ದಾವಣಗೆರೆ:
ಸಮೀಪದ ಶಿರಮಗೊಂಡನಹಳ್ಳಿಯ ಸರ್ವೇ ನಂಬರ್ 57/2ನ ಎಸ್.ಎ.ರವಿಂದ್ರನಾಥ್ ಬಡಾವಣೆಯಲ್ಲಿರುವ ನಿವೇಶನ ಶೈಕ್ಷಣಿಕ ಉದ್ದೇಶಕ್ಕೆ ಮೀಸಲಾಗಿದ್ದು, ಈ ನಿವೇಶನದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಮುಂದಾಗಿರುವ ಪಾಲಿಕೆಯ ತೀರ್ಮಾನಕ್ಕೆ ಶಾಸಕ ಎಸ್.ಎ.ರವೀಂದ್ರನಾಥ್ ಆಕ್ಷೇಪ ವ್ಯಕ್ತಪಡಿಸಿರುವುದು ಪಾಲಿಕೆ ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು.
ಇಲ್ಲಿನ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಮೇಯರ್ ಶೋಭಾ ಪಲ್ಲಾಗಟ್ಟೆ ಅಧ್ಯಕ್ಷತೆಯಲ್ಲಿ ನಡೆದ ಪಾಲಿಕೆ ಸಾಮಾ ನ್ಯ ಸಭೆಯಲ್ಲಿ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ ಮಾತನಾಡಿ, ಹಿಂದಿನ ಸಭೆಯಲ್ಲಿ ಶಿರಮಗೊಂಡನಹಳ್ಳಿ ಸರ್ವೇ ನಂಬರ್ 57/2ರಲ್ಲಿರುವ ಎಸ್.ಎ.ರವೀಂದ್ರನಾಥ್ ಬಡಾವಣೆಯಲ್ಲಿರುವ ನಿವೇಶನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಈ ನಿವೇಶನವು ಶೈಕ್ಷಣಿಕ ಉದ್ದೇಶಕ್ಕೆ ಮೀಸಲಾಗಿರುವ ಕಾರಣಕ್ಕೆ ಶಾಸಕ ಎಸ್.ಎ.ರವೀಂದ್ರನಾಥ್ ಆಕ್ಷೇಪಣೆ ಸಲ್ಲಿಸಿದ್ದಾರೆಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಾಲಿಕೆ ಸದಸ್ಯ ಎಂ.ಹಾಲೇಶ್, ಈಗಾಗಲೇ ಕಳೆದ ಸಭೆಯಲ್ಲಿಯೇ ಆ ನಿವೇಶನದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ಬಗ್ಗೆ ತೀರ್ಮಾನಿಸಿ ಸ್ಥಿರಿಕರಿಸಲಾಗಿದೆ. ಪಾಲಿಕೆಯು ಸರ್ವಾನುಮತದಿಂದ ತೀರ್ಮಾನಿಸಿರುವುದನ್ನು ತಡೆ ಹಿಡಿಯಲು ಆಯುಕ್ತರಿಂದ ಸಾಧ್ಯವಿಲ್ಲ. ಆದ್ದರಿಂದ ಅಂಬೇಡ್ಕರ್ ಭವನ ನಿರ್ಮಾಣದ ಕುರಿತು ಸರ್ಕಾರಕ್ಕೆ ವರದಿ ನೀಡಬೇಕೆಂದು ಸಲಹೆ ನೀಡಿದರು.
ಇದಕ್ಕೆ ದನಿಗೂಡಿಸಿದ ಪಾಲಿಕೆಯ ಸಿಪಿಐ ಸದಸ್ಯ ಹೆಚ್.ಜಿ.ಉಮೇಶ್, ಹಿಂದೆ ರಾಜಕಾರಣಿಗಳು ಇಲ್ಲಿ ಗುಡಿಸಲು ಹಾಕಿಕೊಳ್ಳಿ ನಿಮಗೆ ನಿವೇಶನ ಮತ್ತು ಹಕ್ಕುಪತ್ರ ಕೊಡಿಸುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ ಆ ಜಾಗದಲ್ಲಿ ಹಲವು ಗುಡಿಸಲು ಮನೆಗಳು ಎದ್ದಿವೆ. ಅಲ್ಲಿ ಶೈಕ್ಷಣಿಕ ಉದ್ದೇಶಕ್ಕೆ ಮೀಸಲಿರುವ ನಿವೇಶನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೆಸರಿನಲ್ಲಿ ಭವನ ನಿರ್ಮಾಣಕ್ಕೆ ಮುಂದಾಗಿರಿವುದಕ್ಕೆ ಶಾಸಕರು ಆಕ್ಷೇಪ ಎತ್ತಿರುವುದು ಸರಿಯಲ್ಲ.
