ಬೆಂಗಳೂರು
ಹಿಂಸಾಚಾರಕ್ಕೆ ತುತ್ತಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಒಂದೆರಡು ದಿನ ಹೊರಗಿನ ನಾಯಕರು ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಸದಾನಂದಗೌಡ ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಅಸ್ಸಾಂ ಮತ್ತು ಇತರೆಡೆ ಪ್ರತಿಭಟನೆಗಳು ನಡೆದು ಎರಡು ಮೂರು ದಿನಗಳ ನಂತರ ಮಂಗಳೂರಿನಲ್ಲಿ ಯೋಜಿತ ರೀತಿಯಲ್ಲಿ ಪ್ರತಿಭಟನೆ ನೀಡಿದೆ. ಪ್ರತಿಭಟನೆಗೆ ಕೇರಳದಿಂದ ಯುವಕರನ್ನು ಕರೆಸಿಕೊಳ್ಳಲಾಗಿದೆ. ಕಾಂಗ್ರೆಸ್ ಇದಕ್ಕೆ ಸಹಾಯ ಮಾಡಿದೆ. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಶಾಸಕ ಯು.ಟಿ.ಖಾದರ್ ಬೆಂಕಿಗೆ ತುಪ್ಪ ಸುರಿದಂತೆ ಹಿಂಸಾಚಾರವನ್ನು ಪ್ರಚೋದಿಸಿದ್ದಾರೆ. ಇದನ್ನೇ ಸಮಾಜದ್ರೋಹಿಗಳು ಲಾಭ ಪಡೆದಿದ್ದಾರೆ. ಖಾದರ್ ಅವರು ತಮ್ಮ ರಾಜಕೀಯ ಅಸ್ತಿತ್ವಕ್ಕೋಸ್ಕರ ಇಂತಹ ಪ್ರಚೋದನೆಯನ್ನು ಮಾಡಿದ್ದಾರೆ ಎಂದು ಹೇಳಿದರು.
ಸದ್ಯ ಮಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿರುವ ಬಗ್ಗೆ ವರದಿಯಾಗಿಲ್ಲ. ಇದೀಗ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಪರಿಸ್ಥಿತಿ ಅವಲೋಕನಕ್ಕೆ ಮಂಗಳೂರಿಗೆ ತೆರಳುವುದಾಗಿ ಗೊತ್ತಾಗಿದೆ. ಆದರೆ, ಈ ಮುಖಂಡರಿಗೆ ಯಾವುದೇ ಕಾರಣಕ್ಕೂ ಜಿಲ್ಲೆ ಪ್ರವೇಶಿಸಲು ಅವಕಾಶ ನೀಡಬಾರದು. ಇದರಿಂದ ಯುವಕರು ಮತ್ತಷ್ಟು ಪ್ರಚೋದಿಸಲ್ಪಟ್ಟು, ಕಾನೂನು-ಸುವ್ಯವಸ್ಥೆಗೆ ಭಂಗ ಉಂಟಾಗುವ ಅಪಾಯವಿದೆ ಎಂದು ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಯಿಂದ ದೇಶದಲ್ಲಿರುವ ಮುಸ್ಲೀಮರು ಸೇರಿದಂತೆ ಯಾವುದೇ ಜನರಿಗೆ ತೊಂದರೆಯಿಲ್ಲ. ಇಷ್ಟಕ್ಕೂ ಕಾಯ್ದೆ, ದೇಶದಲ್ಲಿನ ನಾಗರೀಕರಿಗೆ ಸಂಬಂಧಿಸಿದ್ದಲ್ಲ. ನೆರೆದೇಶಗಳಲ್ಲಿ ಕಿರುಕುಳ-ದೌರ್ಜನ್ಯಕ್ಕೆ ಒಳಗಾದ ಅಲ್ಪಸಂಖ್ಯಾತರಿಗೆ ಜನರಿಗೆ ಪೌರತ್ವ ನೀಡಲು ತಂದಿರುವ ಕಾಯ್ದೆಯಾಗಿದೆ ಎಂದು ಸದಾನಂದಗೌಡ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/09/sadanandagowda-kdeE-621x41.gif)