋಟಗಾರಿಕೆ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ರೂಪಿಸುವುದು, ರಫ್ತು ಸಾಮಥ್ರ್ಯ ಹೆಚ್ಚಿಸುವುದು, ತೋಟಗಾರಿಕೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಬಗ್ಗೆ ಆದ್ಯತೆ ನೀಡಲು ಸೂಚಿಸಿದ ಸಚಿವರು ಯೋಜನೆಯ ಅನುಷ್ಠಾನದಲ್ಲಿ ಯಾವುದೇ ಕಾರಣಕ್ಕೂ ವಿಳಂಬ ಹಾಗೂ ಪಕ್ಷಪಾತ ದೋರಣೆಯನ್ನು ಸಹಿಸುವುದಿಲ್ಲವೆಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ರೈತರಿಗೆ ಹೆಚ್ಚು ಅನುಕೂಲವಾಗುವ ದೃಷ್ಟಿಯಿಂದ ಇಲಾಖೆಯಲ್ಲಿ ಆಡಳಿತಾತ್ಮಕವಾಗಿ ಹಾಗೂ ತಾಂತ್ರಿಕವಾಗಿ ಬದಲಾವಣೆಗಳಾಗಬೇಕಾದ ಅಗತ್ಯವಿದ್ದು ಈ ಬಗ್ಗೆಯೂ ಪರಿಶೀಲಿಸಿ ಸೂಕ್ತ ಪ್ರಸ್ತಾವನೆ ಸಿದ್ಧಪಡಿಸುವಂತೆ ಇಲಾಖಾ ಮುಖ್ಯಸ್ಥರಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
