ಕೊರಟಗೆರೆ
ಆಸಕ್ತ ಜನರ ಹಿತದೃಷ್ಟಿಯಿಂದ ಸರ್ಕಾರ ಅವರಿಗೆ ಸಾಮಾಜಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಸಮರ್ಪಕವಾಗಿ ತಲುಪಿಸುವಂತಹ ಕೆಲಸದಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಮಧುಗಿರಿ ಉಪ ವಿಭಾಗಾಧಿಕಾರಿ ಚಂದ್ರಶೇಖರ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡುತ್ತಾ, ಆಸಕ್ತ ಜನರಿಗೆ ಸಂಧ್ಯಾ, ವಿಧವಾ, ಅಂಗವಿಕಲ ಸೇರಿದಂತೆ ವೃದ್ಧಾಪ್ಯ ವೇತನಗಳ ಹಂಚಿಕೆ ವಿಚಾರದಲ್ಲಿ ಅಧಿಕಾರಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ಪಂದಿಸಬೇಕು ಎಂದರು.
ಕೊರಟಗೆರೆ ಕ್ಷೇತ್ರ ಡಿಸಿಎಂ ಡಾ. ಜಿ.ಪರಮೇಶ್ವರ್ರವರ ಕ್ಷೇತ್ರವಾಗಿದ್ದು, ಅವರ ಒತ್ತಾಸೆಯಂತೆ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ 60ವರ್ಷ ಮೇಲ್ಪಟ್ಟ ಎಲ್ಲಾ ಫಲಾನುಭವಿಗಳಿಗೂ ಪಿಂಚಣಿ ಅದಾಲತ್ ಮೂಲಕ ಹಂಚಿಕೆ ಮಾಡಲು ಈ ಪಿಂಚಣಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈ ಪಿಂಚಣಿ ಅದಾಲತ್ನಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಹ ಫಲಾನುಭವಿಗಳಿಗೂ ಮಾನವೀಯತೆ ದೃಷ್ಟಿಕೋನದಲ್ಲಿ ಸ್ಥಳದಲ್ಲಿಯೇ ಆದೇಶ ಕಾಪಿ ವಿತರಿಸುವ ಕಾರ್ಯ ನಡೆಸಲಾಗುವುದು ಎಂದರು.
ತಹಸೀಲ್ದಾರ್ ನಾಗರಾಜು ಮಾತನಾಡಿ, ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ತಾಲ್ಲೂಕ್ ಮಟ್ಟದ ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿಯೇ ಹಾಜರಿದ್ದು, ನಿಮ್ಮ ಅರ್ಜಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದರಿಂದ ಆದೇಶ ಕಾಪಿ ಸಹ ಸ್ಥಳದಲ್ಲಿಯೇ ವಿತರಣೆ ಮಾಡುವ ಅವಕಾಶವಿರುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು
ಸದುಪಯೋಗಪಡೆದುಕೊಳ್ಳಬೇಕು ಎಂದರು. ಅಲ್ಲದೆ ಪಿಂಚಣಿಗೆ ಅರ್ಹರಾದ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ ಕಡ್ಡಾಯವಾಗಿ ಆಧಾರ್ ಲಿಂಕ್ ಮಾಡಿಸಬೇಕು. ಇಡೀ ತಾಲ್ಲೂಕಿನಲ್ಲಿ ಕೇವಲ ಶೇ.25 ರಷ್ಟು ಮಾತ್ರ ಆಧಾರ್ ಲಿಂಕ್ ಆಗಿರುವುದರಿಂದ ಪಿಂಚಣಿ ವಿಚಾರದಲ್ಲಿ ಒಂದಷ್ಟು ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ. ಕಾಲಕಾಲಕ್ಕೆ ಪಿಂಚಣಿ ಹಣ ಬಾರದಿರುವುದಕ್ಕೆ ಇದೇ ಕಾರಣವಾಗಿದೆ ಎಂದರು.
ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 254 ಅರ್ಜಿ ಸಲ್ಲಿಸಿದ್ದು, ಅದರಲ್ಲಿ 28 ಸಂಧ್ಯಾ ಸುರಕ್ಷಾ ವೇತನ, 195 ವೃದ್ಧಾಪ್ಯ ವೇತನ, 14 ವಿಧವಾ ವೇತನಾ ಹಾಗೂ 13 ಅಂಗವಿಕಲ ವೇತನ, 4 ಮನಸ್ವಿನಿ ವೇತನ ಸೇರಿದಂತೆ ಒಟ್ಟು 254 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅರ್ಜಿ ಪರಿಶೀಲಿಸಿ ಅತಿತ್ವರಿತವಾಗಿ ಒಂದೆರಡು ದಿನಗಳಲ್ಲಿ ಈ ಅರ್ಜಿ ಫಲಾನುಭವಿಗಳಿಗೆ ಆದೇಶ ಕಾಪಿ ವಿತರಿಸಲಾಗುವುದು ಎಂದರು.
ಗ್ರಾಪಂ ಅಧ್ಯಕ್ಷ ರವಿಕುಮಾರ್ ಮಾತನಾಡಿ, ನಮ್ಮ ನಾಡಕಚೇರಿ ಉತ್ತಮ ಕೆಲಸ ಮಾಡುತ್ತಿರುವ ಸಲುವಾಗಿ ರಾಜ್ಯಕ್ಕೆ 7ನೇ ಹಾಗೂ ತುಮಕೂರು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿರುವ ನಾಡಕಚೇರಿ. ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉತ್ತಮ ಕಾರ್ಯನಿರ್ವಸುತ್ತಿದ್ದು, ಈ ಹಿಂದೆ ಉಪ ತಹಸೀಲ್ದಾರ್ ಆಗಿದ್ದ ಶಿವಕುಮಾರ್ ಕೆಲಸ ಮಾಡತ್ತಿದ್ದ ಸಂದರ್ಭದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ತಂದಿರುವ ಕೀರ್ತಿ ಅವರಿಗೆ ಸಲುತ್ತದೆ ಎಂದರು.
ಉಪ ತಹಸೀಲ್ದಾರ್ ಮಧುಚಂದ್ರ ಮಾತನಾಡಿ, ಹೊಳವನಹಳ್ಳಿ ಹೋಬಳಿಯಲ್ಲಿ ಇನ್ನೂ ಅನೇಕರು ಪಿಂಚಣಿಯಿಂದ ವಂಚಿತರಾಗಿದ್ದಾರೆ. ಈ ಸಂದರ್ಭದಲ್ಲಿ 255 ಅರ್ಜಿಗಳು ಬಂದಿದ್ದು, ಮುಂದಿನ ದಿನಗಳಲ್ಲಿ ಯಾರಾದರೂ ಅರ್ಜಿಯನ್ನ ಕೊಡಬೇಕಾದರೆ ನಮ್ಮ ನಾಡಕಚೇರಿಗೆ ಬಂದು ನಿಮ್ಮ ಅರ್ಜಿಯನ್ನ ಕೊಡಬಹುದು, ಬರುವಂತಹ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಆದೇಶ ಕಾಪಿ ವಿತರಿಸಲಾಗುವುದು ಎಂದರು.
ಗ್ರಾ.ಪಂ.ಸದಸ್ಯ ಜಯರಾಮ್ ಮಾತನಾಡಿ ನಾಲ್ಕು ವರ್ಷದಿಂದ ಇಲ್ಲಿನ ಸಿಬ್ಬಂದಿಗಳು ಕೆಲಸ ನಿರ್ವಹಿಸಿದ ಪ್ರತಿಫಲವಾಗಿ ಜಿಲ್ಲೆಗೆ ಮೊದಲ ಸ್ಥಾನ ಬಂದಿದೆ. 4 ವರ್ಷದಲ್ಲಿ ಯಾವುದೇ ಒಂದು ದೂರು ಸಹ ವ್ಯಕ್ತವಾಗಿಲ್ಲ. ಆದರೂ ಈ ಯುವತಿ ಮೇಲಿನ ಆರೋಪದಲ್ಲಿ ಹುರುಳಿಲ್ಲ. ಮಧ್ಯವರ್ತಿಗಳ ಹಾವಳಿ ತಪ್ಪಿಸಿದ ಪರಿಣಾಮ ಯುವತಿಯ ಮೇಲೆ ಆರೋಪ ಬಂದಿದೆ. ಇಲ್ಲಿ ಸಿಬ್ಬಂದಿಗಳ ಕೊರತೆಇದೆ. ಮಾನ್ಯ ಉಪವಿಭಾಗಾಧಿಕಾರಿಗಳು ಇಲ್ಲಿ ಉತ್ತಮವಾಗಿ ಕೆಲಸ ಮಾಡುವವರನ್ನ ವರ್ಗಾವಣೆ ಮಾಡಬಾರದು.
ಕಾರ್ಯಕ್ರಮದಲ್ಲಿ ಕಂದಾಯ ಅಧಿಕಾರಿ ನಾಗೇಶ್, ಮಾಜಿ ಗ್ರಾಪಂ ಸದಸ್ಯ ಜಯರಾಮ್, ಮುಖಂಡರಾದ ಗಂಗಣ್ಣ, ನರಸಿಂಹಮೂರ್ತಿ, ಸುರೇಶ್, ನಂಜುಂಡಯ್ಯ, ಹನುಮಂತರಾಯಪ್ಪ, ಸಣ್ಣರಂಗಪ್ಪ, ಜಾಫರ್ ಅಲಿ, ಪುಟ್ಟರಾಜು, ಮೂರ್ತಿ, ರಾಮಾಂಜಿನಪ್ಪ, ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