ಏಕೆಂದರೆ, ಈಗಾಗಲೇ ಖಾಸಗಿ ಶಾಲಾ-ಕಾಲೇಜುಗಳ ಹಾವಳಿಯಿಂದ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೆ ಇಲ್ಲಿ ಖಾಸಗಿ ಶಾಲಾ ಕಾಲೇಜು ಕಟ್ಟಲು ಅನುಮತಿ ಪಡೆಯಬಹುದು. ಆದ್ದರಿಂದ ಮತ್ತಷ್ಟು ಸರ್ಕಾರಿ ಶಾಲೆಗಳಿಗೆ ಹೊಡೆತ ಬೀಳಲಿದೆ. ಆದ್ದರಿಂದ ಅಂಬೇಡ್ಕರ್ ಭವನ ನಿರ್ಮಿಸುವುದೇ ಒಳ್ಳೆಯದು ಎಂದರು.
ಈ ವೇಳೆ ಶಾಸಕ ಎಸ್.ಎ.ರವೀಂದ್ರನಾಥ್ ಮಾತನಾಡಿ, ನನಗೂ ಅಂಬೇಡ್ಕರ್ ಅವರ ಮೇಲೆ ಪ್ರೀತಿ ಇದೆ. ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ 2010ರಲ್ಲಿ ಅಂದಿನ ಸಮಾಜಕಲ್ಯಾಣ ಸಚಿವ ವೈ.ನಾರಾಯಣಸ್ವಾಮಿ ಭೂಮಿ ಪೂಜೆ ಮಾಡಿದ್ದರು. ಆ ಭೂಮಿ ಹಾಗೆಯೇ ಇದೆ. ಆದ್ದರಿಂದ ಅಲ್ಲಿ ಅಂಬೇಡ್ಕರ್ ಭವನ ನಿರ್ಮಿಸಿ. ಇಲ್ಲಿರುವ ನಿವೇಶನದಲ್ಲಿ ಸರ್ಕಾರಿ ಶಾಲೆ ಆರಂಭಿಸುವ ಉದ್ದೇಶವಿದೆ. ಆದ್ದರಿಂದ ಈ ಜಾಗವನ್ನು ಶೈಕ್ಷಣಿಕ ಉದ್ದೇಶಕ್ಕಾಗಿಯೇ ಬಿಟ್ಟುಕೊಡಿ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಯಿಸಿದ ಸದಸ್ಯ ಹೆಚ್.ಜಿ.ಉಮೇಶ್, ಸರ್ಕಾರಿ ಶಾಲೆ ನಿರ್ಮಿಸುವ ನಿಮ್ಮ ಆಶಯ ಖಂಡಿತ ಈಡೇರದು. ಮತ್ತೆ ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಯವರು ಪ್ರಭಾವ ಬೀರಿ ಈ ನಿವೇಶನ ಕಬಳಿಸಲಿದ್ದಾರೆ. ಆದ್ದರಿಂದ ದಯವಿಟ್ಟು ಅಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಅನುವು ಮಾಡಿಕೊಡಿ ಎಂದು ಶಾಸಕರಿಗೆ ಸಲಹೆ ನೀಡಿದರು.
ಈ ವೇಳೆ ಎಂ.ಹಾಲೇಶ್ ಮಾತನಾಡಿ, ಎಲ್ಲ ವರ್ಗದವರಿಗೂ ದನಿ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಒಬ್ಬ ಮೇಧಾವಿಯಾಗಿದ್ದಾರೆ. ಹೀಗಾಗಿ ಇಲ್ಲಿ ಅವರ ಹೆಸರಿನಲ್ಲಿ ಭವನ ಕಟ್ಟಿಸುವುದರಿಂದ ಯಾರಿಗೂ ತೊಂದರೆಯಾಗುವುದಿಲ್ಲ ಎಂದರು.
ಆಗ ಶಾಸಕ ರವೀಂದ್ರನಾಥ್ ಮಾತನಾಡಿ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ತಮ್ಮ ವಿರೋಧವಿದೆ ಎಂದು ಸರ್ಕಾರಕ್ಕೆ ವರದಿ ನೀಡಿ ಎಂದು ಆಯುಕ್ತ ಮಂಜುನಾಥ್ ಬಳ್ಳಾರಿಗೆ ಸೂಚಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಮೇಯರ್ ಶೋಭಾ ಪಲ್ಲಾಗಟ್ಟೆ ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ, ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದರು.
ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಈಗಾಗಲೇ ಪಾಲಿಕೆಯಿಂದ ಪ್ರತಿ ವಾರ್ಡ್ಗೆ ಒಂದರಂತೆ ಮನೆ, ಮನೆ ಕಸ ಸಂಗ್ರಹಕ್ಕೆ ಟಿಪ್ಪರ್ ಕಳುಹಿಸಿ, ಮನೆಗೆ 30 ರೂ.ಗಳಂತೆ ಶುಲ್ಕ ಸಂಗ್ರಹಿಸಲಾಗುತ್ತಿದೆ. ಅದರಂತೆ ಹೋಟೆಲ್, ಬೇಕರಿ, ಅಂಗಡಿ ಅವರಿಂದಲೂ ಕಸ ಸಂಗ್ರಹಕ್ಕೆ ಕಸ ಉತ್ಪತ್ತಿ ಆಗುವುದರ ಆಧಾರದ ಮೇಲೆ ಹೊರೆಯಾಗದಂತೆ ಶುಲ್ಕ ನಿಗದಿ ಪಡಿಸಿ ಟಿಪ್ಪರ್ ಕಳುಹಿಸಿದರೆ ಒಳ್ಳೆಯದು. ಏಕೆಂದರೆ ಪೌರಕಾರ್ಮಿಕರು ಬೆಳಿಗ್ಗೆ ಹೋಗಿ ಕಸ ಹೊಡೆದು ಸ್ವಚ್ಛತೆ ಮಾಡಿ ಬಂದಿರುತ್ತಾರೆ. ಆದರೆ, ಅಂಗಡಿ, ಹೋಟೆಲ್, ಬೇಕರಿಯವರು ಆ ನಂತರ ಬಂದು ಕಸವನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಕಸದ ರಾಶಿ ಬಿಳುತ್ತವೆ. ಆದ್ದರಿಂದ ಟಿಪ್ಪರ್ ಕಳುಹಿಸಿ ಸ್ವಚ್ಛತೆ ಕಾಪಾಡಬೇಕೆಂದು ಸಲಹೆ ನೀಡಿದರು.
ಪೌರಕಾರ್ಮಿಕರಿಗೆ ಇಂದಿರಾ ಕ್ಯಾಂಟೀನ್ನಲ್ಲಿ ಉಪಹಾರಕ್ಕೆ ವ್ಯವಸ್ಥೆ ಮಾಡಬೇಕೆಂದು ದಿನೇಶ್ ಕೆ. ಶೆಟ್ಟಿ ಸಲಹೆ ನೀಡುತ್ತಿದ್ದಂತೆ ಮಧ್ಯ ಪ್ರವೇಶಿಸಿದ ಹೆಚ್.ಜಿ.ಉಮೇಶ್, ಪೌರ ಕಾರ್ಮಿಕರಿಗೆ ಉಪಹಾರಕ್ಕೆ ಇಂತಿಷ್ಟು ಹಣ ನೀಡಬೇಕೆಂಬ ಆದೇಶವಿದೆ. ಅದು ಪೌರ ಕಾರ್ಮಿಕರಿಗೆ ತಲುಪುತ್ತಿದೆಯೇ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಆಯುಕ್ತ ಮಂಜುನಾಥ್ ಬಳ್ಳಾರಿ ಖಾಯಂ ಪೌರ ಕಾರ್ಮಿಕರಿಗೆ ಉಪಹಾರಕ್ಕೆ ಪ್ರತಿ ದಿನ 20 ರೂ. ನೀಡಲಾಗುತ್ತಿದೆ. ಪಾಲಿಕೆ ಸಭೆ ಅನುಮತಿ ನೀಡಿದರೆ, ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರಿಗೂ ಇಂದಿರಾ ಕ್ಯಾಂಟೀನ್ನಲ್ಲಿ ಉಪಹಾರಕ್ಕೆ ವ್ಯವಸ್ಥೆ ಮಾಡಲಾಗುವುದು. ಅಂಗಡಿ, ಬೇಕರಿ, ಹೋಟೆಲ್ಗಳಿಂದ ಕಸ ಸಂಗ್ರಹಕ್ಕೆ ಇಂತಿಷ್ಟು ಶುಲ್ಕ ನಿಗದಿ ಮಾಡಿ, ಟಿಪ್ಪರ್ ಕಳುಹಿಸಲಾಗುವುದು ಎಂದರು.
