ತುಮಕೂರು
ನಗರದ ಅಭಿವೃದ್ಧಿಗೆ ಹೊಸ ಆಯಾಮ ನೀಡುವ ಜವಾಬ್ದಾರಿ ಹೊತ್ತಿರುವ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಕಳೆದ ಹಲವು ತಿಂಗಳಿಂದ ಜಡ್ಡುಗಟ್ಟಿತ್ತು. ಮನೆ ಲೈಸೆನ್ಸ್ ಮಂಜೂರಾತಿ ವಿಳಂಬ, ನಕ್ಷೆ ಅನುಮೋದನೆ ಮತ್ತಿತರ ನಗರ ಅಭಿವೃದ್ಧಿಗೆ ಸಂಬಂಧ ವಿಚಾರದಲ್ಲಿ ಅಧಿಕಾರಿಗಳು ವಿಳಂಬನೀತಿ ಅನುಸರಿಸುತ್ತಿರುವ ದೂರಿದ್ದು, ಈ ಲೋಪವನ್ನು ಸರಿಪಡಿಸಿ ಪ್ರಾಧಿಕಾರವನ್ನು ಚುರುಕುಗೊಳಿಸುವ ಕಾರ್ಯವನ್ನು ಆದ್ಯತೆ ಮೇರೆಗೆ ಮಾಡಲಾಗುವುದು.., ಇದು ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ ಅವರ ನುಡಿಗಳು.
ಪ್ರಾಧಿಕಾರಕ್ಕೆ ಹೊಸ ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಪ್ರಜಾಪ್ರಗತಿ ಪತ್ರಿಕೆಗೆ ವಿಶೇಷ ಸಂದರ್ಶನ ನೀಡಿದ ಅವರು ತುಮಕೂರು ನಗರ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಾಧಿಕಾರದಿಂದ ಕೈಗೊಳ್ಳುವ ಯೋಜನೆಗಳ ಬಗೆಗೆ ತಮ್ಮ ಅನಿಸಿಕೆ ಹಂಚಿಕೊಂಡರು.
ಸಾರ್ವಜನಿಕರಿಗಾಗುತ್ತಿರುವ ಕಿರಿಕಿರಿ ತಪ್ಪಿಸಲು ಕ್ರಮ
ಕಟ್ಟಣ ನಿರ್ಮಾಣಕ್ಕೆ ಲೈಸೆನ್ಸ್ ನೀಡಿಕೆ, ನವೀಕರಣ, ಹೊಸ ಲೇಔಟ್ಗಳ ಅನುಮೋದನೆ, ರಸ್ತೆ, ಉದ್ಯಾನವನ ಅಭಿವೃದ್ಧಿ, ಪ್ರಾಧಿಕಾರದ ವತಿಯಿಂದಲೇ ಲೇಔಟ್ಗಳ ನಿರ್ಮಾಣ, ವಸತಿ ರಹಿತರಿಗೆ ನಿವೇಶನ ಹಂಚಿಕೆ ಇವು ನಗರಾಭಿವೃದ್ಧಿ ಪ್ರಾಧಿಕಾರದ ಮೂಲಭೂತ ಕಾರ್ಯಗಳಾಗಿದ್ದು, ಪ್ರಾಧಿಕಾರದಿಂದ ಸಾರ್ವಜನಿಕರ ಕೆಲಸ ಕಾರ್ಯ ವಿಳಂಬವಾಗುತ್ತಿರುವ ಬಗ್ಗೆ ವ್ಯಾಪಕ ದೂರಿದೆ. ಜನರಿಗೆ ಆಗುತ್ತಿರುವ ಕಿರಿಕಿರಿಯನ್ನು ತಪ್ಪಿಸುವುದು ನನ್ನ ಮೊದಲ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನೂತನವಾಗಿ ನೇಮಕವಾಗುವ ಸದಸ್ಯರು, ಶಾಸಕರು, ಸಂಸದರು, ಅಧಿಕಾರಿಗಳನ್ನೊಳಗೊಂಡಂತೆ ಎಲ್ಲರನ್ನು ವಿಶ್ವಾಸಕ್ಕೆ ಪಡೆದು ಪ್ರಾಧಿಕಾರದ ಸುಗಮ ಕಾರ್ಯಚರಣೆಗೆ ಶ್ರಮಿಸುತ್ತೇನೆ.
ಸಿದ್ಧಗಂಗಾ ಶ್ರೀ ಹೆಸರಲ್ಲಿ ಮುತ್ಸಂದ್ರ ವಸತಿ ನಿವೇಶನ ಯೋಜನೆ
ನಗರಾಭಿವೃದ್ಧಿ ಪ್ರಾಧಿಕಾರದಿಂದ ಮುತ್ಸಂದ್ರದಲ್ಲಿ ವಸತಿ ನಿವೇಶನ ನಿರ್ಮಿಸುವ ಯೋಜನೆ ನನೆಗುದಿಗೆ ಬಿದ್ದಿದೆ. ಈ ಯೋಜನೆಗೆ ಮರುಚಾಲನೆಗೊಳಿಸಲಾಗುವುದು.
ಗುಬ್ಬಿಗೇಟ್ನಿಂದ ಶಿರಾಗೇಟ್ವರೆಗೆ ರಸ್ತೆ ಅಭಿವೃದ್ಧಿ
ಪ್ರಾಧಿಕಾರದ ಸುಪರ್ದಿಯಲ್ಲಿರುವ ಕ್ಯಾತ್ಸಂದ್ರದಿಂದ ಗುಬ್ಬಿಗೇಟ್ವರೆಗಿನ ರಿಂಗ್ ರಸ್ತೆ ಅಭಿವೃದ್ಧಿ ಸ್ಮಾರ್ಟ್ ಸಿಟಿ ಅನುದಾನದಡಿ ಆಗುತ್ತಿದ್ದು, ಗುಬ್ಬಿಗೇಟ್ನಿಂದ ಶಿರಾಗೇಟ್ವರೆಗಿನ ರಸ್ತೆ ಅಭಿವೃದ್ಧಿಯನ್ನು ಸ್ಮಾರ್ಟ್ ಸಿಟಿಯ 75 ಕೋಟಿ ಅನುದಾನದಡಿ ಕೈಗೆತ್ತಿಕೊಳ್ಳಲು ಸಂಸದರು ಸೂಚಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2020/08/bs-nagesh.gif)