ತುಮಕೂರು:
ದೇಶವನ್ನು ಕೊರೊನಾದಿಂದ ಸ್ವಾತಂತ್ರಗೊಳಿಸುವ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮಾಜಿ ಶಾಸಕ ಡಾ.ರಫೀಕ್ ಅಹಮದ್ ತಿಳಿಸಿದರು.ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತಿದ್ದ ಅವರು, ಕಳೆದ 73 ವರ್ಷಗಳ ಹಿಂದೆ ನಮ್ಮ ದೇಶದ ಹಿರಿಯ ಸ್ವಾತಂತ್ರ ಹೋರಾಟಗಾರರು ಬ್ರಿಟಿಷರ ವಿರುದ್ದ ಹೋರಾಡಿ ದೇಶವನ್ನು ಅವರ ಕಪಿ ಮುಷ್ಠಿಯಿಂದ ಮುಕ್ತಗೊಳಿಸಿದ ರೀತಿ, ದೇಶದ ಆರ್ಥಿಕ, ಸಾಮಾಜಿಕ ವ್ಯವಸ್ಥೆಯನ್ನು ಕುಸಿಯುವಂತೆ ಮಾಡಿರುವ ಕೊರೊನಾ ವಿರುದ್ದ ನಾವೆಲ್ಲರೂ ಹೋರಾಡಿ, ದೇಶವನ್ನು ಕೋವಿಡ್-19 ಮುಕ್ತಗೊಳಿಸುವ ಕೆಲಸ ಆಗಬೇಕಾಗಿದೆ ಎಂದರು.
ಇಂದು ಪ್ರಪಂಚದ ಅಭಿವೃದ್ದಿಶೀಲರಾಷ್ಟ್ರಗಳಲ್ಲಿ ಮಂಚೂಣಿಯಲ್ಲಿದ್ದರೆ ಅದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಅವರ ತ್ಯಾಗ, ಬಲಿದಾನಗಳೇ ಕಾರಣ. ನೆಹರು, ಇಂದಿರಾಗಾಂಧಿ, ಮೌಲಾನ ಅಬ್ದುಲ್ ಕಲಂ ಅಜಾದ್, ಸರದಾರ್ ವಲ್ಲಭಾಯ್ ಪಟೇಲ್ ಅವರಂತಹ ಅನೇಕ ನಾಯಕರು ಹತ್ತಾರು ವರ್ಷಗಳ ಕಾಲ ಮನೆ, ಮಠ ತೊರೆದು ಸ್ವಾತಂತ್ರ ಚಳವಳಿಯಲ್ಲಿ ಅಹಿಂಸಾತ್ಮಕ ಹೋರಾಟ ನಡೆಸಿದ್ದರ ಫಲವಾಗಿ ನಾವೆಲ್ಲರೂ ಸ್ವಾತಂತ್ರ್ಯವನ್ನು ಅನುಭವಿಸುವಂತಾಗಿದೆ ಎಂದರು.
ಮಹಾನಗರಪಾಲಿಕೆ ಮೇಯರ್ ಫರೀದಾ ಬೇಗಂ ಮಾತನಾಡಿ, ದೇಶದ ಅಭಿವೃದ್ದಿಗೆ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರ. ಕೊರೊನಾ ಮಹಾಮಾರಿಯಿಂದಾಗಿ ಉಂಟಾಗಿರುವ ಆರ್ಥಿಕ ಹಿನ್ನೆಡೆಯನ್ನು ನಾವೆಲ್ಲರೂ ಒಗ್ಗೂಡಿ ಹೆದರಿಸುವ ಮೂಲಕ ದೇಶವನ್ನು ಅಭಿವೃದ್ದಿ ರಾಷ್ಟ್ರಗಳ ಪಾಲಿಗೆ ಸೇರಿಸುವುದಲ್ಲದೆ, ಕೊರೊನ ಮುಕ್ತ ರಾಷ್ಟ್ರವಾಗಿಸುವ ನಿಟ್ಟಿನಲ್ಲಿ ಮುನ್ನೆಡೆಯಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರ ನಿರಂತರ ಹೋರಾಟದ ಫಲವಾಗಿ ಇಂದು ಭಾರತದ ಜನತೆ ಸ್ವಾತಂತ್ರವನ್ನು ಅನುಭವಿಸುವಂತಾಗಿದೆ. ಮಕ್ಕಳಿಲ್ಲದೆ ಸ್ವಾತಂತ್ರ ದಿನಾಚರಣೆ ಆಚರಿಸುವಂತಾಗಿರುವುದು ದುರದೃಷ್ಟಕರ. ಅಲ್ಲದೆ ಇಂತಹ ಸಂಕಷ್ಟದಲ್ಲಿಯೂ ಬಿಜೆಪಿ ಪಕ್ಷ ಭ್ರಷ್ಟಾಚಾರದಲ್ಲಿ ತೊಡಗಿರುವುದು ನಾಚಿಕೆಪಡುವಂತಹ ವಿಚಾರವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಸ್.ಷಪಿ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಟೋರಾಜು, ಮೆಹಬೂಬ ಪಾಷ, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರುದ್ರೇಶ್, ನಗರ ಅಧ್ಯಕ್ಷೆ ನಾಗಮಣಿ, ನರಸೀಯಪ್ಪ, ಮಾಜಿ ಶಾಸಕ ಆರ್.ನಾರಾಯಣ, ಒಬಿಸಿ ಘಟಕದ ಪುಟ್ಟರಾಜು, ಗೀತಮ್ಮ, ಟಿ.ಬಿ.ಮಲ್ಲೇಶ್, ಮಂಜಣ್ಣ, ಕುಮಾರಸ್ವಾಮಿ, ಯುವ ಕಾಂಗ್ರೆಸ್ನ ಶರತ್ ಸೇರಿದಂತೆ ಹಲವರು ಭಾಗವಹಿಸಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/08/Congress-Office.gif)