ಪಾಲಿಕೆ ಸದಸ್ಯ ಎಂ.ಹಾಲೇಶ್ ಮಾತನಾಡಿ, ಸ್ಥಾಯಿ ಸಮಿತಿ ಸಭೆ ನಡೆಯುವ ಸಂದರ್ಭದಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿ ಚಂದ್ರಶೇಖರ್ ಸುಂಖದ್ ಕಚೇರಿಯಲ್ಲಿದ್ದರೂ ಸಭೆಗೆ ಬರದೇ ಅಗೌರವ ತೋರಿಸಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಹೆಚ್.ಜಿ.ಉಮೇಶ್ ಮಾತನಾಡಿ, ಕೆಲ ಅಧಿಕಾರಿಗಳ ವರ್ತನೆಯಿಂದ ಪಾಲಿಕೆಯೇ ಅಲ್ಲೋಲ, ಕಲ್ಲೋಲವಾಗುತ್ತಿದೆ. ವಾಣಿಜ್ಯ ಪರವಾನಿಗೆಗಾಗಿ ಸಾರ್ವಜನಿಕರು ಅಲೆದಲೆದು ಸಾಕಾಗಿದ್ದಾರೆ. ಇದಕ್ಕೆ 30 ವರ್ಷಗಳಿಂದ ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಒಂದೇ ಕಡೆ ಜಾಂಡಾ ಹೂಡಿರುವ ಅಧಿಕಾರಿಗಳೇ ಕಾರಣವಾಗಿದ್ದಾರೆ. ಆದ್ದರಿಂದ ಆ ಆಧಿಕಾರಿಗಳನ್ನು ಬೇರೆ, ಬೇರೆ ಕಡೆಗೆ ವರ್ಗಾಯಿಸಬೇಕು ಹಾಗೂ ತಪ್ಪು ಮಾಡುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ವೇಳೆ ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ ಮಾತನಾಡಿ, ಸ್ವಚ್ಛತೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರುವ ಹಾಗೂ ಮಹತ್ವದ ಸಭೆಗಳಿಗೆ ಗೈರಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹಲವರಿಗೆ ನೋಟೀಸ್ ನೀಡಲಾಗಿದೆ. ಓರ್ವ ಕಂಪ್ಯೂಟರ್ ಆಪರೇಟರ್ ಅನ್ನು ವಜಾ ಮಾಡಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಯೊಬ್ಬರ ವಿರುದ್ಧ ಇಲಾಖಾ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಪಾಲಿಕೆ ಸದಸ್ಯ ಪಿ.ಕೆ.ಲಿಂಗರಾಜ್ ಮಾತನಾಡಿ, ಕೋಳಿ, ಮಟನ್ ಅಂಗಡಿಗಳಲ್ಲಿ ಸ್ವಚ್ಛತೆ ಲ್ಲದ ಕಾರಣ ಸಾಕಷ್ಟು ಕಾಯಿಲೆ ಹರಡುತ್ತಿದೆ. ಮಾಂಸದ ತ್ಯಾಜ್ಯವನ್ನು ಚರಂಡಿ ಸೇರಿದಂತೆ ಎಲ್ಲೆಂದರಲ್ಲಿ ಸುರಿಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ದಿನೇಶ್ ಕೆ. ಶೆಟ್ಟಿ, ಬಾರ್ಲೈನ್ ರಸ್ತೆಯಲ್ಲಿರುವ ಚಿಕನ್, ಮಟನ್ ಅಂಗಡಿಯವರು ಅರುಣಾ ಟಾಕೀಸ್ ರಸ್ತೆಯ ರೈಲ್ವೆ ಟ್ರ್ಯಾಕ್ ಬಳಿ ವೇಸ್ಟೇಜ್ ತಂದು ಸುರಿಯುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ಸಂದರ್ಭದಲ್ಲಿ ಅಬ್ದುಲ್ ಲತೀಫ್ ಮಾತನಾಡಿ, ಮಾಂಸದ ಅಂಗಡಿಗಳಿಗೆ ಪರವಾನಿಗೆ ಕೊಡೊಬೇಕಾದರೆನೆ, ಅಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಾ ಸಂಗ್ರಹಣೆಗೆ ವಾಹನ ಕಳುಹಿಸಲು ಶುಲ್ಕ ವಸೂಲಿ ಮಾಡಿದರೆ ಈ ಸಮಸ್ಯೆ ಬಗೆಹರಿಯಲಿದೆ. ಆದ್ದರಿಂದ ಈ ನಿಟ್ಟಿನಲ್ಲಿ ಪಾಲಿಕೆ ಗಮನ ಹರಿಸಬೇಕು. ಅಕಸ್ಮಾತ್ ಮಾಂಸದ ಅಂಗಡಿ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿದರೆ, ಪರವಾನಿಗೆ ರದ್ದು ಪಡಿಸುವುದಾಗಿ ಎಚ್ಚರಿಕೆ ನೀಡಬೇಕೆಂದು ಒತ್ತಾಯಿಸಿದರು.ಸಭೆಯಲ್ಲಿ ಉಪ ಮೇಯರ್ ಚಮನ್ಸಾಬ್, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
