ತುಮಕೂರು
ಕೊರೊನಾ ಹಿನ್ನೆಲೆಯಲ್ಲಿ ಮನೆ-ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸುತ್ತಿರುವ ಸರ್ಕಾರಿ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆಯೊಂದು ತುಮಕೂರು ನಗರದ ಸರಸ್ವತಿಪುರಂನಲ್ಲಿ ನಡೆದಿದ್ದು, ಈ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸರಸ್ವತಿಪುರಂನಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 2 ಗಂಟೆಯಲ್ಲಿ ಈ ಅಹಿತಕರ ಪ್ರಸಂಗ ಜರುಗಿದೆ. ಆರೋಗ್ಯ ಇಲಾಖೆ ಪರವಾಗಿ ನಿಯೋಜಿಸಲ್ಪಟ್ಟಿರುವ ಶಾಲಾ ಶಿಕ್ಷಕಿ ಸರೋಜಮ್ಮ ಎಂಬುವವರು ಇಲ್ಲಿನ ಮನೆಯೊಂದಕ್ಕೆ ಬಂದು ನಿಗದಿತ ಫಾರಂನಲ್ಲಿರುವ ಮಾಹಿತಿ ಸಂಗ್ರಹಕ್ಕೆ ತೊಡಗಿದ್ದರು. ಮನೆಯವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಮನೆಯಲ್ಲಿರುವವರಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಮೂತ್ರಪಿಂಡದ ಕಾಯಿಲೆ, ಉಸಿರಾಟದ ತೊಂದರೆ ಮತ್ತಿತರ ಕಾಯಿಲೆಗಳಿದ್ದರೆ ಅವುಗಳ ಬಗ್ಗೆ ಸದರಿ ಫಾರಂನಲ್ಲಿ ಗುರುತು ಹಾಕಿಕೊಳ್ಳುವಂತೆ ಇವರುಗಳಿಗೆ ತರಬೇತಿ ನೀಡಲಾಗಿದೆ.
ಅದರಂತೆ ಸರೋಜಮ್ಮ ಕರ್ತವ್ಯ ನಿರ್ವಹಿಸುವಾಗ, ಆ ಮನೆಯ ಮಾಲೀಕ ಅಜ್ಗರ್ ಖಾನ್ ಎಂಬುವವವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೀವು ಯಾರು? ಏಕೆ ಬಂದಿದ್ದೀರಿ? ನಿಮ್ಮ ಗುರುತು ಪತ್ರ ಎಲ್ಲಿದೆ? ಗುರುತುಪತ್ರ ಇಲ್ಲದೆ ಹೇಗೆ ಕೆಲಸ ಮಾಡುತ್ತೀರಿ? ಎಂಬಿತ್ಯಾದಿಯಾಗಿ ಪ್ರಶ್ನಿಸಿದ್ದಾರೆ.
ಬಳಿಕ ಇವರು ಬರೆದುಕೊಂಡಿದ್ದ ದಾಖಲಾತಿ ಪುಸ್ತಕದ ವಿವರಗಳನ್ನು ತೆಗೆದುಹಾಕುವಂತೆ ಒತ್ತಡ ಹಾಕಿದ್ದು, ಒಟ್ಟಾರೆ ಅನುಚಿತವಾಗಿ ನಡೆದುಕೊಂಡಿದ್ದಾರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜಯನಗರ ಪೊಲೀಸ್ ಠಾಣೆಯಲ್ಲಿ ಅಜ್ಗರ್ ಖಾನ್ ವಿರುದ್ಧ ಐ.ಪಿ.ಸಿ. ಕಲಂ 353, ಸಾಂಕ್ರಾಮಿಕ ರೋಗ ಕಾಯ್ದೆ ಕಲಂ 5 ರ ಪ್ರಕಾರ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