ಚಳ್ಳಕೆರೆ
ಕಾರ್ತಿಕ ಸೋಮವಾರ ಹಿನ್ನೆಲ್ಲೆಯಲ್ಲಿ ನಗರದ ವಿವಿಧ ಭಾಗಗಳಿಂದ ರೈತ ಸಮೂಹ ತಮ್ಮ ಎತ್ತುಗಳನ್ನು ಭವ್ಯವಾಗಿ ಅಲಂಕರಿಸಿ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಗ್ರಾಮ ದೇವರಾದ ಶ್ರೀವೀರಭದ್ರಸ್ವಾಮಿ ದೇವಸ್ಥಾನಕ್ಕೆ ಕರೆತಂದು ಅಲ್ಲಿ ಪೂಜೆ ಮಾಡಿಸುವ ಮೂಲಕ ಬಸವನ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಚಳ್ಳಕೆರೆ ನಗರ ವ್ಯಾಪ್ತಿಯ ಚಿತ್ರಯ್ಯನಹಟ್ಟಿ, ಕಾಟಪ್ಪನಹಟ್ಟಿ, ಮದಕರಿನಗರ, ಗಾಂಧೀನಗರ ಮುಂತಾದ ಕಡೆಯಿಂದ ಎತ್ತುಗಳನ್ನು ಅಲಂಕರಿಸಿ ತರಲಾಗಿತ್ತು. ಇಡೀ ವರ್ಷ ನಮ್ಮೊಂದಿಗೆ ದುಡಿಯುವ ಜೀವನಕ್ಕೆ ಆಧಾರವಾಗಿರುವ ಈ ಎತ್ತುಗಳ ಮೇಲೆ ನಮಗೆ ಅಪಾರವಾದ ಗೌರವ ಹಾಗೂ ಶ್ರದ್ದೆ ಇದೆ. ಇಡೀ ವರ್ಷ ನಮ್ಮೊಂದಿಗೆ ಇವುಗಳು ಸಹ ದುಡಿಮೆಯಲ್ಲಿ ಸಹಕಾರ ನೀಡುತ್ತಾವೆ. ಈ ದಿವಸ ಅತ್ಯಂತ ಪುಣ್ಯದಿನವಾಗಿದ್ದು, ನಮ್ಮ ಸಂಪ್ರದಾಯದಂತೆ ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಎತ್ತುಗಳ ಹಬ್ಬವನ್ನು ಆಚರಿಸುತ್ತಾ ಬಂದಿರುವುದು ಎಂದು ಎತ್ತಿನ ಮಾಲೀಕರಾದ ಮದಕರಿನಗರದ ಮಂಜಣ್ಣ, ತಿಪ್ಪೇಸ್ವಾಮಿ, ರವಿ, ವೀರಣ್ಣ, ಸತ್ಯಪ್ಪ ಮುಂತಾದವರು ತಮ್ಮ ಸಂತಸವನ್ನು ಪತ್ರಿಕೆಯೊಂದಿಗೆ ಹಂಚಿಕೊಂಡರು.
ನಗರದ ವಿವಿಧ ರಸ್ತೆಗಳ ಎರಡೂ ಬಂದಿಯಲ್ಲಿ ಅಲಂಕಾರಗೊಂಡ ಎತ್ತುಗಳ ಗಾಂಭಿರ್ಯ ನಡೆಯನ್ನು ವೀಕ್ಷಿಸಲು ಸಾರ್ವಜನಿಕರು ಸಂತಸ ವ್ಯಕ್ತ ಪಡಿಸಿದರು. ಹಲವಾರು ಬಾರಿ ವಿವಿಧ ಕಾರ್ಯಕ್ರಮಗಳನ್ನು ಕಾಣುವ ಜನತೆಗೆ ವಿಶೇಷವಾಗಿ ಎತ್ತುಗಳು ಸಹ ಹೂ, ಬಲೂನ್, ಟೇಪ್, ಗೆಜ್ಜೆ, ಕುಚ್ಚು, ಜೂಲು, ಬಣ್ಣ ಬಣ್ಣದ ಬಟ್ಟೆ ಹೊದಿಸಿ ಮೆರವಣಿಗೆಯನ್ನು ಸಾಗುತ್ತಿದ್ದು, ಇಲ್ಲಿನ ನೆಹರೂ ವೃತ್ತದಲ್ಲಿ ಎತ್ತಿನ ಮಾಲೀಕರು ಸಂತಸದಿಂದ ಪಟಾಕಿ ಸಿಡಿಸಿದರು. ಒಟ್ಟಿನಲ್ಲಿ ಎತ್ತಿನ ಹಬ್ಬ ಬಾರಿ ವಿಜೃಂಭಣೆಯಿಂದ ಕೂಡಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
