ಹುಳಿಯಾರು
ಹುಳಿಯಾರಿನ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿ ಏರ್ಪಡಿಸಿದ್ದ ಇಲ್ಲಿನ ಶ್ರೀ ಅಯ್ಯಪ್ಪಸ್ವಾಮಿಯವರ ಪಡಿಪೂಜೆಯು ಶ್ರದ್ಧಾಭಕ್ತಿಯಿಂದ ನೆರವೇರಿತು.
ಪಡಿಪೂಜೆಯ ಅಂಗವಾಗಿ ಉತ್ಸವ ಮೂರ್ತಿಗೆ ವಿವಿಧ ಪುಷ್ಫ ರಾಶಿಯಿಂದ ವಿಶೇಷ ಅಲಂಕಾರ ಮಾಡಿ ಕದಲಿ ಅಲಂಕಾರದಲ್ಲಿ ದೇವರ ದರ್ಶನ ವ್ಯವಸ್ಥೆ ಮಾಡಿದ್ದು ಈ ಬಾರಿಯ ವಿಶೇಷವಾಗಿತ್ತು. ಅಲ್ಲದೆ ಪ್ರತಿವರ್ಷದಂತೆ ಗರ್ಭಗುಡಿ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಮುಂತಾದ ಪೂಜಾ ವಿಧಿವಿಧಾನಗಳನ್ನು ಭಕ್ತಿಭಾವದಿಂದ ನಡೆಸಲಾಯಿತು.
18 ಮೆಟ್ಟಿಲುಗಳಲ್ಲಿ ಶ್ರೀ ಸ್ವಾಮಿಯವರು ಐಕ್ಯವಾಗಿರುತ್ತಾರೆ ಎಂಬ ಪ್ರತೀತಿಯಿದ್ದು ದೇವಸ್ಥಾನದ 18 ಮೆಟ್ಟಿಲುಗಳಲ್ಲಿ 18 ಪೂರ್ಣ ಕುಂಭಕಳಸ ಪ್ರತಿಷ್ಠಾಪಿಸಿ ದೀಪಾಲೆ ಕಂಬ, ಕರ್ಪೂರ ದೀಪ ಹಾಗೂ ಬಗೆಬಗೆಯ ಪುಷ್ಪಗಳೊಂದಿಗೆ ಸಿಂಗರಿಸಿ ‘ವಣಂತಿರುಪಡಿ’ ಎಂಬ ಪ್ರಸಿದ್ಧ ಪಡಿಹಾಡು ಮೂಲಕ 18 ಮೆಟ್ಟಿಲುಗಳನ್ನು ವಿಧಿವತ್ತಿನಿಂದ ಪೂಜಿಸಿ ಒಂದೊಂದೇ ಕಲಶದ ಜಲದಿಂದ ಶ್ರೀ ಸ್ವಾಮಿಯವರಿಗೆ ಅಭಿಷೇಕ ಮಾಡಲಾಯಿತು.
ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಕಾರದಲ್ಲಿ ಇಲ್ಲಿನ ಭಜನಾ ತಂಡಗಳು ಹಾಡಿದ ಹರಿದಾಸ ಕೀರ್ತನೆಗಳು ಹಾಗೂ ಅಯ್ಯಪ್ಪ ಮಾಲಾಧಾರಿಗಳು ಹಾಡಿದ ಅಯ್ಯಪ್ಪ ಗೀತೆಗಳ ಪಡಿ ಪೂಜೆಗೆ ಮೆರುಗು ತಂದಿತ್ತು. ಸರಿಸುಮಾರು 3 ತಾಸುಗಳ ಕಾಲ ಶ್ರೀ ಸ್ವಾಮಿಯವರಿಗೆ ನಡೆದ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರೆದಿದ್ದ ಭಕ್ತ ಸಮೂಹವನ್ನು ಅಕ್ಷರಶಃ ಭಕ್ತಿಪರವಶವನ್ನಾಗಿಸಿತ್ತು.
ಗುರುಸ್ವಾಮಿಗಳಾದ ಗೋಪಾಲಸ್ವಾಮಿ, ವೆಂಕಟೇಶ್ಸ್ವಾಮಿ, ಹೆಚ್.ಎಂ.ವೆಂಕಟೇಶ್ಸ್ವಾಮಿ, ಬಡ್ಡಿ ಪುಟ್ಟಸ್ವಾಮಿ, ರಾಘವೇಂದ್ರ, ಬೈರೇಶ್ ಹಾಗೂ ಉಮೇಶ್, ಮಂಜುನಾಥ, ಪೂಜಾರ್ ಸತೀಶ್, ಗುಂಡಣ್ಣ ಅಶೋಕ್ ಬಾಬು, ಮುಖ್ಯಪ್ರಾಣ ಭಜನಾ ಮಂಡಳಿಯ ಹೆಚ್.ಕೆ. ನಾಗರಾಜ್, ಎಚ್.ಎನ್.ಸತೀಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
